
ಬ್ರಹ್ಮಾವರ: ಕಠಿಣ ಪರಿಶ್ರಮ, ಕೆಲಸದ ಮೇಲೆ ಆಸಕ್ತಿ, ಆತ್ಮವಿಶ್ವಾಸ, ಶ್ರದ್ಧೆಯಿಂದ ಯಶಸ್ಸು ಸಾಧಿಸಲು ಸಾಧ್ಯ ಎಂದು ಉದ್ಯಮಿ ಸುಜಾತಾ ಅಂದ್ರಾದೆ ಹೇಳಿದರು.
ಇಲ್ಲಿನ ರುಡ್ಸೆಟ್ ಸಂಸ್ಥೆಯಲ್ಲಿ ಪ್ರಧಾನಮಂತ್ರಿ ಉದ್ಯೋಗ ಸೃಜನೆ ಕಾರ್ಯಕ್ರಮದಡಿ (ಪಿಎಂಇಜಿಪಿ ) ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಕೆ, ದುರಸ್ತಿ ಮತ್ತು ಸೇವೆ ತರಬೇತಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ತರಬೇತಿಯ ಅವಧಿಯಲ್ಲಿ ಸರಿ ತಪ್ಪುಗಳ ಅರಿವು ಸಿಗುತ್ತದೆ. ಗುಣಮಟ್ಟದ ಕುರಿತು ಕಾಳಜಿ ವಹಿಸಿ ಎಂದು ಹೇಳಿದರು.
ರುಡ್ಸೆಟ್ ನಿರ್ದೇಶಕ ಬೊಮ್ಮಯ್ಯ ಎಂ. ಮಾತನಾಡಿ, ಪ್ರಮಾಣಪತ್ರ, ಸಬ್ಸಿಡಿ ಲೋನ್ಗಳ ಉದ್ದೇಶಕ್ಕಾಗಿ ತರಬೇತಿ ಪಡೆದುಕೊಳ್ಳುವ ಬದಲು ವೈಯಕ್ತಿಕ ಬೆಳವಣಿಗೆ, ಉದ್ಯಮದ ಬೆಳವಣಿಗಾಗಿ ಪಡೆಯಿರಿ. ಸರ್ಕಾರದ ಯೋಜನೆಗಳನ್ನು ಉತ್ತಮವಾಗಿ ಬಳಸಿಕೊಳ್ಳಿ. ಸಂಸ್ಥೆ ಹಾಗೂ ಬ್ಯಾಂಕಿನೊಂದಿಗೆ ಉತ್ತಮ ಸಂಬಂಧ ಇಟ್ಟುಕೊಂಡು ಯಶಸ್ವಿ ಉದ್ಯಮಿಗಳಾಗಿ ಎಂದರು.
ಅತಿಥಿ ಉಪನ್ಯಾಸಕ ಗುರುರಾಜ್ ಭಾಗವಹಿಸಿದ್ದರು. ಉಪನ್ಯಾಸಕರಾದ ಚೈತ್ರಾ ಕೆ. ಸ್ವಾಗತಿಸಿದರು. ಸಂತೋಷ ವಂದಿಸಿದರು.