ADVERTISEMENT

ಶ್ರೀಗಳ ನಿಧನಕ್ಕೆ ಕಂಬನಿ ಮಿಡಿದ ಉಡುಪಿ ಭಕ್ತರು

ಸ್ವಯಂಪ್ರೇರಿತರಾಗಿ ಅಂಗಡಿ ಬಂದ್ ಮಾಡಿ ಗೌರವ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2019, 13:53 IST
Last Updated 29 ಡಿಸೆಂಬರ್ 2019, 13:53 IST
ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು ಮೆರವಣಿಗೆಯಲ್ಲಿ ಮುಂದೆ ಸಾಗುತ್ತಾ ಗುರುವಿಗೆ ಗೌರವ ಸಲ್ಲಿಸಿದರು.
ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು ಮೆರವಣಿಗೆಯಲ್ಲಿ ಮುಂದೆ ಸಾಗುತ್ತಾ ಗುರುವಿಗೆ ಗೌರವ ಸಲ್ಲಿಸಿದರು.   

ಉಡುಪಿ: ಅಷ್ಟಮಠಗಳ ಹಿರಿಯಣ್ಣನಂತಿದ್ದ ಪೇಜಾವರ ಶ್ರೀಗಳ ನಿಧನ ಭಕ್ತರು ಹಾಗೂ ಅಭಿಮಾನಿಗಳಿಗೆ ಅತೀವ ದುಖಃವನ್ನುಂಟುಮಾಡಿದೆ. ಶ್ರೀಗಳು ಇನ್ನಿಲ್ಲ ಎಂಬ ಸುದ್ದಿ ಹೊರಬೀಳುತ್ತಿದ್ದಂತೆ ಗುರುವನ್ನು ನೆನೆದು ಭಕ್ತರು ಕಂಬನಿ ಮಿಡಿದರು.

ಬೆಳಿಗ್ಗೆ 10.20ಕ್ಕೆ ಶ್ರೀಗಳ ಪಾರ್ಥಿವ ಶರೀರವನ್ನು ಮಠದಿಂದ ಮೆರವಣಿಗೆ ಮೂಲಕ ಹೊರತರುತ್ತಿದ್ದಂತೆ ಭಕ್ತರ ಆಕ್ರಂದನ ಜೋರಾಯಿತು. ಗೋವಿಂದ, ಗೋವಿಂದ ನಾಮಸ್ಮರಣೆ ಮಾಡುತ್ತಲೇ ಭಕ್ತರ ಕಣ್ಣಲ್ಲಿ ನೀರು ಜಿನುಗುತ್ತಿತ್ತು.

ಪೇಜಾವರ ಮಠದ ಯತಿ ವಿಶ್ವೇಶತೀರ್ಥರು ಅಂತಿಮ ವಿಧಿವಿಧಾನಗಳ ನೇತೃತ್ವ ವಹಿಸಿಕೊಂಡು ಹಿರಿಯ ಯತಿಗಳಿಗೆ ಭಾವಪೂರ್ಣ ಬೀಳ್ಕೊಡುಗೆ ಕೊಟ್ಟರು. ಮೆರವಣಿಗೆಯಲ್ಲಿ ಮುಂದೆ ನಿಂತು ಗೋವಿಂದ ಸ್ಮರಣೆ ಮಾಡುತ್ತಾ ಸಾಗಿದರು. ಅಷ್ಟಮಠಗಳ ಯತಿಗಳು ಹಿರಿಯ ಯತಿಗಳಿಗೆ ಅಂತಿಮ ಗೌರವ ಸಮರ್ಪಿಸಿದರು.

ADVERTISEMENT

ಸಾರ್ವನಿಕರಿಗೆ ಪ್ರವೇಶ ನಿಷಿದ್ಧವಾಗಿದ್ದರೂ, ಗುರುವನ್ನು ನೋಡುವ ಹಂಬಲದಿಂದ ಪೊಲೀಸರ ಕಣ್ತಪ್ಪಿಸಿ ಬಂದಿದ್ದ ನೂರಾರು ಭಕ್ತರು ಕಂಬನಿ ಮಿಡಿದರು.

ಪಾರ್ಥಿವ ಶರೀರವನ್ನು ಇಡಲಾಗಿದ್ದ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲೂ ಸಾವಿರಾರು ಮಂದಿ ಅಂತಿಮ ದರ್ಶನ ಪಡೆದರು.

ರಥಬೀದಿ ಬೆಳಿಗ್ಗೆ ಅಕ್ಷರಶಃ ಸ್ತಬ್ಧವಾಗಿತ್ತು. ಅಂಗಡಿ ಮುಂಗಟ್ಟುಗಳು ತೆರೆದಿರಲಿಲ್ಲ. ನಗರದಲ್ಲಿಯೂ ಬಹುತೇಕ ಮಳಿಗೆಗಳು ಮುಚ್ಚಿದ್ದು ಕಂಡುಬಂತು. ಮೃತದೇಹ ಬೆಂಗಳೂರಿಗೆ ರವಾನೆಯಾದ ಬಳಿಕ ನಗರ ಮತ್ತೆ ಸಹಜಸ್ಥಿತಿಗೆ ಮರಳಿತು.

ವಿಶ್ವಪ್ರಸನ್ನ ತೀರ್ಥರ ವಿವರ

ಶ್ರೀಗಳ ನಾಮಧೇಯ: ವಿಶ್ವಪ್ರಸನ್ನ ತೀರ್ಥರು

ಪೂರ್ವಾಶ್ರಮದ ಹೆಸರು: ದೇವಿದಾಸ ಭಟ್ಟ

ತಂದೆ ತಾಯಿ: ಕೃಷ್ಣಭಟ್ಟರು, ಯಮುನಾ

ಹುಟ್ಟೂರು– ದಕ್ಷಿಣ ಕನ್ನಡ ಜಿಲ್ಲೆಯ ಪಕ್ಷಿಕೆರೆ

ವಯಸ್ಸು–52

ಸನ್ಯಾಸ ಸ್ವೀಕರಿಸಿದ್ದು: 1988

ಶಿಕ್ಷಣ: ಪದವಿ, ಸಂಸ್ಕೃತ ಕಾಲೇಜಿನಲ್ಲಿ ವೇದಗಳ ಅಧ್ಯಯನ

ಶ್ರೀಗಳ ವಿಶೇಷ: ಪ್ರಕೃತಿ ಪ್ರಿಯರು, ಗೋಶಾಲೆಗಳ ಸ್ಥಾಪನೆ, ಅತ್ಯುತ್ತಮ ಯೋಗಪಟು

ಪೇಜಾವರ ಶ್ರೀಗಳಿಂದ ಸುಧಾ ಮಂಗಳ ಪ್ರವಚನ

ಸಾಧನೆ: 27 ವರ್ಷಗಳಿಂದ ನಿರಂತರ ಪುಣ್ಯ ಕ್ಷೇತ್ರಗಳಿಗೆ ಪಾದಯಾತ್ರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.