ADVERTISEMENT

ಕೇಂದ್ರ ಬಜೆಟ್‌: ಮಿಶ್ರ ಪ್ರತಿಕ್ರಿಯೆ

ರೈತರ ಪರವಾದ ಬಜೆಟ್‌: ಬಿಜೆಪಿ, ಉದ್ಯೋಗ ಸೃಷ್ಟಿ ಇಲ್ಲ: ಕಾಂಗ್ರೆಸ್‌

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2020, 15:00 IST
Last Updated 1 ಫೆಬ್ರುವರಿ 2020, 15:00 IST
   

ಉಡುಪಿ: ಶನಿವಾರ ಮಂಡನೆಯಾದ ಕೇಂದ್ರ ಬಜೆಟ್‌ಗೆ ರಾಜಕೀಯ ನಾಯಕರು, ಉದ್ಯಮಿಗಳು ಪ್ರತಿಕ್ರಿಯೆ ನೀಡಿದ್ದಾರೆ. ಈ ಬಾರಿಯ ಬಜೆಟ್‌ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ.

ಜನಪರ ಬಜೆಟ್‌– ಬಿಜೆಪಿ

ದೇಶದ ಆರ್ಥಿಕತೆಗೆ ಉತ್ತೇಜನ ನೀಡುವ ಹಾಗೂ ಜನಪರವಾದ ಬಜೆಟ್ ಅನ್ನು ಕೇಂದ್ರ ಸರ್ಕಾರ ಮಂಡಿಸಿದೆ. ಸೋಲಾರ್ ಚಾಲಿತ ಪಂಪ್ ಸೆಟ್, ಸೋಲಾರ್ ಪವರ್‌ಗ್ರಿಡ್ ಮೂಲಕ ವಿದ್ಯುತ್ ಉತ್ಪಾದನೆ, ಬರಡು ಭೂಮಿಯಲ್ಲಿ ಸೋಲಾರ್ ಫಲಕಗಳ ಅಳವಡಿಕೆ, ಕೃಷಿ ಉತ್ಪನ್ನಗಳ ಸಾಗಾಟಕ್ಕೆ ಕೃಷಿ ಉಡಾಣ್‌ ಯೋಜನೆ, ಪ್ರಧಾನಮಂತ್ರಿ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಗೆ 15 ಲಕ್ಷ ಕೋಟಿ ಮೀಸಲು, ಹಾಲು ಉತ್ಪಾದನೆ ದ್ವಿಗುಣಕ್ಕೆ ಆದ್ಯತೆ, 2022–23ಕ್ಕೆ200 ಲಕ್ಷ ಮೆಟ್ರಿಕ್ ಟನ್ ಮೀನು ಉತ್ಪಾದನೆ ಗುರಿ, ಸರ್ಕಾರಿ ಆಸ್ಪತ್ರೆಗಳೊಂದಿಗೆ ಮೆಡಿಕಲ್ ಕಾಲೇಜ್ ವಿಲೀನ ಉತ್ತಮ ನಿರ್ಧಾರಗಳು.

ADVERTISEMENT

- ಕುಯಿಲಾಡಿ ಸುರೇಶ್ ನಾಯಕ್‌, ಬಿಜೆಪಿ ಜಿಲ್ಲಾಧ್ಯಕ್ಷ

***

‘ನಿರೀಕ್ಷೆಈಡೇರಿಸುವಲ್ಲಿ ವಿಫಲ'

ಪ್ರಮುಖ ಉದ್ಯಮ ವಲಯಕ್ಕೆ ಉತ್ತೇಜನಕಾರಿ ಘೋಷಣೆಗಳಿಲ್ಲ. ಆಟೊಮೊಬೈಲ್, ರಿಯಲ್ಎಸ್ಚೇಟ್ ಸೇರಿ ಹಲವು ವಲಯಗಳನ್ನು ಕಡೆಗಣನೆ ಮಾಡಲಾಗಿದೆ. ಆದಾಯ ತೆರಿಗೆ ಇಳಿಕೆ ಬಗ್ಗೆ ಮಧ್ಯಮ ವರ್ಗದಲ್ಲಿ ಗೊಂದಲಗಳಿವೆ. ಹೂಡಿಕೆದಾರರಿಗೆ ಲಾಭಗಳಿಕೆಯ ಯೋಜನೆಗಳು ಇಲ್ಲˌ ಕಸ್ಟಮ್‌ ಸುಂಕ ಹೆಚ್ಚಳದಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಹೊರೆ ತಟ್ಟಲಿದೆ. ಎಲ್‌ಐಸಿ ಷೇರುಗಳ ಮಾರಾಟ ದೊಂದಿಗೆ ಕಾಂಗ್ರೆಸ್ ನಿರ್ಮಿಸಿದ ಸರ್ಕಾರಿಸಂಸ್ಥೆಗಳನ್ನು ಮಾರಾಟ ಮಾಡುತ್ತಿರುವುದು ಬಿಜೆಪಿ ಸಾಧನೆ.

– ಅಶೋಕ್ ಕುಮಾರ್ ಕೊಡವೂರು, ಕಾಂಗ್ರೆಸ್‌ ಜಿಲ್ಲಾ ಅಧ್ಯಕ್ಷ

***

‘ಜನ ವಿರೋಧಿ ಬಜೆಟ್’

ರೈತರ ಆದಾಯ ದ್ವಿಗುಣಕ್ಕೆಯಾವುದೇ ಆದಾರಗಳನ್ನು ನೀಡಿಲ್ಲ.ಸುಂಕ ಹೆಚ್ಚಳದಿಂದ ದಿನಬಳಕೆ ವಸ್ತುಗಳ ಬೆಲೆ ಹೆಚ್ಚಾಗಲಿದ್ದು, ಮಧ್ಯಮ ವರ್ಗಕ್ಕೆ ಹೆಚ್ಚಿನ ಹೊರೆ ಬೀಳಲಿದೆ. ಉದ್ಯೋಗ ಸೃಷ್ಟಿಗೆ ಒತ್ತು ನೀಡಿಲ್ಲ. ತೆರಿಗೆ ಪಾವತಿಯಲ್ಲಿ ಸ್ವಲ್ಪ ಬದಲಾವಣೆ ಬಿಟ್ಟರೆಹೊಸತನವಿಲ್ಲˌ ವಾರ್ಷಿಕ ಆದಾಯ 12 ಲಕ್ಷಕ್ಕಿಂತ ಕಡಿಮೆಯಿದ್ದಲ್ಲಿ ಹಿಂದಿನ ತೆರಿಗೆ ಪಾವತಿ ಪದ್ಧತಿಯೇ ಅನುಕೂಲವಾಗಲಿದೆ. ಉದ್ಯಮಿಗಳಿಗೆತೆರಿಗೆ ಇಳಿಕೆ ಹಾಗೂ ಬಡವರ ಬಗ್ಗೆ ಕಾಳಜಿ ಇಲ್ಲದ ಬಜೆಟ್ ಇದಾಗಿದೆ. ಎಲ್‌ಐಸಿ ಷೇರುಮಾರಾಟ ಮಾಡಲು ಕೇಂದ್ರ ಹೊರಟಿದ್ದು, ಆರ್ಥಿಕ ಪರಿಸ್ಥಿತಿ ಚಿಂತಾಜನಕವಾಗಿದೆ.

– ಭಾಸ್ಕರ ರಾವ್ ಕಿದಿಯೂರು, ಜಿಲ್ಲಾ ಕಾಂಗ್ರೆಸ್‌ ವಕ್ತಾರ

***

‘ಮೂಗಿಗೆ ತುಪ್ಪ‘

ಕುಸಿಯುತ್ತಿರುವ ಆರ್ಥಿಕತೆಯ ನಡುವೆ ಮೂಗಿಗೆ ತುಪ್ಪ ಸವರುವ ಕೆಲಸವನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾಡಿದ್ದಾರೆ. ಪೆಟ್ರೋಲ್, ಡಿಸೇಲ್ ಮತ್ತು ಇನ್ನಿತರ ವಸ್ತುಗಳ ಬೆಲೆ ಏರಿಕೆಯಾಗಲಿದ್ದು, ಜನ ಸಾಮಾನ್ಯರಿಗೆ ಉಪಯೋಗವಿಲ್ಲದ ಬಜೆಟ್ ಇದಾಗಿದೆ. ಉದ್ಯೋಗ ಸೃಷ್ಟಿಯ ಬಗ್ಗೆ ಬಜೆಟ್‌ನಲ್ಲಿ ಯಾವ ಯೋಜನೆ ಪ್ರಕಟಿಸಿಲ್ಲ. ಇದು ನಿರಾಶಾದಾಯಕ ಬಜೆಟ್.

– ಯೋಗೀಶ್‌.ವಿ.ಶೆಟ್ಟಿ, ಜೆಡಿಎಸ್‌ಜಿಲ್ಲಾಧ್ಯಕ್ಷರು

***

‘ಉದ್ಯೋಗ ಸೃಷ್ಟಿಗೆ ಒತ್ತು’

ಕೇಂದ್ರ ಸರ್ಕಾರದ ಬಜೆಟ್ ಜನಸಾಮಾನ್ಯರಿಗೆ ಪೂರಕವಾಗಿದೆ. ಬಜೆಟ್‌ನಲ್ಲಿ ಹೊಸ ಉದ್ಯಮದಾರರಿಗೆ ಐದು ವರ್ಷ ತೆರಿಗೆ ಕಡಿತಗೊಳಿಸಿರುವುದು ಯುವ ಪೀಳಿಗೆಗೆ ಹೊಸ ಉದ್ಯೋಗಗಳ ಸೃಷ್ಟಿಗೆ ಉತ್ತೇಜನ ಕೊಟ್ಟಂತಾಗಿದೆ.

–ದಿನಕರ ಬಾಬು,ಜಿಲ್ಲಾ ಪಂಚಾಯಿತಿ ಅಧ್ಯಕ್ಷ

***

‘ಜನಸ್ನೇಹಿ ಬಜೆಟ್’

ತೆರಿಗೆ ಸ್ಲಾಬ್ ಅನ್ನು ಶೇ 10 ಇಳಿಸಿರುವುದು ಮದ್ಯಮ ವರ್ಗಕ್ಕೆ ಲಾಭವಾಗಲಿದೆ. ಉಡಾಣ್‌ ಯೋಜನೆಯಲ್ಲಿ ವಿಮಾನ ನಿಲ್ದಾಣಗಳ ನಿರ್ಮಾಣದಿಂದ ಸಾಮಾನ್ಯರಿಗೆ ವಿಮಾನಯಾನ ಕೈಗೆಟುಕಲಿದೆ. ಮನೆ ಸಾಲದ ಮೇಲಿನ ತೆರಿಗೆ ವಿನಾಯಿತಿ ಮುಂದುವರಿಕೆ ಸ್ವಾಗತಾರ್ಹ. ರೈತರಿಗೆ ವಿಮಾ ಯೋಜನೆ. ಸೋಲಾರ್ ಪಂಪ್‌ಸೆಟ್‌ ನೀಡುವುದು ಉತ್ತಮ ನಿರ್ಧಾರ.

–ಕೆ.ಉದಯಕುಮಾರ್ ಶೆಟ್ಟಿ, ಬಿಜೆಪಿಮಂಗಳೂರು ವಿಭಾಗ ಪ್ರಭಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.