ಕುಂದಾಪುರ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ 22 ವರ್ಷಗಳಿಂದ ನೆಲೆಸಿದ್ದ ಇಂದಿರಾ ಎಂಬ ಆನೆ ಮಂಗಳವಾರ ರಾತ್ರಿ ಮೃತಪಟ್ಟಿದೆ.
ಆನೆಗೆ ಸುಮಾರು 57 ವರ್ಷ ವಯಸ್ಸಾಗಿತ್ತು. ಕೆಲವು ದಿನಗಳಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿತ್ತು. ಮಂಗಳವಾರ ಬೆಳಿಗ್ಗೆ ಪರಿಸ್ಥಿತಿ ಗಂಭೀರವಾಗಿತ್ತು. ಕೂಡಲೇ ವೈದ್ಯರು ಚಿಕಿತ್ಸೆ ನೀಡಿದರಾದರೂ ಚಿಕಿತ್ಸೆಗೆ ಸ್ಪಂದಿಸದೆ ರಾತ್ರಿ ಮೃತಪಟ್ಟಿತು ಎಂದು ದೇವಸ್ಥಾನದ ಸಿಬ್ಬಂದಿ ತಿಳಿಸಿದ್ದಾರೆ.
ಬಾಳೆಹೊನ್ನೂರಿನ ಕೃಷಿಕ ಮಧು ಎಂಬುವರು ದೇವಸ್ಥಾನಕ್ಕೆ ಆನೆಯನ್ನು ದಾನವಾಗಿ ಕೊಟ್ಟಿದ್ದರು. ದೇಗುಲದ ಧಾರ್ಮಿಕ ವಿಧಿವಿಧಾನಗಳಿಗೆ ಆನೆಯನ್ನು ಬಳಸಿಕೊಳ್ಳಲಾಗುತ್ತಿತ್ತು. ಕೊಲ್ಲೂರಿಗೆ ಬರುವ ಭಕ್ತರಿಗೆ ಇಂದಿರಾ ಆನೆ ವಿಶೇಷ ಆಕರ್ಷಣೆಯಾಗಿತ್ತು. ಸ್ಥಳೀಯರು ಆನೆಯೊಂದಿಗೆ ಭಾವನಾತ್ಮಕ ನಂಟು ಹೊಂದಿದ್ದರು. ಆನೆ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಪೇಟೆಯ ವರ್ತಕರು, ನಾಗರಿಕರು ಶವವನ್ನು ವೀಕ್ಷಣೆ ಮಾಡಿ ಕಂಬನಿ ಮಿಡಿಯುತ್ತಿದ್ದಾರೆ.
ಬುಧವಾರ ಆನೆಯ ಅಂತ್ಯಸಂಸ್ಕಾರ ನಡೆಯಿತು. ಇಂದಿರಾ ನಿಧನಕ್ಕೆ ಮಾವುತ ಅಯ್ಯಣ್ಣ ಕಂಬನಿ ಮಿಡಿದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.