ಉಡುಪಿ: ಈಚೆಗೆ ನಗರದಲ್ಲಿ ಇಬ್ಬರು ಬಾಲಕರ ಅಪರಹಣ ನಡೆದಿಲ್ಲ. ಬಾಲಕರು ಪುನರ್ವಸತಿ ಕೇಂದ್ರದಲ್ಲಿ ಸುರಕ್ಷಿತವಾಗಿದ್ದಾರೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ತಿಳಿಸಿದೆ.
ಬಾಲಕರ ಪೋಷಕರು ಮದ್ಯಪಾನ ಮಾಡಿ ಮಕ್ಕಳಿಗೆ ನಿತ್ಯ ಥಳಿಸುತ್ತಿದ್ದರಿಂದ ಬೇಸತ್ತಿದ್ದ ಮಕ್ಕಳು ನಿಟ್ಟೂರು ಬಾಲಕಿಯರ ಬಾಲಮಂದಿರದಲ್ಲಿದ್ದ ಅಕ್ಕನ ಹಾಸ್ಟೆನಲ್ಲಿ ಉಳಿಯುವುದಾಗಿ ತಿಳಿಸಿ ರಕ್ಷಣೆ ಹಾಗೂ ಪುನರ್ವಸತಿಗೆ ಕೋರಿದ್ದರು. ಈ ವಿಷಯವನ್ನು ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಿಗೆ ತಿಳಿಸಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಮಕ್ಕಳನ್ನು ಪುನರ್ವಸತಿಗಾಗಿ ಹಟ್ಟಿಯಂಗಡಿಯ ‘ನಮ್ಮ ಭೂಮಿ’ ಸಂಸ್ಥೆಗೆ ದಾಖಲಿಸಿದ್ದರು.
ಬಾಲಕನ ಪೋಷಕರಾದ ನಾಗರಾಜ್ ಈ ಬಗ್ಗೆ ವಿಚಾರಿಸದೆ ನೇರವಾಗಿ ಮಹಿಳಾ ಠಾಣೆಗೆ ದೂರು ನೀಡಿದ್ದರಿಂದ ಗೊಂದಲ ಉಂಟಾಗಿದೆ. ಮಕ್ಕಳನ್ನು ಮುಂದೆ ಸರಿಯಾಗಿ ನೋಡಿಕೊಳ್ಳುವುದಾಗಿ ಪೋಷಕರು ಅಗತ್ಯ ದಾಖಲೆಗಳನ್ನು ಮಕ್ಕಳ ಕಲ್ಯಾಣ ಸಮಿತಿಗೆ ಸಲ್ಲಿಸಿ ಮಕ್ಕಳನ್ನು ವಶಕ್ಕೆ ಪಡೆಯಬಹುದು ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.