
ಕೋಟ (ಬ್ರಹ್ಮಾವರ): ತಾಲ್ಲೂಕಿನ ಸಾಸ್ತಾನ ಟೋಲ್ನಲ್ಲಿ ಅಂಗವೈಕಲ್ಯ ಹೊಂದಿದ ಮಾಜಿ ಯೋಧನ ಬಳಿ ಟೋಲ್ ವಿನಾಯಿತಿ ಪತ್ರವಿದ್ದರೂ ಸಾರ್ವಜನಿಕರ ಎದುರು ನಿಂದಿಸಿ ಅವಮಾನಿಸಿದ ಟೋಲ್ ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸೈನಿಕರ ಸಂಘ ಕೋಟ ಪೊಲೀಸ್ ಠಾಣೆಗೆ ಮಂಗಳವಾರ ದೂರು ನೀಡಿದೆ.
ಮೂಲತಃ ಕಾಸರಗೋಡು ಜಿಲ್ಲೆಯವರಾದ ನಿವೃತ್ತ ಪ್ಯಾರಾ ಕಮಾಂಡೊ ಶ್ಯಾಮರಾಜ್ ಅವರ ಪತ್ನಿ ಮಿಲಿಟರಿ ನರ್ಸಿಂಗ್ ಸೇವೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ವರ್ಗಾವಣೆ ಹಿನ್ನೆಲೆಯಲ್ಲಿ ಕುಟುಂಬ ಸಮೇತರಾಗಿ ಪ್ರಯಾಣಿಸುತ್ತಿದ್ದ ವೇಳೆ ಭಾನುವಾರ (ಜ. 25) ಸಾಸ್ತಾನ ಟೋಲ್ ಪ್ಲಾಜಾದಲ್ಲಿ ಸಿಬ್ಬಂದಿ ವಿನಾಯಿತಿ ನೀಡಲು ನಿರಾಕರಿಸಿ ಸಾರ್ವಜನಿಕರ ಎದುರು ನಿಂದಿಸಿ ಅವಮಾನಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಲು ಹಿಂಜರಿಯದ ಸೈನಿಕರಿಗೆ ಅವಮಾನ ಮಾಡುವುದು ದೇಶಕ್ಕೆ ಮಾಡಿದ ಅವಮಾನ. ಇದು ದೇಶದ್ರೋಹಕ್ಕೆ ಸಮಾನ ಎಂದು ಮಾಜಿ ಸೈನಿಕರ ಸಂಘ ಆಕ್ರೋಶ ವ್ಯಕ್ತಪಡಿಸಿದೆ. ಈ ಸಂಬಂಧ ಸಾಸ್ತಾನ ಟೋಲ್ ಯೋಜನಾ ಪ್ರಾಧಿಕಾರದ ಅಬ್ದುಲ್ ಜಾವೀದ್, ಜಗನ್ ಮೋಹನ ರೆಡ್ಡಿ, ಟೋಲ್ ಮ್ಯಾನೇಜರ್ ಬಾಬು, ಟೋಲ್ ಮ್ಯಾನೇಜರ್ ತಿಮ್ಮಯ್ಯ, ಸಿಬ್ಬಂದಿ ಸುರೇಶ, ಶಿವನಾಗ ಅವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದೆ.
ದೂರು ಸ್ವೀಕರಿಸಿದ ಡಿವೈಎಸ್ಪಿ ಪ್ರಭು ಡಿ.ಟಿ. ಪ್ರತಿಕ್ರಿಯಿಸಿ, ದೂರಿನಲ್ಲಿ ಕೆಲವು ಸೆಕ್ಷನ್ಗಳು ತಕ್ಷಣವೇ ಪ್ರಕರಣ ದಾಖಲಿಸಲು ಅನ್ವಯವಾಗದ ಕಾರಣ ದೂರು ಸ್ವೀಕರಿಸಲಾಗಿದೆ. ಸಂಬಂಧಪಟ್ಟವರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ನಡೆಸಿದ ಬಳಿಕ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಕೋಟ ಪೊಲೀಸ್ ಠಾಣೆ ಸಬ್ಇನ್ಸ್ಪೆಕ್ಟರ್ ಪ್ರವೀಣ ಕುಮಾರ್ ಆರ್, ಎಎಸ್ಐ ಮಾಂತೇಶ ಜಾಭಗೌಡ, ಮಾಜಿ ಸೈನಿಕರಾದ ಕೇಶವ ಮಲ್ಪೆ, ಉಪಾಧ್ಯಕ್ಷ ಚಂದ್ರ ಅಮೀನ್, ಅಶೋಕ, ಸುರೇಶ, ಹೆದ್ದಾರಿ ಹೋರಾಟ ಸಮಿತಿಯ ಶ್ಯಾಮ ಸುಂದರ ನಾಯರಿ, ವಿಠಲ ಪೂಜಾರಿ, ಪ್ರತಾಪ ಶೆಟ್ಟಿ, ದಿನೇಶ ಗಾಣಿಗ, ನಾಗರಾಜ ಗಾಣಿಗ, ರವೀಂದ್ರ ತಿಂಗಳಾಯ, ರತ್ನಾಕರ ಬಾರಿಕೆರೆ, ಕೋಟ ಕೀರ್ತೀಶ ಪೂಜಾರಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.