ADVERTISEMENT

ಅತ್ಯಾಚಾರಿಗಳಿಗೆ ಶೀಘ್ರ ಗಲ್ಲುಶಿಕ್ಷೆ ನೀಡಿ

ಪಂಚಾಯತ್‌ ರಾಜ್‌ ಸಂಘಟನೆಯಿಂದ ಪೋಸ್ಟ್‌ ಕಾರ್ಡ್‌ ಚಳುವಳಿ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2019, 12:15 IST
Last Updated 5 ಡಿಸೆಂಬರ್ 2019, 12:15 IST
ಪಶುವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಮಾಡಿರುವ ದುಷ್ಕರ್ಮಿಗಳಿಗೆ ಶೀಘ್ರವೇ ಗಲ್ಲುಶಿಕ್ಷೆ ವಿಧಿಸಬೇಕು ಎಂದು ಉಡುಪಿ ಜಿಲ್ಲಾ ರಾಜೀವಗಾಂಧಿ ಪಂಚಾಯತ್‌ ರಾಜ್‌ ಸಂಘಟನೆಯ ವತಿಯಿಂದ ಗುರುವಾರ ರಾಷ್ಟ್ರಪತಿಗಳಿಗೆ ಪೋಸ್ಟ್‌ ಕಾರ್ಡ್‌ ಬರೆಯುವ ಮೂಲಕ ಆಗ್ರಹಪಡಿಸಲಾಯಿತು.ಪ್ರಜಾವಾಣಿ ಚಿತ್ರ
ಪಶುವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಮಾಡಿರುವ ದುಷ್ಕರ್ಮಿಗಳಿಗೆ ಶೀಘ್ರವೇ ಗಲ್ಲುಶಿಕ್ಷೆ ವಿಧಿಸಬೇಕು ಎಂದು ಉಡುಪಿ ಜಿಲ್ಲಾ ರಾಜೀವಗಾಂಧಿ ಪಂಚಾಯತ್‌ ರಾಜ್‌ ಸಂಘಟನೆಯ ವತಿಯಿಂದ ಗುರುವಾರ ರಾಷ್ಟ್ರಪತಿಗಳಿಗೆ ಪೋಸ್ಟ್‌ ಕಾರ್ಡ್‌ ಬರೆಯುವ ಮೂಲಕ ಆಗ್ರಹಪಡಿಸಲಾಯಿತು.ಪ್ರಜಾವಾಣಿ ಚಿತ್ರ   

ಉಡುಪಿ: ಪಶು ವೈದ್ಯೆಯ ಮೇಲೆ ಅತ್ಯಾಚಾರ ಹಾಗೂ ಕೊಲೆ ಮಾಡಿರುವ ದುಷ್ಕರ್ಮಿಗಳಿಗೆ ಶೀಘ್ರ ಗಲ್ಲುಶಿಕ್ಷೆ ವಿಧಿಸಬೇಕು ಎಂದು ಜಿಲ್ಲಾ ರಾಜೀವ್‌ ಗಾಂಧಿ ಪಂಚಾಯತ್‌ ರಾಜ್‌ ಸಂಘಟನೆಯಿಂದ ರಾಷ್ಟ್ರಪತಿಗೆ ಆಗ್ರಹಿಸಲಾಯಿತು.

ಉಡುಪಿ ಪ್ರಧಾನ ಅಂಚೆ ಕಚೇರಿ ಎದುರು ಗುರುವಾರ ಹಮ್ಮಿಕೊಂಡಿದ್ದ ಪೋಸ್ಟ್‌ ಕಾರ್ಡ್‌ ಚಳವಳಿಯಲ್ಲಿ ಪಂಚಾಯತ್‌ ರಾಜ್‌ ಸಂಘಟನೆಯ ಕಾರ್ಯಕರ್ತರು ಕೈಗೆ ಕಪ್ಪುಪಟ್ಟಿ ಧರಿಸಿಕೊಂಡು ಪ್ರತಿಭಟಿಸಿದರು. ಪ್ರಕರಣದ ತ್ವರಿತ ವಿಚಾರಣೆ ನಡೆಸಿ ಗಲ್ಲುಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.

ತಾಲ್ಲೂಕು ಪಂಚಾಯಿತಿ ಸದಸ್ಯೆ ಡಾ.ಸುನೀತಾ ಶೆಟ್ಟಿ ಮಾತನಾಡಿ, ಅತ್ಯಾಚಾರ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಕಠಿಣ ಶಿಕ್ಷೆ ಆಗುತ್ತಿಲ್ಲ. ಇದರಿಂದಾಗಿ ಅತ್ಯಾಚಾರ ಘಟನೆಗಳು ಮರುಕಳಿಸುತ್ತಿವೆ. ಅತ್ಯಾಚಾರವನ್ನು ಮಹಿಳೆಯರು ಮಾತ್ರವಲ್ಲ, ಇಡೀ ಸಮಾಜವೇ ಖಂಡಿಸಬೇಕು ಎಂದರು.

ADVERTISEMENT

ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿ ಕಾನೂನಿಗೆ ತಿದ್ದುಪಡಿ ತಂದು ತ್ವರಿತ ಗಲ್ಲುಶಿಕ್ಷೆ ನೀಡುವಂತಾಗಬೇಕು. ಕಠಿಣ ಕಾನೂನು ಕ್ರಮಗಳು ಜಾರಿಗೊಳಿಸುವ ಮೂಲಕ ಮಕ್ಕಳು, ಮಹಿಳೆಯರು ಸುರಕ್ಷಿತವಾಗಿ ಬದುಕುವ ವಾತಾವರಣ ಸೃಷ್ಟಿಸಬೇಕು ಎಂದು ಅಭಿಪ್ರಾಯಪಟ್ಟರು.

ಪಂಚಾಯತ್‌ ರಾಜ್‌ ಸಂಘಟನೆಯ ಅಧ್ಯಕ್ಷೆ ರೋಶನಿ ಒಲಿವೆರಾ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಮಹಿಳೆಯರು ಇನ್ನೂ ಸುರಕ್ಷಿತವಾಗಿಲ್ಲ. ಇಂದಿಗೂ ಭಯ, ಆತಂಕದಿಂದಲೇ ಬದುಕುವ ಸ್ಥಿತಿ ಇದೆ. ಹಾಗಾಗಿ ಸರ್ಕಾರ ಮಹಿಳೆಯರ ಸುರಕ್ಷತೆ ಹಾಗೂ ಅತ್ಯಾಚಾರ ಘಟನೆಗಳು ಮರುಕಳಿಸದಂತೆ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ತಾಲ್ಲೂಕು ಪಂಚಾಯ್ತಿ ಸದಸ್ಯರಾದ ಸುಲೋಚನಾ, ದಿನೇಶ್‌ ಕೋಟ್ಯಾನ್‌, ಕಾಂಗ್ರೆಸ್‌ ಮಹಿಳಾ ಘಟಕದ ಉಪಾಧ್ಯಕ್ಷೆ ಜ್ಯೋತಿ ಹೆಬ್ಬಾರ್‌, ಸಹ ಸಂಯೋಜಕಿ ಮೇರಿ ಡಿಸೋಜಾ, ಐರಿನ್‌ ಮೆನೆಜಸ್‌, ಚಂದ್ರಿಕಾ ಶೆಟ್ಟಿ, ಸೂರಿ ಸಾಲ್ಯಾನ್‌, ಮಹಾಬಲ ಕುಂದರ್‌, ಸುಲೋಚನಾ ದಾಮೋದರ್‌ ಮೊದಲಾದವರು ಪೋಸ್ಟ್‌ ಕಾರ್ಡ್‌ ಚಳುವಳಿಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.