ಪಡುಬಿದ್ರಿ: ಅದಮಾರು ಆದರ್ಶ ಸಂಘಗಳ ಒಕ್ಕೂಟ, ರಾಷ್ಟ್ರೀಯ ಸೇವಾ ಯೋಜನೆ ಅದಮಾರು ಘಟಕ, ಅದಮಾರು ಪೂರ್ಣಪ್ರಜ್ಞ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಎರ್ಮಾಳು ಮೂಡಬೆಟ್ಟು ಬರ್ಪಾಣಿ ದಿ. ಜಗನ್ನಾಥ ಶೆಟ್ಟಿಯವರ ಮನೆ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ‘ಗದ್ದೆಯಲ್ಲಿ ಒಂದು ದಿನ’ ಕಾರ್ಯಕ್ರಮ ನಡೆಯಿತು.
ಕೋಣಗಳ ಮೂಲಕ ಉಳುಮೆ ಮಾಡುವ ಪ್ರಾತ್ಯಕ್ಷಿಕೆ, ನೇಜಿ ನೆಡುವ ಸ್ಪರ್ಧೆ, ಕೆಸರು ಗದ್ದೆಯಲ್ಲಿ ವಾಲಿಬಾಲ್, ಮಡಕೆ ಒಡೆಯುವ ಸ್ಪರ್ಧೆ, ಹಗ್ಗಜಗ್ಗಾಟ, ಓಟದ ಸ್ಪರ್ಧೆಯಲ್ಲಿ ಅದಮಾರು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಭಾಗವಹಿಸಿ, ಸಂಭ್ರಮಿಸಿದರು.
ಗದ್ದೆಗೆ ಹಾಲು ಸೀಯಾಳ ಎರೆದು, ಗಿಡ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ದಾನಿಗಳಾದ ಸೀತಾರಾಮ ಎಲ್ ಶೆಟ್ಟಿ, ಎರ್ಮಾಳು ನೈಮಾಡಿ ನಾರಾಯಣ ಕೆ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಎರ್ಮಾಳು ಪುಚ್ಚೊಟ್ಟು ಬೀಡು ಸೀತಾರಾಮ ಎಲ್ ಶೆಟ್ಟಿ, ‘ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡು ವಿದ್ಯಾರ್ಜನೆ ಮಾಡಿದ ನಮಗೆ ಉಣ್ಣಲು ಅಂದು ಕೃಷಿಯೇ ಜೀವಾಳವಾಗಿತ್ತು. ಮಕ್ಕಳು ಕೆಸರಲ್ಲಿನ ಅನುಭವ ಪಡೆದು ಅದನ್ನು ಮುಂದಿನ ಪೀಳಿಗೆಗೂ ಮುಂದುವರೆಸುವ ಕಾರ್ಯ ಮಾಡಬೇಕು. ಇಂತಹ ಕಾರ್ಯಕ್ರಮಗಳಿಗೆ ನಿರಂತರ ಪ್ರೋತ್ಸಾಹಕ್ಕೆ ನಾವು ಬದ್ದರಿದ್ದೇವೆ’ ಎಂದು ಹೇಳಿದರು.
ಅದಮಾರು ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಸಂಜೀವ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಎರ್ಮಾಳು ಬರ್ಪಾಣಿ ಭೋಜ ಶೆಟ್ಟಿ, ವಾಸುದೇವ ಭಟ್ ಅದಮಾರು, ನಿವೃತ್ತ ಪ್ರಾಂಶುಪಾಲ ರಾಮಕೃಷ್ಣ ಪೈ, ನಿವೃತ್ತ ಉಪನ್ಯಾಸಕ ಏಕನಾಥ ಡೋಂಗ್ರೆ, ಸಿದ್ದಕೃಷ್ಣ, ಅದಮಾರು ಆದರ್ಶ ಯುವಕ ಸಂಘ ಅಧ್ಯಕ್ಷ ಸಂತೋಷ್ ಜೆ ಶೆಟ್ಟಿ ಬರ್ಪಾಣಿ, ಮಹಿಳಾ ಮಂಡಲ ಅಧ್ಯಕ್ಷೆ ಪುಷ್ಪಾ ಆಚಾರ್ಯ, ಪೂರ್ಣಪ್ರಜ್ಞ ಕನ್ನಡ ಮಾಧ್ಯಮ ಪ್ರೌಢಶಾಲೆ ಮುಖ್ಯ ಶಿಕ್ಷಕ ಶ್ರೀಕಾಂತ ರಾವ್, ಆಂಗ್ಲ ಮಾಧ್ಯಮ ಪ್ರೌಢಶಾಲೆ ಮುಖ್ಯ ಶಿಕ್ಷಕ ಮಂಜುನಾಥ ಎ.ವಿ, ಅದಮಾರು ಎನ್ಎಸ್ಎಸ್ ಘಟಕ ನೋಡೆಲ್ ಅಧಿಕಾರಿ ಜಯಶಂಕರ ಕಂಗಣ್ಣಾರು ಇದ್ದರು. ಕನ್ನಡ ಉಪನ್ಯಾಸಕ ದೇವಿಪ್ರಸಾದ್ ಬೆಳ್ಳಿಬೆಟ್ಟು ಕ್ರೀಡಾ ಸ್ಪರ್ಧೆಗಳನ್ನು ನಿರ್ವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.