ADVERTISEMENT

ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅನುಮತಿ

ದೀಪಾವಳಿ ಹಬ್ಬ ಆಚರಣೆ ವೇಳೆ ಮಾರ್ಗಸೂಚಿ ಪಾಲಿಸಿ: ಜಿಲ್ಲಾಧಿಕಾರಿ ಜಿ. ಜಗದೀಶ್

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2020, 15:37 IST
Last Updated 12 ನವೆಂಬರ್ 2020, 15:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಉಡುಪಿ: ದೀಪಾವಳಿ ಹಬ್ಬ ಆಚರಿಸುವಾಗ ಸಂದರ್ಭ ಸಾರ್ವಜನಿಕರು ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.

ಸರ್ಕಾರದ ಆದೇಶದಂತೆ ಹಸಿರು ಪಟಾಕಿಗಳನ್ನು ಬಿಟ್ಟು ಬೇರೆ ಪಟಾಕಿಗಳನ್ನು ಮಾರಾಟ ಮಾಡುವಂತಿಲ್ಲ. ಹಸಿರು ಪಟಾಕಿಗಳನ್ನು ರಾತ್ರಿ 8 ರಿಂದ 10 ಗಂಟೆಯವರೆಗೆ ಮಾತ್ರ ಹಚ್ಚಬೇಕು. ಸಂಬಂಧಪಟ್ಟ ಇಲಾಖೆ ಹಾಗೂ ಪ್ರಾಧಿಕಾರಗಳಿಂದ ಅಧಿಕೃತ ಪರವಾನಗಿ ಪಡೆದು ಮಾರಾಟಗಾರರು ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಬೇಕು.

ಕೋವಿಡ್ ಹಿನ್ನೆಲೆಯಲ್ಲಿ ಸುಡುಮದ್ದು ಮಾರಾಟ ಮಾಡುವ ಮಳಿಗೆಯ ಸುತ್ತ ನಿತ್ಯ ಸ್ಯಾನಿಟೈಸ್‌ ಮಾಡಬೇಕು. ಪಟಾಕಿ ಖರೀದಿಗೆ ಬರುವ ಸಾರ್ವಜನಿಕರಿಗೆ ಸ್ಯಾನಿಟೈಸರ್ ಮತ್ತು ಥರ್ಮಲ್ ಸ್ಕ್ರೀನಿಂಗ್ ಮಾಡಬೇಕು. ಪಟಾಕಿ ಖರೀದಿಸುವಾಗ ಮಾರಾಟಗಾರರು ಮತ್ತು ಸಾರ್ವಜನಿಕರು ಮುಖಗವಸು ಧರಿಸಬೇಕು. ಅಂತರ ಕಾಯ್ದುಕೊಳ್ಳಬೇಕು. ಜನದಟ್ಟಣೆಯಾಗದಂತೆ ನೋಡಿಕೊಳ್ಳಬೇಕು ಎಂದು ನಿಯಮಗಳನ್ನು ತಿಳಿಸಿದ್ದಾರೆ.

ADVERTISEMENT

ಜಿಂಕ್ ಶೀಟ್ ಅಥವಾ ಅಗ್ನಿ ನಿರೋಧಕ ವಸ್ತುಗಳಿಂದ ಮಳಿಗೆ ನಿರ್ಮಿಸಬೇಕು. ಮಳಿಗೆಯಿಂದ ಮಳಿಗೆಗೆ ಕನಿಷ್ಟ 6 ಮೀಟರ್ ಅಂತರ ಕಡ್ಡಾಯ. ಮಳಿಗೆ ಮುಂಭಾಗ, ಹಿಂಭಾಗದಲ್ಲಿ ಪ್ರವೇಶ ದ್ವಾರ, ಮುಂಭಾಗದಲ್ಲಿ ಅಗ್ನಿ ಶಾಮಕ ವಾಹನಗಳು ಓಡಾಡಲು ಸಾರ್ವಜನಿಕರು ಸರಾಗವಾಗಿ ಓಡಾಡಲು ಸ್ಥಳಾವಕಾಶ ಇರಬೇಕು ಎಂದು ಸೂಚಿಸಿದ್ದಾರೆ.

ಪಟಾಕಿಗಳನ್ನು ಬೆಳಿಗ್ಗೆ 6 ರಿಂದ ರಾತ್ರಿ 10 ಗಂಟೆಯವರೆಗೆ ಮಾತ್ರ ಮಾರಾಟ ಮಾಡಬೇಕು. ಮಳಿಗೆಗಳಲ್ಲಿ ವಿದ್ಯುತ್ ವಯರಿಂಗ್‌ಗೆ ಪೈಪ್ ಅಳವಡಿಸಬೇಕು. ಅಲಂಕಾರಿಕ ವಿದ್ಯುತ್ ಸೀರಿಯಲ್ ಸೆಟ್‌ಗಳನ್ನು ಹಾಕಬಾರದು. ಮಳಿಗೆಯೊಳಗೆ ಅಡುಗೆ ಮಾಡುವುದಾಗಲಿ, ಗ್ಯಾಸ್, ಕ್ಯಾಂಡಲ್ ಮತ್ತು ಅಗರಬತ್ತಿ ಉರಿಸುವುದಕ್ಕೆ ನಿರ್ಬಂಧವಿದೆ. ಪರವಾನಗಿ ಅವಧಿ ಮುಗಿದ ನಂತರ ಉಳಿದ ಸುಡುಮದ್ದುಗಳನ್ನು ಮನೆಗೆ ಕೊಂಡೊಯ್ಯದೆ ಅಧಿಕೃತ ಸಗಟು ಮಾರಾಟಗಾರರಿಗೆ ಹಿಂದಿರುಗಿಸಬೇಕು. ಮಳಿಗೆಯಲ್ಲಿ ಉಳಿದ ತ್ಯಾಜ್ಯವನ್ನು ಸುಡುಮದ್ದುಗಳಿಂದ ಬೇರ್ಪಡಿಸಿ ತ್ಯಾಜ್ಯ ವಿಲೇವಾರಿ ಸಂಗ್ರಹಣಾ ಸ್ಥಳಕ್ಕೆ ಸಾಗಿಸಬೇಕು.

ಈ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005 ಹಾಗೂ ಸೆಕ್ಷನ್ 188 ಅಡಿಯಲ್ಲಿ ಶಿಸ್ತು ಹಾಗೂ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.