ಬ್ರಹ್ಮಾವರ: ‘ಜೀವನದಲ್ಲಿ ಮುಂದೆ ಬರಲು ಅಂಕಗಳು ಮುಖ್ಯವಲ್ಲ. ಜೀವನದಲ್ಲಿ ಮೌಲ್ಯಗಳಿಗೆ ಹೆಚ್ಚು ಒತ್ತು ಕೊಡಬೇಕು’ ಎಂದು ಇಲ್ಲಿನ ಸುವರ್ಣ ಎಂಟರ್ಪ್ರೈಸಸ್ ಮಾಲೀಕ, ಜಯಂಟ್ಸ್ ಗ್ರೂಪ್ನ ಮಧುಸೂಧನ ಹೇರೂರು ಹೇಳಿದರು.
ಇಲ್ಲಿನ ಕ್ರಾಸ್ಲ್ಯಾಂಡ್ ಕಾಲೇಜಿನಲ್ಲಿ ಸೋಮವಾರ ಪ್ರಥಮ ಪದವಿ ತರಗತಿ ವಿದ್ಯಾರ್ಥಿಗಳಿಗೆ ಗಿಡಗಳನ್ನು ನೀಡಿ ಸ್ವಾಗತಿಸಿ ಅವರು ಮಾತನಾಡಿದರು. ನಾವು ಗಿಡಗಳನ್ನು ನೆಟ್ಟು ಪ್ರತಿದಿನ ಸಂರಕ್ಷಿಸುತ್ತಾ ಬಂದರೆ ವನಮಹೋತ್ಸವದಂತಹ ಕಾರ್ಯಕ್ರಮದ ಅವಶ್ಯ ಇಲ್ಲ ಎಂದು ಹೇಳಿದರು.
ಗ್ರೀನ್ಲ್ಯಾಂಡ್ನ ಜನ ತಮ್ಮವರಿಗೋಸ್ಕರ ಜೀವವನ್ನೇ ಬಲಿಕೊಡುತ್ತಿದ್ದಾರೆ. ಆದರೆ ನಾವು ಎಲ್ಲ ಇದ್ದರೂ ಹಾಳು ಮಾಡಿಕೊಳ್ಳುತ್ತಿದ್ದೇವೆ. ತಂದೆ ತಾಯಿಗೆ ಗೌರವ ಕೊಡುವುದು ನಮ್ಮ ಸಂಸ್ಕೃತಿ. ಅದನ್ನು ಮರೆಯಬಾರದು. ಅವರು ನಮ್ಮ ಏಳಿಗೆಗೆ ಜೀವನ ಮುಡಿಪಾಗಿಟ್ಟಿದ್ದಾರೆ. ಅವರನ್ನು ವೃದ್ಧಾಶ್ರಮಕ್ಕೆ ಸೇರಿಸದೆ ನಾವೇ ಉತ್ತಮ ರೀತಿಯಲ್ಲಿ ನೋಡಿಕೊಳ್ಳಬೇಕು ಎಂದು ಹೇಳಿದರು.
ಜಯಂಟ್ಸ್ ಗ್ರೂಪ್ ಅಧ್ಯಕ್ಷ ಅಣ್ಣಯ್ಯ ದಾಸ್ ಮಾತನಾಡಿ, ‘ವಿದ್ಯಾರ್ಥಿ ಜೀವನದಲ್ಲಿ ಒಳ್ಳೆಯ ಸಂಗತಿಗಳನ್ನು ಗ್ರಹಿಸಿ ಕೆಟ್ಟ ವಿಚಾರಗಳನ್ನು ಬದಿಗಿಟ್ಟಲ್ಲಿ ಭವಿಷ್ಯದಲ್ಲಿ ಜೀವನ ಉತ್ತಮವಾಗಿರುತ್ತದೆ’ ಎಂದು ಹೇಳಿದರು.
ಪ್ರಾಂಶುಪಾಲ ರಾಬರ್ಟ್ ಕ್ಲೈವ್ ಜಿ. ಅಧ್ಯಕ್ಷತೆ ವಹಿಸಿದ್ದರು. ಜಯಂಟ್ಸ್ ಗ್ರೂಪ್ನ ಕಾರ್ಯದರ್ಶಿ ಮಿಲ್ಟನ್ ಒಲಿವೆರ, ಮಾಜಿ ಅಧ್ಯಕ್ಷ ಸುಂದರ ಪೂಜಾರಿ ಮೂಡುಕುಕ್ಕುಡೆ, ಪ್ರದೀಪ್ ಶೆಟ್ಟಿ ಕರ್ಜೆ, ಉಪ ಪ್ರಾಂಶುಪಾಲ ಬಿಜು ಜೇಕಬ್ ಭಾಗವಹಿಸಿದ್ದರು. ಉಪನ್ಯಾಸಕರಾದ ಸುಕುಮಾರ್ ಶೆಟ್ಟಿಗಾರ್ ಸ್ವಾಗತಿಸಿದರು. ಮೈಥಿಲಿ ವಂದಿಸಿದರು. ನವೀನ್ ಕುಮಾರ್ ಶೆಟ್ಟಿ ನಿರೂಪಿಸಿದರು.
ಗಿಡ– ಮರಗಳನ್ನು ಹೆಚ್ಚು ಬೆಳೆಸುವಂತೆ ವಿದ್ಯಾರ್ಥಿಗಳನ್ನು ಪ್ರೇರೇಪಿಸಬೇಕು. ಅದರ ಮಹತ್ವದ ಕುರಿತು ಮಾಹಿತಿ ನೀಡಬೇಕು–ಮಧುಸೂದನ ಹೇರೂರು, ಸುವರ್ಣ ಎಂಟರ್ಪ್ರೈಸಸ್ ಮಾಲೀಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.