ಉಡುಪಿ: ದಲಿತ ಚಳವಳಿಗೆ ರಚನಾತ್ಮಕ ದಿಕ್ಕು ಸಿಗಬೇಕಾದರೆ ಯುವಜನಾಂಗ ಮುಂದೆ ಬರಬೇಕು ಎಂದು ಚಿಂತಕ ಜಯನ್ ಮಲ್ಪೆ ಕಿವಿಮಾತು ಹೇಳಿದರು.
ಪಾಂಗಳದ ಅಂಬೇಡ್ಕರ್ ಭವನದ ಹೊರಾಂಗಣದಲ್ಲಿ ಭಾನುವಾರ ಅಂಬೇಡ್ಕರ್ ಯುವಸೇನೆಯ ನೂತನ ಗ್ರಾಮ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ದಲಿತ ಚಳವಳಿಗೆ ಹೊಸ ಮನಸ್ಸುಗಳು ಸೇರಬೇಕು, ಜನರ ನೋವುಗಳ ನಡುವೆ ಅಂಬೇಡ್ಕರ್ ಅವರನ್ನು ಕಾಣುವಂತಹ ಯುವ ತಲೆಮಾರು ಮುಂದೆ ಬರಬೇಕು ಎಂದು ಸಲಹೆ ನೀಡಿದರು.
ಪ್ರಸ್ತುತ ದಲಿತ ಚಳವಳಿ ನಿದ್ರೆಗೆ ಜಾರಿದೆ. ನಾಟಕೀಯ ನಿದ್ರೆಯನ್ನು ತೊಲಗಿಸುವವರು ಯಾರು ಎಂಬ ಬಹುದೊಡ್ಡ ಪ್ರಶ್ನೆ ಕಾಡುತ್ತಿದೆ. ದಲಿತರ ಉದ್ಧಾರದ ಬಗ್ಗೆ ದಲಿತರಿಗೇ ಕಾಳಜಿ ಹಾಗೂ ಇಚ್ಛಾಶಕ್ತಿ ಇಲ್ಲದಿದ್ದರೆ ಸಮುದಾಯವನ್ನು ಮೇಲೆತ್ತಲು ಸಾದ್ಯವಿಲ್ಲ. ಈ ಬಗ್ಗೆ ಗಂಭೀರ ಚಿಂತನೆ ನಡೆಯಬೇಕು ಎಂದರು.
ಗುರಿಯಿಲ್ಲದ ಹೋರಾಟಗಳಿಂದ, ಬಹಿರಂಗ ಹೇಳಿಕೆಗಳಿಂದ ಸಮಾಜದ ಉದ್ಧಾರ ಸಾದ್ಯವಿಲ್ಲ. ಇದರಿಂದ ಯಾವ ಸಾಧನೆಯೂ ಮಾಡಲಾಗದು. ಸಾಮಾಜಿಕ ಚಳವಳಿ ರಾಜಕೀಯದಿಂದ ಹೊರತಾಗಿಲ್ಲ. ವೈಚಾರಿಕ ಸ್ಪಷ್ಟತೆ, ಖಚಿತ ಆಲೋಚನೆ, ಪ್ರಾಮಾಣಿಕ ಮನಸ್ಸುಗಳು ಹೆಚ್ಚು ಸೃಷ್ಟಿಯಾಗಬೇಕು ಎಂದು ಅಭಿಪ್ರಾಯಪಟ್ಟರು.
ಪಾಂಗಾಳ ಬಬ್ಬುಸ್ವಾಮಿ ದೈವಸ್ಥಾನದ ಗುರಿಕಾರ ಪಿ. ಸುಂದರ್ ಕಾರ್ಯಕ್ರಮ ಉದ್ಘಾಟಿಸಿದರು. ರಾಜೇಶ್ ಆಚಾರ್ಯ, ಹರೀಶ್ ಸಾಲ್ಯಾನ್, ಲೋಕೇಶ್ ಪಡುಬಿದ್ರಿ, ಗಣೇಶ್ ನೆರ್ಗಿ, ಸುಂದರ್ ಕಪ್ಪೆಟ್ಟು, ರಮೇಶ್ ಪಾಲ್, ರವಿ, ಅಶ್ವಿನಿ, ರಾಜೀವಿ ವಸಂತ, ಸಂತೋಷ್ ಕಪ್ಪೆಟ್ಟು ಇದ್ದರು. ಅನಿಲ್ ಕುಮಾರ್ ಸ್ವಾಗತಿಸಿದರು. ದಿನೇಶ್ ವಂದಿಸಿದರು. ಸತ್ಯವತಿ ಕಾರ್ಯಕ್ರಮ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.