ಉಡುಪಿ: ಜಿಲ್ಲೆಯಲ್ಲಿ ಪ್ರಸ್ತುತ ಸಾಲ ಠೇವಣಿ (ಸಿ.ಡಿ.) ಅನುಪಾತವು 47.88 ರಷ್ಟು ಇದ್ದು, ಅದನ್ನು ಮತ್ತಷ್ಟು ಸುಧಾರಣೆ ಮಾಡುವುದರೊಂದಿಗೆ ಆರ್.ಬಿ.ಐ. ನಿಯಮಾವಳಿ ಅನ್ವಯ ಶೇ 50ರಷ್ಟು ಗುರಿ ಸಾಧಿಸಬೇಕು ಎಂದು ಕೆನರಾ ಬ್ಯಾಂಕ್ ಪ್ರಾದೇಶಿಕ ಮ್ಯಾನೇಜರ್ ಮಹಾಮಾಯ ಪ್ರಸಾದ್ ರಾಯ್ ತಿಳಿಸಿದರು.
ಮಣಿಪಾಲದ ರಜತಾದ್ರಿಯ ಜಿಲ್ಲಾ ಪಂಚಾಯಿತಿಯ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಳೆದ ಐದು ವರ್ಷಗಳಲ್ಲಿ 2018-19 ನೇ ಸಾಲಿನಲ್ಲಿ ಸಿ.ಡಿ.ಅನುಪಾತವು 50.32 ಹೆಚ್ಚಿತ್ತು. ನಂತರದ ವರ್ಷಗಳಲ್ಲಿ ಶೇ50 ಕ್ಕಿಂತ ಕಡಿಮೆ ಇದೆ. ಕಳೆದ ವರ್ಷಕ್ಕೆ ಹೋಲಿಸಿದ್ದಲ್ಲಿ ಬ್ಯಾಂಕಿಂಗ್ ಠೇವಣಿ ಅನುಪಾತವು ಶೇ 47.68 ಇದ್ದು, ಪ್ರಸಕ್ತ ಸಾಲಿನಲ್ಲಿ ಶೇ 47.88 ರಷ್ಟಾಗಿ ಶೇ 0.42 ರಷ್ಟು ಏರಿಕೆಯಾಗಿದೆ. ಎಲ್ಲಾ ಬ್ಯಾಂಕ್ ಅಧಿಕಾರಿಗಳು ಸಿ.ಡಿ. ಅನುಪಾತವನ್ನು ಹೆಚ್ಚಿಸಲು ಕಾರ್ಯಪ್ರವೃತ್ತರಾಗಬೇಕು ಎಂದರು.
ಪ್ರಸಕ್ತ ಸಾಲಿನಲ್ಲಿ ಜಿಲ್ಲೆಗೆ ಆದ್ಯತೆಯ ಮತ್ತು ಆದ್ಯತೆಯೇತರ ವಲಯಗಳೆರಡಕ್ಕೂ ಒಟ್ಟಾರೆಯಾಗಿ ₹15,514.08 ಕೋಟಿ ವಾರ್ಷಿಕ ಸಾಲ ಯೋಜನೆ ಗುರಿಯನ್ನು ನಿಗದಿಪಡಿಸಲಾಗಿದ್ದು, ಜೂನ್ ಅಂತ್ಯದವರೆಗೆ ಜಿಲ್ಲೆಯ ಬ್ಯಾಂಕ್ಗಳು ₹4,963.96 ಕೋಟಿ ಸಾಲ ವಿತರಿಸುವುದರೊಂದಿಗೆ ಶೇ 32ರ ಗುರಿ ಸಾಧಿಸಿದೆ. ಮುಂದಿನ ದಿನಗಳಲ್ಲಿ ಗುರಿ ಸಾಧನೆ ಪ್ರಮಾಣ ಹೆಚ್ಚಾಗಬೇಕು ಎಂದು ಹೇಳಿದರು.
ಪಿ.ಎಂ. ವಿಶ್ವಕರ್ಮ ಯೋಜನೆಯಡಿ ಆರ್ಥಿಕ ನೆರವು ವಿತರಣೆಯ ಪ್ರಮಾಣವು ಹೆಚ್ಚಾಗಬೇಕು. ಈ ಯೋಜನೆಯಡಿ ಈವರೆಗೆ 5,597 ಅರ್ಜಿಗಳು ಸ್ವೀಕೃತವಾಗಿದ್ದು, 3,532 ಫಲಾನುಭವಿಗಳಿಗೆ ₹34.61 ಕೋಟಿ ಸಾಲ ವಿತರಿಸಲಾಗಿದೆ. 1,256 ಅರ್ಜಿಗಳು ತಿರಸ್ಕೃತಗೊಂಡಿವೆ. ತಿರಸ್ಕೃತ ಅರ್ಜಿಗಳ ಸಂಖ್ಯೆ ಕಡಿಮೆಯಾಗಬೇಕು. ಬಾಕಿ ಇರುವ ಅರ್ಜಿಗಳ ವಿಲೇವಾರಿಗೆ ಶೀಘ್ರ ಕ್ರಮ ವಹಿಸಬೇಕು ಎಂದರು.
ರಾಜ್ಯ ಹಾಗೂ ಕೇಂದ್ರ ಪ್ರಾಯೋಜಿತ ಯೋಜನೆಗಳಡಿ ಆಯ್ಕೆಯಾಗಿ ಆರ್ಥಿಕ ನೆರವು ನೀಡಲು ಶಿಫಾರಸಾದ ಅರ್ಜಿಗಳನ್ನು ಆದ್ಯತೆಯ ಮೇಲೆ ಜನರಿಗೆ ಅನುಕೂಲವಾಗುವಂತೆ ಸರಳ ರೀತಿಯಲ್ಲಿ ನಿಯಮಾನುಸಾರ ವಿಲೇವಾರಿ ಮಾಡಬೇಕು ಎಂದರು.
ಜಿಲ್ಲೆಯಲ್ಲಿ 2024-25 ನೇ ಸಾಲಿನಲ್ಲಿ ಆರ್ಥಿಕ ವರ್ಷದಲ್ಲಿ 2024 ರ ಡಿಸೆಂಬರ್ ಅಂತ್ಯದವರೆಗೆ ಕೃಷಿ ವಲಯಕ್ಕೆ 4,230 ನಿಗದಿತ ಗುರಿಗೆ 1,145 ಗುರಿ ಸಾಧಿಸಿ ಶೇ 27.06ರಷ್ಟು, ಎಂ.ಎಸ್.ಎಂ.ಇ. ವಲಯಕ್ಕೆ 3,713 ಗುರಿ ನಿಗದಿಪಡಿಸಲಾಗಿದ್ದು, 1,569 ಗುರಿ ಸಾಧಿಸಿ ಶೇ 42.26 ರಷ್ಟು, ಶಿಕ್ಷಣ ವಲಯಕ್ಕೆ 187 ನಿಗದಿತ ಗುರಿಗೆ 33 ಸಾಧಿಸಿ ಮಾಡಿ ಶೇ 17.42 ರಷ್ಟು, ವಸತಿ ಕ್ಷೇತ್ರಗಳಿಗೆ 510 ನಿಗದಿತ ಗುರಿಗೆ 52 ಗುರಿ ಸಾಧಿಸಿ ಶೇ 10.23ರಷ್ಟು ಹಾಗೂ ಆದ್ಯತೇತರ ವಲಯಗಳಿಗೆ 6,474 ನಿಗದಿತ ಗುರಿಗೆ, 2014 ಗುರಿ ಸಾಧಿಸಿ ಶೇ 31.11 ರಷ್ಟು ಸಾಧನೆ ಮಾಡಲಾಗಿದೆ ಎಂದರು.
ಆರ್.ಬಿ.ಐ ಲೀಡ್ ಡಿಸ್ಟ್ರಿಕ್ಟ್ ಆಫೀಸರ್ ಅಲೋಕ್ ಸಿನ್ಹಾ, ನಬಾರ್ಡ್ನ ಡಿ.ಡಿ.ಎಂ. ಸಂಗೀತಾ ಕಾರ್ಥಾ, ಜಿಲ್ಲಾ ಮಟ್ಟದ ಅಧಿಕಾರಿಗಳು, ಬ್ಯಾಂಕ್ಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಆನ್ಲೈನ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಅದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅಭಿಯಾನ ನಡೆಸಲಾಗಿದೆ.– ಹರೀಶ್ ಜಿ., ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.