ಉಡುಪಿ: ಮಣಿಪಾಲ ಸಮೀಪದ ಮಂಚಿಕೆರೆ ಎಂಬಲ್ಲಿ ಭೂಮಿ ಬಿರುಕು ಬಿಟ್ಟಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ಭೂಮಿ ಬಿರುಕು ಬಿಟ್ಟಿದ್ದು ಏಕೆ ಎಂಬ ಬಗ್ಗೆ ಸಂಶೋಧನೆ ನಡೆಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಬಿರುಕು ರಮೇಶ್ ನಾಯಕ್ ಅವರ ಮನೆ ಹಾಗೂ ಬಾವಿಯನ್ನು ಹಾದುಹೋಗಿದ್ದು, ಗೋಡೆ, ಕಿಟಕಿ ಹಾಗೂ ನೆಲಹಾಸಿನಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ. ಪರಿಣಾಮ ಕುಟುಂಬದ ಸದಸ್ಯರು ಆತಂಕಕ್ಕೊಳಗಾಗಿದ್ದಾರೆ.
2014ರ ಜುಲೈನಲ್ಲಿ ಇದೇ ಸ್ಥಳದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ಬಿರುಕಿಗೆ ಉಷ್ಣತೆ ಕಾರಣ ಇರಬಹುದು ಎಂಬ ಅಭಿಪ್ರಾಯಕ್ಕೆ ಬಂದಿದ್ದರು. ಹಿಂದೆ ಒಂದೆರಡು ಇಂಚಿದ್ದ ಬಿರುಕು, ಈ ಬಾರಿ ಏಳೆಂಟು ಇಂಚು ಅಗಲವಾಗಿದೆ. ಸುಮಾರು 200 ಮೀಟರ್ ಉದ್ದವಿದೆ. ಭೂಮಿ ಒಂದು ಬದಿಯಲ್ಲಿ ಕುಸಿದಂತೆ ಕಾಣುತ್ತಿದೆ ಎಂದು ಸ್ಥಳೀಯರಾದ ಸುಧೀರ್ ನಾಯಕ್ ಪತ್ರಿಕೆಗೆ ತಿಳಿಸಿದರು.
ಕೂಡಲೇ ಭೂಗರ್ಭ ಶಾಸ್ತ್ರಜ್ಞರು ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಬೇಕು. ಹೆಚ್ಚಿನ ಅನಾಹುತವಾಗದಂತೆ ತಡೆಯಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.