ADVERTISEMENT

ಕ್ಷಣಾರ್ಧದಲ್ಲಿ ಸ್ವಚ್ಛಗೊಂಡ ಉಡುಪಿ

ಪೌರಕಾರ್ಮಿಕರು, ಸ್ವಯಂ ಸೇವಕರ ಕಾರ್ಯಕ್ಕೆ ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2020, 10:14 IST
Last Updated 19 ಜನವರಿ 2020, 10:14 IST
ಸ್ವಚ್ಛನಗರ ಪರಿಕಲ್ಪನೆಯ ಸ್ತಬ್ಧಚಿತ್ರ ನೆರೆದಿದ್ದ ಜನರ ಗಮನಸೆಳೆಯಿತು. ಪ್ರಜಾವಾಣಿ ಚಿತ್ರ
ಸ್ವಚ್ಛನಗರ ಪರಿಕಲ್ಪನೆಯ ಸ್ತಬ್ಧಚಿತ್ರ ನೆರೆದಿದ್ದ ಜನರ ಗಮನಸೆಳೆಯಿತು. ಪ್ರಜಾವಾಣಿ ಚಿತ್ರ   

ಉಡುಪಿ: ಅದಮಾರು ಪರ್ಯಾಯ ಉತ್ಸವದ ಮೆರವಣಿಗೆ ಮುಕ್ತಾಯಗೊಳ್ಳುತ್ತಿದ್ದಂತೆ ನಗರಸಭೆಯ ಪೌರಕಾರ್ಮಿಕರು ಹಾಗೂ ಸ್ವಯಂ ಸೇವಕರು ಮೆರವಣಿಗೆ ಸಾಗಿಬಂದ ರಸ್ತೆಗಳನ್ನು ಸ್ವಚ್ಛಗೊಳಿಸಿದರು. ಇದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.

ಅದಮಾರು ಮಠದ ಈಶಪ್ರಿಯ ಶ್ರೀಗಳು ಮುಂದಿನ ಎರಡು ವರ್ಷಗಳ ಪರ್ಯಾಯ ಅವಧಿಯಲ್ಲಿ ಪರಿಸರ ಸಂರಕ್ಷಣೆ ಹಾಗೂ ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡಿದ್ದಾರೆ. ಅದರಂತೆ, ಪುರಪ್ರವೇಶ, ಹೊರೆಕಾಣಿಕೆ ಹಾಗೂ ಪರ್ಯಾಯ ಮೆರವಣಿಗೆಯಲ್ಲಿ ಪ್ಲಾಸ್ಟಿಕ್‌ ಬ್ಯಾನರ್‌ ಬದಲು ಬಟ್ಟೆ ಬ್ಯಾನರ್‌ಗಳನ್ನು ಉಪಯೋಗಿಸಲಾಗಿತ್ತು.

ಹಾಗೆಯೇ ಬಾಳೆಗಿಡಗಳನ್ನು ಬೇರು ಸಮೇತ ಕಿತ್ತು ತಂದು ಸ್ವಾಗತ ಕಮಾನುಗಳಲ್ಲಿ ಅಲಂಕಾರಗೊಳಿಸಿ ಬಳಿಕ ಅವುಗಳನ್ನು ಮತ್ತೆ ನಡೆಲಾಗಿತ್ತು. ಹೀಗೆ, ಅನೇಕ ಪರಿಸರ ಪೂರಕ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಈ ನಿಟ್ಟಿನಲ್ಲಿ ಶನಿವಾರ ನಸುಕಿನ ವೇಳೆ ನಡೆದ ರಸ್ತೆಗಳ ಸ್ಪಚ್ಛತಾ ಕಾರ್ಯಗಳಿಗೂ ಹೆಚ್ಚು ಪ್ರಶಂಸೆ ವ್ಯಕ್ತವಾಗಿದೆ.

ADVERTISEMENT

ಶನಿವಾರ ನಸುಕಿನಲ್ಲಿ ಪರ್ಯಾಯ ಮೆರವಣಿಗೆ ಸಾಗುತ್ತಿದ್ದಂತೆ ಹಿಂದಿನಿಂದ ಪೌರಕಾರ್ಮಿಕರು ಹಾಗೂ ಪಿಪಿಸಿ ಕಾಲೇಜಿನ ಎನ್‌ಎಸ್‌ಎಸ್‌ ವಿದ್ಯಾರ್ಥಿಗಳು ಸ್ವಚ್ಛತಾ ಪರಿಕರಗಳೊಂದಿಗೆ ಸಜ್ಜಾದರು. ಮೆರವಣಿಗೆ ಸಾಗಿದ ಕಿನ್ನಿಮೂಲ್ಕಿ, ಜೋಡುಕಟ್ಟೆ, ಕೋರ್ಟ್‌ ರೋಡ್‌, ತೆಂಕಪೇಟೆ ರಸ್ತೆ, ರಥಬೀದಿ ಹಾಗೂ ಕೆಎಸ್‌ಆರ್‌ಟಿಸಿ, ಸಿಟಿ, ಸರ್ವಿಸ್‌ ಬಸ್‌ ನಿಲ್ದಾಣಗಳನ್ನು ಸ್ವಚ್ಛಗೊಳಿಸಿದರು.

ಸಂಗ್ರಹಿಸಲ್ಪಟ್ಟ ಕಸವನ್ನು ಎರಡು ಟೆಂಪೋಗಳ ಮೂಲಕ ತ್ಯಾಜ್ಯ ಸಂಗ್ರಹಣ ಘಟಕಕ್ಕೆ ಕೊಂಡೊಯ್ಯಲಾಯಿತು.ಗಾಂಧಿ ಆಸ್ಪತ್ರೆಯ ಸಿಬ್ಬಂದಿ ಕೃಷ್ಣಮಠದ ಆವರಣದ ಸಹಿತ ನಗರದ ವಿವಿಧ ಸ್ಥಳಗಳನ್ನು ಶುಚಿಗೊಳಿಸಿದರು. ಮೆರವಣಿಗೆಯಲ್ಲಿ ಸಾಗಿಬಂದ ಜಾನಪದ, ಕಲೆ, ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಸ್ತಬ್ಧಚಿತ್ರದ ಜತೆಗೆ ಸ್ವಚ್ಛನಗರ ಪರಿಕಲ್ಪನೆಯ ಸ್ತಬ್ಧಚಿತ್ರ ನೆರೆದಿದ್ದ ಜನರ ಗಮನ ಸೆಳೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.