ಉಡುಪಿ: ಜಿಲ್ಲಾ ಸರ್ವೇಕ್ಷಣಾ ಘಟಕ, ಅಸಾಂಕ್ರಾಮಿಕ ರೋಗ ತಡೆ ಘಟಕ ಹಾಗೂ ಮಣಿಪಾಲ ಕೆಎಂಸಿ ಸಮುದಾಯ ವೈದ್ಯಕೀಯ ವಿಭಾಗದ ವತಿಯಿಂದ ಅಸಾಂಕ್ರಾಮಿಕ ರೋಗ ತಡೆಗಟ್ಟುವ ಹಾಗೂ ನಿಯಂತ್ರಣ ಕುರಿತ ಮೂರು ದಿನಗಳ ಕಾರ್ಯಾಗಾರ ಬುಧವಾರ ಮಾಹೆಯ ಇಂಟರಾಕ್ಟ್ ಸಭಾಂಗಣದಲ್ಲಿ ನಡೆಯಿತು.
ಡಿಎಚ್ಒ ಡಾ.ನಾಗಭೂಷಣ ಉಡುಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ‘ಅಸಾಂಕ್ರಾಮಿಕ ಖಾಯಿಲೆಗಳು ಅಪಾಯಕಾರಿಯಾಗಿದ್ದು, ಖಾಯಿಲೆಗಳು ಬಾರದಂತೆ ಎಚ್ಚರ ವಹಿಸಬೇಕು. ಅಸಾಂಕ್ರಮಿಕ ಕಾಯಿಲೆಗಳ ಕುರಿತು ಪ್ರತಿ ಮನೆ ಮನೆಯಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಯಬೇಕು' ಎಂದರು.
ಕೆಎಂಸಿ ಡೀನ್ ಡಾ.ಶರತ್ ಕೆ.ರಾವ್ ಮಾತನಾಡಿ ಸಮುದಾಯಕ್ಕೆ ಹತ್ತಿರವಾಗಿರುವ ವೈದ್ಯರಿಂದ ಅಸಾಂಕ್ರಮಿಕ ರೋಗಗಳನ್ನು ನಿಯಂತ್ರಿಸಲು ಸಾಧ್ಯವಿದೆ. ರೋಗವನ್ನು ಶೀಘ್ರ ಪತ್ತೆ ಮಾಡುವುದರ ಜತೆಗೆ ಮುಂದೆ ಬಾರದಂತೆ ಎಚ್ಚರಿಕೆ ವಹಿಸಬೇಕು ಎಂದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಾಗರತ್ನ ಶಾಸ್ತ್ರಿ ಮಾತನಾಡಿ ಪ್ರತಿ ರೋಗಿಗೂ ವೈದ್ಯರ ನಗುಮುಖದ ಆರೋಗ್ಯ ಸೇವೆ ಸಿಗಲಿ ಎಂದು ಆಶಿಸಿದರು.
ಕಸ್ತೂರಬಾ ಆಸ್ಪತ್ರೆಯ ವೈದ್ಯಕೀಯ ಅಧಿಕ್ಷಕ ಡಾ.ಅವಿನಾಶ್ ಶೆಟ್ಟಿ ಮಾತನಾಡಿ, ಸಮುದಾಯ ಆರೋಗ್ಯ ವಿಭಾಗ ಮತ್ತು ಆರೋಗ್ಯ ಇಲಾಖೆಗಳ ನಡುವಿನ ಪರಸ್ಪರ ಸಹಕಾರದಿಂದ ಆಸಾಂಕ್ರಮಿಕ ರೋಗವನ್ನು ನಿಯಂತ್ರಿಸಬಹುದು ಎಂದರು.
ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥ ಹಾಗೂ ಶಿಬಿರದ ಸಂಯೋಜಕ ಡಾ.ಅಶ್ವಿನಿ ಕುಮಾರ್ ಮಾತನಾಡಿ ಮೂರು ದಿನಗಳ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿರುವ 300ಕ್ಕೂ ಹೆಚ್ಚು ತರಬೇತಿ ಹೊಂದಿದ ವೈದ್ಯರು, ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿಗಳು, ಪ್ರಯೋಗ ತಂತ್ರಜ್ಞರು, ಫಿಸಿಯೋಥೆರಪಿಸ್ಟ್ಗಳು, ಆಪ್ತಸಮಾಲೋಚಕರು ತಂಡಗಳಲ್ಲಿ ಕೆಲಸ ಮಾಡಲಿದ್ದಾರೆ.
ಜಿಲ್ಲೆಯಲ್ಲಿ ಹೆಚ್ಚುತಿರುವ ಅಸಾಂಕ್ರಮಿಕ ಖಾಯಿಲೆಗಳಾದ ಕ್ಯಾನ್ಸರ್, ಹೃದ್ರೋಗ, ರಕ್ತನಾಳ ಸಂಬಂಧಿ ಖಾಯಿಲೆಗಳು, ಡಯಾಬಿಟಿಸ್ನಂತ ಕಾಯಿಲೆಗಳನ್ನು ನಿಯಂತ್ರಣಕ್ಕೆ ತರುವಲ್ಲಿ ಸಾಧ್ಯವಾಗಲಿದೆ ಎಂದರು.
ಸಮುದಾಯ ವೈದ್ಯಕೀಯ ವಿಭಾಗದ ಡಾ.ರಂಜಿತಾ ಶೆಟ್ಟಿ ದನ್ಯವಾದ ಅರ್ಪಿಸಿದರು. ಡಾ.ಅಫ್ರೋಜ್ ಕಾರ್ಯಕ್ರಮ ನಿರ್ವಹಿಸಿದರು. ಜಿಲ್ಲಾ ಸರ್ವೆಕ್ಷಣಾ ಕಚೇರಿಯ ಡಾ.ಅಂಜಲಿ ಕಾರ್ಯಕ್ರಮ ಸಂಯೋಜಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.