ಉಡುಪಿ: ಕೆಳ ಪರ್ಕಳದ ವೇಣುಗೋಪಾಲಕೃಷ್ಣ ದೇವಸ್ಥಾನದ ಸಮೀಪದ ಗದ್ದೆಯಲ್ಲಿ ಭಾನುವಾರ ಕೇರಳ ನೋಂದಣಿಯ ಕಾರೊಂದು ಪತ್ತೆಯಾಗಿ ಆತಂಕ ಸೃಷ್ಟಿಯಾಗಿತ್ತು. ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದಾಗ ಕಾರು ಮಣಿಪಾಲದ ಎಂಬಿಬಿಎಸ್ ವಿದ್ಯಾರ್ಥಿ ಅರ್ಜುನ್ನದ್ದು ಎಂಬ ವಿಚಾರ ತಿಳಿಯಿತು.
ಅವಘಡದಲ್ಲಿ ಯಾರಿಗೂ ಪ್ರಾಣಾಪಾಯವಾಗಿಲ್ಲ. ಕೇರಳದ ಶೈಲೇಶ್ ಎಂಬುವರ ಹೆಸರಿನಲ್ಲಿ ಕಾರು ನೋಂದಣಿಯಾಗಿದ್ದು, ಅವರ ಮಗ ಅರ್ಜುನ್ ಕಾರನ್ನು ಓಡಿಸುತ್ತಿದ್ದರು. ಭಾನುವಾರ ಕಡಿದಾದ ರಸ್ತೆಯಲ್ಲಿ ಚಲಾಯಿಸುವಾಗ ಬ್ರೇಕ್ ಫೇಲ್ ಆಗಿ ಚಾಲಕನ ನಿಯಂತ್ರಣ ತಪ್ಪಿ ಕಾರು ಗದ್ದೆಗೆ ಬಿದ್ದಿದೆ. ಹಬ್ಬದ ಸಂದರ್ಭವಾಗಿರುವುದರಿಂದ ವಾಹನ ಮೇಲೆತ್ತುವ ಕ್ರೇನ್ ಲಭ್ಯವಾಗಿಲ್ಲ. ಸೋಮವಾರ ಮೇಲೆತ್ತಲಾಗುವುದು ಎಂದು ಪೊಲೀಸರು ತಿಳಿಸಿದರು.
ಕೆಲಕಾಲ ಆತಂಕ:ಗದ್ದೆಯಲ್ಲಿ ಕಾರು ಪ್ರತ್ಯಕ್ಷವಾಗಿದ್ದನ್ನು ಕಂಡು ಸ್ಥಳೀಯರು ಭೀತಿಯಿಂದ ಪೊಲೀಸರಿಗೆ ಸುದ್ದಿ ಮುಟ್ಟಿಸಿದರು. ಅಪರಾಧ ಕೃತ್ಯಗಳನ್ನು ಎಸಗಿ ಕಾರನ್ನು ತಂದು ಗದ್ದೆಗೆ ಹಾಕಲಾಗಿದೆ ಎಂಬ ಅನುಮಾನ ವ್ಯಕ್ತವಾಗಿತ್ತು. ಕೊನೆಗೆ ಪೊಲೀಸರ ವಿಚಾರಣೆಯಿಂದ ಸತ್ಯ ಬಹಿರಂಗವಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.