ADVERTISEMENT

ಯಕ್ಷಗಾನವನ್ನು ಇನ್ನಷ್ಟು ಪ್ರೋತ್ಸಾಹಿಸಿ: ಶಾಸಕ ಕಿರಣ್ ಕುಮಾರ್ ಕೊಡ್ಗಿ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2024, 2:16 IST
Last Updated 24 ಆಗಸ್ಟ್ 2024, 2:16 IST
ಕಾರ್ಯಕ್ರಮದಲ್ಲಿ ಕಲಾವಿದ ಗೋಡೆ ನಾರಾಯಣ ಹೆಗಡೆ, ಕಲಾಪೋಷಕ ಡಾ.ಆದರ್ಶ ಹೆಬ್ಬಾರ್ ಅವರನ್ನು ಸನ್ಮಾನಿಸಲಾಯಿತು
ಕಾರ್ಯಕ್ರಮದಲ್ಲಿ ಕಲಾವಿದ ಗೋಡೆ ನಾರಾಯಣ ಹೆಗಡೆ, ಕಲಾಪೋಷಕ ಡಾ.ಆದರ್ಶ ಹೆಬ್ಬಾರ್ ಅವರನ್ನು ಸನ್ಮಾನಿಸಲಾಯಿತು   

ಕುಂದಾಪುರ: ಯಕ್ಷಗಾನ ಉಳಿಸುವ ನಿಟ್ಟಿನಲ್ಲಿ ಕಲಾಸಂಘ ಉಡುಪಿ ನೇತೃತ್ವದಲ್ಲಿ ಯಕ್ಷ ಶಿಕ್ಷಣ ಟ್ರಸ್ಟ್ ಸಹಯೋಗದಲ್ಲಿ ಕಳೆದ ಬಾರಿ 13 ಹೈಸ್ಕೂಲ್‌ಗೆ ನೀಡಿರುವ ತರಬೇತಿಯನ್ನು, ಈ ಬಾರಿ 23 ಹೈಸ್ಕೂಲ್‌ಗೆ ವಿಸ್ತರಿಸಿರುವುದು ಸ್ತುತ್ಯರ್ಹ ಎಂದು ಶಾಸಕ ಕಿರಣ್ ಕುಮಾರ್ ಕೊಡ್ಗಿ ಮೆಚ್ಚುಗೆ ವ್ಯಕ್ತಪಡಿಸಿದರು.

ಇಲ್ಲಿಗೆ ಸಮೀಪದ ಸಹನಾ ಕನ್‌ವೆನ್ಷನ್ ಸೆಂಟರ್‌ನಲ್ಲಿ ಆದಿತ್ಯ ಯಕ್ಷ ಟ್ರಸ್ಟ್ ಆಶ್ರಯದಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿ, ಯಕ್ಷಗಾನ ಸಾಧಕರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಎಲ್ಲಾ ವರ್ಗದ ಪ್ರೆಕ್ಷಕರನ್ನು ಸೆಳೆಯುವ, ಸಾಂಸ್ಕೃತಿಕ ಸೌರಭ ಅರಳಿಸುವ ಯಕ್ಷಗಾನವನ್ನು ಉಳಿಸಿ, ಮುಂದಿನ ಪೀಳಿಗೆ ವರ್ಗಾಯಿಸುವ ಕೆಲಸ ಇನ್ನಷ್ಟು ನಡೆಯಬೇಕು ಎಂದರು.

ADVERTISEMENT

ಪ್ರಾಸ್ತಾವಿಕ ಮಾತನಾಡಿದ ಆದಿತ್ಯ ಟ್ರಸ್ಟ್ ಸ್ಥಾಪಕ ಮಹಾಬಲೇಶ್ವರ ಭಟ್ ಕ್ಯಾದಗಿ, ಯಕ್ಷಗಾನವನ್ನು ಬೆಳೆಸುವ ಹಂಬಲದಿಂದ ಟ್ರಸ್ಟ್‌ ಸ್ಥಾಪಿಸಲಾಗಿದೆ. ಈ ನಿಟ್ಟಿನಲ್ಲಿ ಯಕ್ಷಗಾನ, ನಾಟಕ, ತಾಳಮದ್ದಲೆ, ಏಕವ್ಯಕ್ತಿ ಪ್ರದರ್ಶನ, ಕಲಾವಿದರಿಗೆ ಸನ್ಮಾನ ಮುಂತಾದ ಹಲವು ಕಾರ್ಯಕ್ರಮ ಸಂಘಟಿಸಲಾಗಿದೆ ಎಂದು ತಿಳಿಸಿದರು.

ಧಾರವಾಡದ ಹೋಟೆಲ್ ಉದ್ಯಮಿ ಸುಗ್ಗಿ ಸುಧಾಕರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಲಾವಿದ ಗೋಡೆ ನಾರಾಯಣ ಹೆಗಡೆ, ಯಕ್ಷಗಾನ ಪೋಷಕ ಡಾ.ಆದರ್ಶ ಹೆಬ್ಬಾರ್ ಅವರನ್ನು ಸನ್ಮಾನಿಸಲಾಯಿತು. ಸಾಲಿಗ್ರಾಮ ಮೇಳದ ಯಜಮಾನ ಪಿ. ಕಿಶನ್ ಹೆಗ್ಡೆ, ವಕೀಲ ಶರತ್ ಶೆಟ್ಟಿ ಕುಂದಾಪುರ, ಯಕ್ಷಕಲಾ ಬಳಗ ಜಿಲ್ಲಾಧ್ಯಕ್ಷ ನಾಗೇಶ್ ಜೋಶಿ, ತೆಕ್ಕಟ್ಟೆ ಲಯನ್ಸ್ ಕ್ಲಬ್‌ನ ಮಲ್ಯಾಡಿ ಸೀತಾರಾಮ್ ಶೆಟ್ಟಿ, ಉದ್ಯಮಿಗಳಾದ ಯೋಗೇಶ್ ಗಾಣಿಗ, ಸಹನಾ ಗ್ರೂಪ್ಸ್‌ನ ಸುರೇಂದ್ರ ಶೆಟ್ಟಿ, ಬಳ್ಕೂರು ಗೋಪಾಲ ಆಚಾರ್ಯ, ರಾಜಾರಾಮ್ ಶೆಟ್ಟಿ ಇದ್ದರು.

ವೈಕೊ ಸುಂದರ್ ಸ್ವಾಗತಿಸಿದರು, ಅಂಬಿಕಾ ವಕ್ವಾಡಿ ಸನ್ಮಾನ ಪತ್ರ ವಾಚಿಸಿದರು. ಕ್ಯಾದಗಿ ಮಹಾಬಲೇಶ್ವರ ಭಟ್ ವಂದಿಸಿದರು.

ಬಳಿಕ ಬಡಗುತಿಟ್ಟಿನ ಕಲಾವಿದರ ಕೂಡುವಿಕೆಯಲ್ಲಿ 4 ಪೌರಾಣಿಕ ಯಕ್ಷಗಾನ ಪ್ರದರ್ಶನ ನಡೆಯಿತು. ರಾಮನಾಗಿ ಗೋಡೆ ನಾರಾಯಣ ಹೆಗಡೆ, ಲವ–ಕುಶರಾಗಿ ಯಾಜಿ, ಕೊಂಡದಕುಳಿ, ಶತ್ರುಘ್ನನಾಗಿ ತೀರ್ಥಹಳ್ಳಿ ಗೋಪಾಲ್ ಆಚಾರ್, ಅರ್ಜುನನಾಗಿ ಶಶಿಕಾಂತ್ ಶೆಟ್ಟಿ, ಊರ್ವಶಿಯಾಗಿ ಯಲಗುಪ್ಪ ರಂಜಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.