ADVERTISEMENT

ಕುಂದ ಕನ್ನಡ ಭಾಷೆಯ ಅಧ್ಯಯನ ಪೀಠ ಸ್ಥಾಪನೆಗೆ ಪ್ರಸ್ತಾವ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2021, 15:35 IST
Last Updated 2 ಮಾರ್ಚ್ 2021, 15:35 IST

ಉಡುಪಿ: ಮಂಗಳೂರು ವಿಶ್ವವಿದ್ಯಾಲದಯದಲ್ಲಿ ‘ಕುಂದ ಕನ್ನಡ ಭಾಷೆಯ ಅಧ್ಯಯನ ಪೀಠ’ ಸ್ಥಾಪಿಸಲು ಕೋರಿ ವಿಶ್ವವಿದ್ಯಾಲಯದಿಂದ ಸೋಮವಾರ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದೆ.

ಈಚೆಗೆ ನಡೆದ ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸಭೆಯಲ್ಲಿ ಕುಂದ ಕನ್ನಡ ಭಾಷೆಯ ಅಧ್ಯಯನ ಪೀಠ ಸ್ಥಾಪನೆಗೆ ನಿರ್ಣಯ ತೆಗೆದುಕೊಳ್ಳಲಾಗಿದೆ. ಕನ್ನಡ ಭಾಷೆಯ ಹಲವು ಉಪ ಭಾಷೆಗಳಲ್ಲಿ ಕುಂದ ಕನ್ನಡವೂ ಒಂದಾಗಿದ್ದು, ಉಡುಪಿ ಜಿಲ್ಲೆಯ ಬೈಂದೂರು, ಕುಂದಾಪುರ, ಬ್ರಹ್ಮಾವರ, ಹೆಬ್ರಿ ಹಾಗೂ ಉಡುಪಿ ತಾಲ್ಲೂಕಿನ ಕೆಲವು ಭಾಗಗಳಿಗೆ ಕುಂದ ಕನ್ನಡ ವಿಸ್ತರಿಸಿಕೊಂಡಿದೆ.

ಕೋಟ ಶಿವರಾಮ ಕಾರಂತರು, ಮೊಗೇರಿ ಗೋಪಾಲಕೃಷ್ಣ ಅಡಿಗರು, ಗುಲ್ವಾಡಿ ವೆಂಕಟರಾಯರು, ಈ ಮಣ್ಣಿನ ಸತ್ವ ಹಾಗೂ ಭಾಷಾ ವೈಶಿಷ್ಟವನ್ನು ಸಾಹಿತ್ಯದ ಮೂಲಕ ವಿಶ್ವಕ್ಕೆ ಪರಿಚಯಿಸಿದ್ದಾರೆ. ಆಧುನಿಕತೆಯ ಪ್ರಭಾವದಿಂದ ಕುಂದ ಕನ್ನಡ ಪದಗಳು ಮರೆಯಾಗುತ್ತಿವೆ. ಭಾಷೆಯ ಶಬ್ದಕೋಶ ರಚನೆಯ ಅಗತ್ಯ ಹಾಗೂ ಸಂಶೋಧನೆಯ ನಿಟ್ಟಿನಲ್ಲಿ ಅಧ್ಯಯನ ಪೀಠ ಸ್ಥಾಪನೆಗೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ವಿಶ್ವವಿದ್ಯಾಲಯಕ್ಕೆ ಪ್ರಸ್ತಾವ ಸಲ್ಲಿಸಿದ್ದಾರೆ ಎಂದು ವಿವಿ ಕುಲಪತಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

ಕುಂದ ಕನ್ನಡ ಅಧ್ಯಯನ ಪೀಠ ಸ್ಥಾಪನೆಗೆ ಅನುಮತಿ ನೀಡಬೇಕು ಹಾಗೂ ಮೂಲನಿಧಿಯಾಗಿ ₹ 25 ಲಕ್ಷ ಅನುದಾನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.