ಉಡುಪಿ: ಜಿಲ್ಲೆಯಲ್ಲಿ ಕೋವಿಡ್–19 ಪ್ರಮಾಣ ಗಣನೀಯವಾಗಿ ತಗ್ಗುತ್ತಿದ್ದು, 463 ಸಕ್ರಿಯ ಸೋಂಕಿತರು ಮಾತ್ರ ಇದ್ದಾರೆ. ಜುಲೈ 18ರ ನಂತರ ಇದೇ ಮೊದಲ ಬಾರಿಗೆ ಸಕ್ರಿಯ ಸೋಂಕು ಪ್ರಮಾಣ ಅತ್ಯಂತ ಕಡಿಮೆ ಮಟ್ಟ ತಲುಪಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದ್ದು, ಸೋಂಕಿನ ನಾಲ್ಕು ಪಟ್ಟು ರೋಗಿಗಳು ಗುಣಮುಖರಾಗುತ್ತಿದ್ದಾರೆ. ಮಂಗಳವಾರ 20 ಮಂದಿಗೆ ಕೋವಿಡ್ ದೃಢಪಟ್ಟರೆ, ಗುಣಮುಖರಾದವರು 109 ಮಂದಿ. ಇದೇ ಪರಿಸ್ಥಿತಿ ಮುಂದುವರಿದರೆ ಜಿಲ್ಲೆ ಶೀಘ್ರವೇ ಕೋವಿಡ್ ಮುಕ್ತವಾಗಲಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಆಶಯ ವ್ಯಕ್ತಪಡಿಸಿದ್ದಾರೆ.
ಆಗಸ್ಟ್ ಮಧ್ಯದಲ್ಲಿ ಕೋವಿಡ್ ಪಾಸಿಟಿವಿಟಿ ದರ ಶೇ 25ರ ಆಸುಪಾಸಿನಲ್ಲಿತ್ತು. ಅಂದರೆ, 1,000 ಮಂದಿಗೆ ಕೋವಿಡ್ ಪರೀಕ್ಷೆ ಮಾಡಿದರೆ 250 ಜನರಲ್ಲಿ ಸೋಂಕು ಪತ್ತೆಯಾಗುತ್ತಿತ್ತು. ನವೆಂಬರ್ನಲ್ಲಿ ಪಾಸಿಟಿವಿಟಿ ದರ ಶೇ 5ಕ್ಕಿಂತ ಕೆಳಗಿಳಿದಿದೆ. ಸೋಮವಾರ 1,576 ಶಂಕಿತರಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದ್ದು, 21 ಜನರಲ್ಲಿ ಮಾತ್ರ ಸೋಂಕು ಕಾಣಿಸಿಕೊಂಡಿದೆ. ಅಂದರೆ, ಪಾಸಿಟಿವಿಟಿ ದರ ಶೇ 1.5ಕ್ಕಿಂತಲೂ ಕಡಿಮೆಯಾಗಿದೆ.
ಜಿಲ್ಲೆಯಲ್ಲಿ ಮರಣ ಪ್ರಮಾಣವೂ ಕಡಿಮೆಯಾಗಿದ್ದು, ನೆರೆಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 680 ಸೋಂಕಿತರು ಮೃತಪಟ್ಟಿದ್ದರೆ, ಉಡುಪಿಯಲ್ಲಿ ಸಾವಿನ ಪ್ರಮಾಣ 183 ಇದೆ. ಐಸಿಯು ಬೆಡ್ಗಳ ಕೊರತೆಯೂ ನೀಗಿದ್ದು, ಪರಿಸ್ಥಿತಿ ಹತೋಟಿಯಲ್ಲಿದೆ ಎನ್ನುತ್ತಾರೆ ಅಧಿಕಾರಿಗಳು.
ಮಂಗಳವಾರ ದೃಢಪಟ್ಟ 20 ಸೋಂಕಿತರಲ್ಲಿ ಉಡುಪಿ, ಕುಂದಾಪುರ ತಾಲ್ಲೂಕಿನ ತಲಾ 9, ಕಾರ್ಕಳದ ಇಬ್ಬರು ಇದ್ದಾರೆ. 12 ಪುರುಷರು, 8 ಮಹಿಳೆಯರಿದ್ದು, ಕೋವಿಡ್ ಆಸ್ಪತ್ರೆಗಳಲ್ಲಿ 6, ಹೋಂ ಐಸೊಲೇಷನ್ನಲ್ಲಿ 6 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
109 ಸೋಂಕಿತರು ಗುಣರಾಗಿದ್ದು, ಇದುವರೆಗೂ 21,341 ಮಂದಿ ಸೋಂಕು ಮುಕ್ತರಾಗಿದ್ದಾರೆ. ಒಟ್ಟು ಪ್ರಕರಣಗಳ ಸಂಖ್ಯೆ 21,985 ಇವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.