ಉಡುಪಿ: ಹಬ್ಬಗಳ ಮೇಲೆ ಕವಿದಿದ್ದ ಕೋವಿಡ್ ಛಾಯೆ ಕೊಂಚ ಸರಿದಂತೆ ಕಾಣುತ್ತಿದೆ. ಸಾರ್ವಜನಿಕ ಗಣೇಶ ಹಬ್ಬ ಆಚರಣೆಗೆ ಸರ್ಕಾರ ಅನುಮತಿ ನೀಡಿದ್ದ ಬೆನ್ನಲ್ಲೇ ನಗರದಲ್ಲಿ ಚೌತಿ ಹಬ್ಬದ ಸಂಭ್ರಮ ನಿಧಾನವಾಗಿ ಕಳೆಗಟ್ಟುತ್ತಿದೆ.
ಗಣೇಶ ಮೂರ್ತಿ ತಯಾರಿಸಬೇಕೆ ಬೇಡವೇ ಎಂಬ ಜಿಜ್ಞಾಸೆಯಲ್ಲಿದ್ದ ಕಲಾವಿದರು ಹಬ್ಬಕ್ಕೆ ಸರ್ಕಾರ ಹಸಿರು ನಿಶಾನೆ ತೋರುತ್ತಿದ್ದಂತೆ ಮೂರ್ತಿ ಸಿದ್ಧಪಡಿಸುವ ಕೆಲಸ ಚುರುಕುಗೊಳಿಸಿದ್ದಾರೆ. ನಗರದ ಅಲ್ಲಲ್ಲಿ ಗಣಪತಿ ಮೂರ್ತಿಗಳಿಗೆ ಅಂತಿಮ ರೂಪಕೊಡುತ್ತಿದ್ದ ದೃಶ್ಯ ಕಂಡುಬಂತು.
ಕೊರೊನಾ ಕಾರಣದಿಂದ ಕಳೆದ ವರ್ಷದಷ್ಟು ಮೂರ್ತಿಗಳು ಈ ಬಾರಿ ತಯಾರಾಗಿಲ್ಲ. ಗಾತ್ರದಲ್ಲೂ ಇಳಿಕೆಯಾಗಿದ್ದು, ಚಿಕ್ಕ ಮೂರ್ತಿಗಳ ತಯಾರಿಕೆಗೆ ಕಲಾವಿದರು ಒಲವು ತೋರುತ್ತಿದ್ದಾರೆ. ಪಿಒಪಿ ಬದಲಾಗಿ ಮಣ್ಣಿನ ವಿಗ್ರಹಗಳ ತಯಾರಿಕೆ ಹೆಚ್ಚಾಗಿ ಕಂಡುಬಂತು.
ಹಬ್ಬದ ಖರೀದಿಯೂ ಚೇತರಿಕೆ ಕಾಣುತ್ತಿದೆ. ಹೊರ ಜಿಲ್ಲೆಗಳಿಂದ ವ್ಯಾಪಾರಿಗಳು ಬಂದಿದ್ದು, ರಥಬೀದಿ, ನಗರದ ಪ್ರಮುಖ ರಸ್ತೆಗಳ ಬದಿಯಲ್ಲಿ ಹೂ, ಹಣ್ಣು ಹಾಗೂ ಕಬ್ಬನ್ನು ಮಾರಾಟ ಮಾಡುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.