
ಪಡುಬಿದ್ರಿ: ಖಾಸಗಿ ವಾಹಿನಿಯ ಬಿಗ್ಬಾಸ್ ಕಾರ್ಯಕ್ರಮದಲ್ಲಿ ದ್ವಿತೀಯ ಸ್ಥಾನಿಯಾಗಿ ಹೊರಹೊಮ್ಮಿದ ರಕ್ಷಿತಾ ಶೆಟ್ಟಿ ಅವರಿಗೆ ಬುಧವಾರ ಸಂಜೆ ಹುಟ್ಟೂರು ಪಡುಬಿದ್ರಿಯಲ್ಲಿ ಅಭಿಮಾನಿಗಳಿಂದ ಅದ್ದೂರಿ ಸ್ವಾಗತ ದೊರೆಯಿತು.
ಮಂಗಳೂರು ವಿಮಾನ ನಿಲ್ದಾಣದಿಂದ ಹುಟ್ಟೂರಿಗೆ ಬಂದ ಅವರನ್ನು ಸಂಜೆ 4 ಗಂಟೆಗೆ ಹೆಜಮಾಡಿ ಟೋಲ್ಗೇಟ್ ಬಳಿ ಅದ್ದೂರಿಯಾಗಿ ಸ್ವಾಗತಿಸಲಾಯಿತು. ರಕ್ಷಿತಾ ಕಾರಿನಲ್ಲಿ ಬರುತಿದ್ದಂತೆಯೇ ಅವರನ್ನು ಸುತ್ತುವರಿದ ಅಭಿಮಾನಿಗಳು ಜಯಘೋಷ ಕೂಗಿದರು. ಅಲ್ಲಿಂದ ತೆರೆದ ವಾಹನದಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಕನ್ನಂಗಾರ್, ಬೀಡು ಮೂಲಕ ಪಡುಬಿದ್ರಿ ಪೇಟೆವರೆಗೆ ರ್ಯಾಲಿ ನಡೆಯಿತು. ಹೆದ್ದಾರಿಯುದ್ದಕ್ಕೂ ಸಾವಿರಾರು ಮಂದಿ ರಕ್ಷಿತಾಗೆ ಕಾದು ಕುಳಿತಿದ್ದು, ಪಡುಬಿದ್ರಿ ಪೇಟೆಯಲ್ಲಿ ಜನಜಂಗುಳಿ ಸೇರಿತ್ತು.
ಜಾಥಾ ಉದ್ದಕ್ಕೂ ರಕ್ಷಿತಾ ಶೆಟ್ಟಿ ನೆರೆದಿದ್ದ ಜನರಿಗೆ ಕೈ ಬೀಸುತ್ತಾ ಚೆಂಡೆಯ ನಾದಕ್ಕೆ ನರ್ತತಿಸಿದರು. ರಾತ್ರಿ ಪಡುಬಿದ್ರಿಯ ಬೇಂಗ್ರೆ ಎಂಡ್ ಪಾಯಿಂಟ್ನಲ್ಲಿರುವ ರಕ್ಷಿತಾ ಮನೆ ಬಳಿ ಹುಟ್ಟೂರ ಸನ್ಮಾನ ನೆರೆವೇರಿತು.
ಬಂಗುಡೆ ಗಿಫ್ಟ್: ಜಾಥಾದಲ್ಲಿ ರಕ್ಷಿತಾ ಶೆಟ್ಟಿಗೆ ಮೀನುಗಾರ ಮಹಿಳೆಯೊಬ್ಬರು ಬಂಗುಡೆ ಮೀನು ನೀಡಿ ಸ್ವಾಗತಿಸಿದರು. ಅದನ್ನು ಸ್ವೀಕರಿಸಿ ಖುಷಿಯಲ್ಲಿ ಮೀನು ಪ್ರದರ್ಶಿಸಿ ನೃತ್ಯ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.