ADVERTISEMENT

ಬಿಜೆಪಿಗರಿಗೆ ಸುಳ್ಳೇ ಮನೆ ದೇವರು

ಬಿಜೆಪಿ ವಿರುದ್ಧ ಪಡುಬಿದ್ರಿಯಲ್ಲಿ ನಡೆದ ಕಾಂಗ್ರೆಸ್ ಪ್ರತಿಭಟನೆಯಲ್ಲಿ ವಿನಯಕುಮಾರ್ ಸೊರಕೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 5:43 IST
Last Updated 11 ಜುಲೈ 2025, 5:43 IST
ಪಡುಬಿದ್ರಿ ಗ್ರಾಮ ಪಂಚಾಯಿತಿ ಎದುರು ನಡೆದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡ ವಿನಯಕುಮಾರ್ ಸೊರಕೆ ಮಾತನಾಡಿದರು
ಪಡುಬಿದ್ರಿ ಗ್ರಾಮ ಪಂಚಾಯಿತಿ ಎದುರು ನಡೆದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡ ವಿನಯಕುಮಾರ್ ಸೊರಕೆ ಮಾತನಾಡಿದರು   

ಪಡುಬಿದ್ರಿ: ಬಿಜೆಪಿಗರಿಗೆ ಸುಳ್ಳೇ ಮನೆ ದೇವರು. ಬಿಜೆಪಿ ತನ್ನ ಚುನಾವಣಾ ಪೂರ್ವ ಘೋಷಣೆಗಳನ್ನು ಯಾವತ್ತೂ ಜಾರಿಗೊಳಿಸಿಲ್ಲ ಎಂದು ಕಾಂಗ್ರೆಸ್ ಮುಖಂಡ ವಿನಯಕುಮಾರ್ ಸೊರಕೆ ಹೇಳಿದರು.

ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಸುಳ್ಳು ಆರೋಪ ಮಾಡಿದೆ ಹಾಗೂ ಕೇಂದ್ರ ಸರ್ಕಾರ ಆಡಳಿತ ನಡೆಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ, ಪಡುಬಿದ್ರಿ ಗ್ರಾಮ ಪಂಚಾಯಿತಿ ಎದುರು ಕಾಂಗ್ರೆಸ್ ಪಕ್ಷ ಗುರುವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತವಿದ್ದಾಗ ಸಂವಿಧಾನದ ತಿದ್ದುಪಡಿಗಳನ್ನು ಮಾಡಿದ್ದರೂ, ಅದು ಸಮಾಜವಾದದ ಮೇಲೆ ವಿಶ್ವಾಸ ಇಟ್ಟಿರುವ ಬಡವರ ಒಳಿತಿಗಾಗಿ ಮಾಡಿದೆ. ಆದರೆ, ಸಂವಿಧಾನದ ಅಡಿಪಾಯವಾಗಿರುವ ಜಾತ್ಯತೀತ ಮತ್ತು ಸಮಾಜವಾದವನ್ನು ಪೀಠಿಕೆಯಿಂದ ತೆಗೆಯಬೇಕೆಂದು ಬಿಜೆಪಿ ಮತ್ತು ಆರ್‌ಎಸ್‌ಎಸ್ ಒತ್ತಾಯಿಸುತ್ತಿದೆ ಎಂದರು.

ADVERTISEMENT

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ಪಡೆದು ಆರು ತಿಂಗಳುಗಳಲ್ಲಿ ಪಂಚ ಗ್ಯಾರಂಟಿ ಯೋಜನೆ ಜಾರಿಗೊಳಿಸಿದ್ದಾರೆ. ರಾಜ್ಯದ ಶೇ 95ರಷ್ಟು ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಪಡುಬಿದ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತಿಂಗಳಿಗೆ ₹1 ಕೋಟಿ ಗೃಹಲಕ್ಷ್ಮಿ ಹಣ ಬರುತ್ತಿದೆ. ಬಿಜೆಪಿಯ ಯಾವ ಯೋಜನೆಗಳೂ ಇಷ್ಟು ಫಲಾನುಭವಿಗಳಿಗೆ ತಲುಪುತ್ತಿಲ್ಲ. ಆದರೂ, ಗ್ಯಾರಂಟಿ ಯೋಜನಾ ಫಲಾನುಭವಿಗಳ ಸಭೆಯಲ್ಲಿ ಶಾಸಕರಿಗೆ ಭಾಗವಹಿಸಲಾಗುತ್ತಿಲ್ಲ ಎಂದು ಹೇಳಿದರು.

ಬಡವರು ಕಳದ ಹಲವು ವರ್ಷಗಳಿಂದ ಪ್ರಾಮಾಣಿಕ ಹೋರಾಟವನ್ನು ಮಾಡುತ್ತಿರುವ ಹಕ್ಕುಪತ್ರ ವಿಚಾರ, ಅಕ್ರಮ ಸಕ್ರಮ ಮುಂತಾದವುಗಳ ಬಗೆಗೆ ಎಳ್ಳಷ್ಟೂ ಬಡವರ ಬಗ್ಗೆ ಕಾಳಜಿ ಇಲ್ಲದಿರುವ ಕಾಪು ಶಾಸಕರು ಮೊದಲಿಗೆ ಸುಜ್ಲಾನ್ ಪ್ರದೇಶದಲ್ಲಿ ತಮ್ಮ ಭೂಮಿಯ ಕುರಿತು ಬಹಿರಂಗಪಡಿಸಲಿ ಎಂದು ಸೊರಕೆ ಸವಾಲೆಸೆದರು.

ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈ. ಸುಕುಮಾರ್, ಕಾಂಗ್ರೆಸ್ ಮುಖಂಡರಾದ ನವೀನ್‌ಚಂದ್ರ ಜೆ.ಶೆಟ್ಟಿ, ಅಬ್ದುಲ್ ಅಜೀಜ್ ಹೆಜಮಾಡಿ, ವಿಶ್ವಾಸ್ ಅಮೀನ್, ಕಾಪು ದಿವಾಕರ ಶೆಟ್ಟಿ, ನಿಯಾಜ್, ನವೀನ್ ಎನ್. ಶೆಟ್ಟಿ, ರಮೀಜ್ ಹುಸೈನ್, ಕರುಣಾಕರ ಪೂಜಾರಿ, ಗಣೇಶ್ ಕೋಟ್ಯಾನ್, ಅಬ್ದ್ದುಲ್ ರಹಿಮಾನ್ ಕನ್ನಂಗಾರ್, ಶಾಂತಲತಾ ಶೆಟ್ಟಿ, ಸಂಜೀವಿ ಪೂಜಾರ್ತಿ, ಜ್ಯೋತಿ ಮೆನನ್ ಇದ್ದರು.

ಎಲ್ಲೆಲ್ಲಿ ಪ್ರತಿಭಟನೆ: ಹಕ್ಕುಪತ್ರ, ಮನೆ ನಿವೇಶನ ನೀಡಲು ವಿಳಂಬ ಧೋರಣೆಯನ್ನು ಅನುಸರಿಸುತ್ತಿರುವ ಅಧಿಕಾರಿ ವರ್ಗಗಳ ತಾರತಮ್ಯ ನೀತಿಯನ್ನು ವಿರೋಧಿಸಿ, ಹಾಗೂ 9/11 ಪ್ರಕ್ರಿಯೆಯನ್ನು ಜಟಿಲಗೊಳಿಸಿರುವ ಬಗ್ಗೆ ಮತ್ತು ವೃದ್ಧಾಪ್ಯ ವೇತನದ ಗೊಂದಲಗಳ ಬಗ್ಗೆ ಜನ ಜಾಗೃತಿ ಮೂಡಿಸುವ ಸಲುವಾಗಿ ವಿನಯ್ ಕುಮಾರ್ ಸೊರಕೆ ನೇತೃತ್ವದಲ್ಲಿ ಹೆಜಮಾಡಿ, ಪಡುಬಿದ್ರಿ, ಪಲಿಮಾರು, ತೆಂಕ ಎರ್ಮಾಳ್, ಉಚ್ಚಿಲ ಬಡಾ, ಬೆಳಪು ಗ್ರಾಮ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.

‘ಶಾಸಕರಿಗೆ ತಿಳಿದಿಲ್ಲವೇ?’

ಗ್ಯಾರಂಟಿ ಯೋಜನೆಗಳನ್ನು ಯಾವತ್ತೂ ನಿಲ್ಲಿಸುವುದಿಲ್ಲವೆಂದೂ ಮುಖ್ಯಮಂತ್ರಿ ಘೋಷಿಸಿದ್ದಾರೆ. ಅಭಿವೃದ್ಧಿ ಕಾಮಗಾರಿಗಳಿಗೂ ಸರ್ಕಾರ ಅನುದಾನ ನೀಡುತ್ತಿದೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ₹25 ಕೋಟಿ ಸಮುದ್ರ ಕೊರೆತ ತಡೆ ಕಾಮಗಾರಿಗೆ ₹83 ಕೋಟಿ ಬಿಡುಗಡೆಯಾಗಿದ್ದು ಶಾಸಕರಿಗೆ ತಿಳಿದಿಲ್ಲವೇ ಎಂದು ಸೊರಕೆ ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.