ಉಡುಪಿ: ಪ್ರತಿವರ್ಷ ಷಷ್ಠಿಯಂದು ಶ್ರೀಕೃಷ್ಣಮಠದ ಸುಬ್ರಹ್ಮಣ್ಯ ಗುಡಿಯ ಮುಂದೆ ನಡೆಯುತ್ತಿದ್ದ ಎಡೆಸ್ನಾನ ಆಚರಣೆಯನ್ನು ಈ ಬಾರಿ ಕೈಬಿಡಲಾಗಿದೆ. ಎಡೆಸ್ನಾನಕ್ಕೆ ವಿರೋಧ ಕೇಳಿಬಂದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ಶ್ರೀಗಳು ಗುರುವಾರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ಎಡೆಸ್ನಾನ ವಿಚಾರದಲ್ಲಿ ಅನಗತ್ಯ ವಿವಾದಗಳು ಬೇಡ ಎಂಬ ಕಾರಣಕ್ಕೆ ಆಚರಣೆಯನ್ನು ಕೈಬಿಡಲಾಗಿದೆ. ಭಕ್ತರು ದೇವರಿಗೆ ಪ್ರದಕ್ಷಿಣೆ ಹಾಕಿ ಅರ್ಚನೆ, ಪೂಜೆ ಸಲ್ಲಿಸಲಿ ಎಂದು ಶ್ರೀಗಳು ಸಲಹೆ ನೀಡಿದರು.
ಪಲಿಮಾರು ಶ್ರೀಗಳ ನಿರ್ಧಾರವನ್ನು ಪೇಜಾವರ ಶ್ರೀಗಳು ಸ್ವಾಗತಿಸಿದ್ದಾರೆ. ಜಾತಿಯ ಹೆಸರಿನಲ್ಲಿ ವಿರೋಧ ಎದುರುದಾರೆ ಅದು ಸಂಘರ್ಷಕ್ಕೆ ದಾರಿ ಮಾಡಿಕೊಡುತ್ತದೆ. ದೇವಸ್ಥಾನದಲ್ಲಿ ಮಡೆಸ್ನಾನ–ಎಡೆಸ್ನಾನ ಮಾಡುವುದು ಅನಿವಾರ್ಯವಲ್ಲ ಎಂದರು.
ದೇವಸ್ಥಾನದ ಉತ್ಸವಗಳು, ಪೂಜೆ ಶಾಸ್ತ್ರಬದ್ಧವಾಗಿ ನಡೆಯಬೇಕಷ್ಟೆ. ವಿವಾದ–ಭಿನ್ನಾಭಿಪ್ರಾಯಕ್ಕೆ ಗುರಿಯಾದ ಆಚರಣೆಗಳು ನಿಂತುಹೋದರೆ ಹಿಂದೂ ಧರ್ಮಕ್ಕೆ ಯಾವುದೇ ನಷ್ಟವಿಲ್ಲ ಎಂದು ಹೇಳಿದರು.
* ತಿನ್ನುವ ಅನ್ನದ ಮೇಲೆ ಉರುಳು ಸೇವೆ ಮಾಡುವುದಕ್ಕೆ ಆಕ್ಷೇಪಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಮತ್ತೆ ವಿವಾದಗಳು ಸೃಷ್ಟಿಯಾಗಬಾರದು ಎಂದು ಆಚರಣೆ ಕೈಬಿಡಲಾಗಿದೆ
- ವಿದ್ಯಾಧೀಶ ಶ್ರೀಗಳು, ಪಲಿಮಾರು ಮಠ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.