ಉಡುಪಿ: ಶತಮಾನಗಳಿಂದ ಭಾರತೀಯ ಸನಾತನ ಸದ್ವಿಚಾರಗಳ ಮೇಲೆ ಉಡುಪಿ ಮಠಗಳು ಪ್ರಭಾವ ಬೀರಿವೆ ಎಂದು ಗೋವಾ ರಾಜ್ಯಪಾಲ ಶ್ರೀಧರನ್ ಪಿಳ್ಳೈ ಅಭಿಪ್ರಾಯಪಟ್ಟರು.
ಶುಕ್ರವಾರ ಕೃಷ್ಣಮಠದಲ್ಲಿ ದೇವರ ದರ್ಶನ ಪಡೆದು ಅದಮಾರು ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥರನ್ನು ಭೇಟಿಯಾಗಿ ಅನುಗ್ರಹ ಮಂತ್ರಾಕ್ಷತೆ ಸ್ವೀಕರಿಸಿ ಮಾತನಾಡಿದ ಅವರು, 1978ರಲ್ಲಿ ಕೇರಳದಲ್ಲಿ ಸನಾತನ ಧರ್ಮ ರಕ್ಷಣೆಗೆ ಬೃಹತ್ ಸಂತ ಸಮಾವೇಶ ಮತ್ತು ಹಿಂದೂ ಸಂಗಮ ಸಮಾವೇಶ ನಡೆದಾಗ ವಿಶ್ವೇಶತೀರ್ಥ ಶ್ರೀಗಳು ನೇತೃತ್ವ ವಹಿಸಿ ಮಾರ್ಗದರ್ಶನ ನೀಡಿದ್ದರು ಎಂದು ಸ್ಮರಿಸಿದರು.
ಧರ್ಮೋತ್ಸವದಲ್ಲಿ ಸಂಯೋಜಕ ಸಮಿತಿಯಲ್ಲಿ ಸಂಚಾಲಕನಾಗಿದ್ದು ಭಾಗ್ಯ. ವಿಶ್ವೇಶತೀರ್ಥರು ಅದ್ಭುತ ಶಕ್ತಿ ಎಂದು ನೆನಪಿಸಿಕೊಂಡರು.
ರಾಜ್ಯಪಾಲರಿಗೆ ಮಠದ ದಿವಾನರಾದ ವರದರಾಜ ಭಟ್ಟರು ಹಾಗೂ ಪುರೋಹಿತರು ಗೌರವದಿಂದ ಬರಮಾಡಿಕೊಂಡು, ಕೃಷ್ಣ ಮುಖ್ಯಪ್ರಾಣ, ಸರ್ವಜ್ಞ ಪೀಠ, ಸುಬ್ರಹ್ಮಣ್ಯ ದೇವರು, ನವಗ್ರಹ ದೇವರ ದರ್ಶನ ಮಾಡಿಸಿದರು. ಬಳಿಕ ತೀರ್ಥ ಪ್ರಸಾದ ವಿತರಣೆ ನಡೆಯಿತು. ಪಿಳೈ ದಂಪತಿ ಗೋಶಾಲೆಗೆ ಭೇಟಿ ನೀಡಿ ಗೋವುಗಳಿಗೆ ಆಹಾರ ನೀಡಿತು.
ಪೇಜಾವರ ಮಠಕ್ಕೆ ಭೇಟಿ: ಬಳಿಕ ಪೇಜಾವರ ಮಠಕ್ಕೆ ತೆರಳಿದ ರಾಜ್ಯಪಾಲರಿಗೆ ಮಂತ್ರಘೋಷ ಸಹಿತ ಸ್ವಾಗತ ಕೋರಲಾಯಿತು. ವಿಶ್ವೇಶತೀರ್ಥ ಶ್ರೀಗಳ ಭಾವಚಿತ್ರ ಹಾಗೂ ಪಾದುಕೆಗಳಿಗೆ ಪುಷ್ಪ ಸಮರ್ಪಿಸಿದ ರಾಜ್ಯಪಾಲರು ವಿಶ್ವಪ್ರಸನ್ನ ತೀರ್ಥ ಶ್ರೀಗಳನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದರು ಶ್
ರಾಜ್ಯಪಾಲರಿಗೆ ಶಾಲು ಸ್ಮರಣಿಕೆ, ಗಂಧಪ್ರಸಾದ, ಫಲ ಮಂತ್ರಾಕ್ಷತೆ ನೀಡಿ ಪೇಜಾವರ ಶ್ರೀಗಳು ಗೌರವಿಸಿದರು. ವಾಸುದೇವ ಭಟ್ ಪೆರಂಪಳ್ಳಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.