ಉಡುಪಿ: ಪೊಲೀಸ್ ಕಮಿಷನರ್ ಹೆಸರಿನಲ್ಲಿ ಸಾರ್ವಜನಿಕರಿಗೆ ಬೆದರಿಕೆ ಹಾಕಿದ ಅನ್ಯರಾಜ್ಯದ ಮೂವರು ವ್ಯಕ್ತಿಗಳ ವಿರುದ್ಧ ಮಲ್ಪೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಸೋಮವಾರ ಮಲ್ಪೆ ಸರ್ಕಲ್ ಬಳಿ ಬಸ್ಗೆ ಅಡ್ಡಲಾಗಿ ನಿಲ್ಲಿಸಿದ್ದ ಕಾರನ್ನು ತೆಗೆಯಲು ಬಸ್ ಚಾಲಕ ಸೂಚಿಸಿದ್ದಕ್ಕೆ ಕೋಪಗೊಂಡ ಕಾರಿನಲ್ಲಿದ್ದ ರಾಘ ಸಂದೇಶ, ಶಿವಪ್ರಕಾಶ್, ಶಿವಕುಮಾರ್ ಎಂಬುವರು ಚಾಲಕನಿಗೆ ಬೆದರಿಕೆ ಹಾಕಿದ್ದಾರೆ. ಈ ಸಂದರ್ಭ ವಾಗ್ವಾದ ನಡೆದು ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಬೆದರಿಕೆ ಹಾಕಿದವರು ಪೊಲೀಸ್ ಅಧಿಕಾರಿಗಳಲ್ಲ ಎಂಬ ವಿಚಾರ ಬಯಲಾಗಿದೆ.
ಸಾರ್ವಜನಿಕರನ್ನು ವಂಚಿಸುವ ಉದ್ದೇಶದಿಂದ ಕಾರಿನ ಮುಂಭಾಗಕ್ಕೆ ‘ಪೊಲೀಸ್’ ಸ್ಟಿಕ್ಕರ್ ಅಂಟಿಸಿಕೊಂಡಿದ್ದಕ್ಕೆ ಹಾಗೂ ಬೆದರಿಕೆ ಹಾಕಿದ್ದಕ್ಕೆ ಪ್ರಕರಣ ದಾಖಲಾಗಿದೆ. ಆರೋಪಿಗಳು ಆಂಧ್ರಪ್ರದೇಶ ಮೂಲದವರಾಗಿದ್ದು, ದೆಹಲಿಯಲ್ಲಿ ವಾಸವಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನೆಟ್ಹಟ್ಗೆ ನುಗ್ಗಿದ ಕಾರು
ಉಡುಪಿ: ಅಜ್ಜರಕಾಡು ಸಮೀಪದ ಎಲ್ಬಿಎಸ್ ರಸ್ತೆಯ ನೆಟ್ಹಟ್ ಟೆಕ್ನಾಲಜಿಸ್ ಮಳಿಗೆಗೆ ಕಾರು ನುಗ್ಗಿದ್ದು, ಅಂಗಡಿಯಲ್ಲಿದ್ದ ಕಂಪ್ಯೂಟರ್ ಹಾಗೂ ಇತರೆ ಎಲೆಕ್ಟ್ರಾನಿಕ್ ಉಪಕರಣಗಳಿಗೆ ಹಾನಿಯಾಗಿದೆ.
ಮಂಗಳವಾರ ಕಾರು ಅಂಗಡಿಗೆ ಡಿಕ್ಕಿ ಹೊಡೆದಿದ್ದು, ಅಪಘಾತದಲ್ಲಿ ₹ 5 ಲಕ್ಷ ನಷ್ಟ ಸಂಭವಿಸಿದೆ ಎಂದು ಸುನೀಲ್ ರೊಬೆನ್ ಡಿಸೋಜ ಎಂಬುವರು ದೂರು ನೀಡಿದ್ದು, ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಾಹನ ಕಳವು
ಉಡುಪಿ: ನಗರದ ಮಂಜುನಾಥ ಕಣ್ಣಿನ ಆಸ್ಪತ್ರೆ ಬಳಿ ನಿಲ್ಲಿಸಲಾಗಿದ್ದ ಸ್ಕೂಟರ್ ಅನ್ನು ಕಳ್ಳರು ಕದ್ದು ಪರಾರಿಯಾಗಿದ್ದಾರೆ. ಧನುಷ್ ಶೆಟ್ಟಿ ವಾಹನ ಕಳೆದುಕೊಂಡವರು. ಉಡುಪಿ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶೋಧ ನಡೆಸುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.