ADVERTISEMENT

ಗೋಪಾಲ ಭಂಡಾರಿ ಜೀವನಾದರ್ಶಗಳೇ ಸಂದೇಶ: ಯು.ಟಿ. ಖಾದರ್‌

ಹೆಬ್ರಿ ಗೋಪಾಲ ಭಂಡಾರಿ ಅವರ ಪುತ್ಥಳಿ ಲೋಕಾರ್ಪಣೆ, ಸಂಸ್ಮರಣಾ ಗ್ರಂಥ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2025, 4:33 IST
Last Updated 8 ಜುಲೈ 2025, 4:33 IST
ಹೆಬ್ರಿ ಬ್ರಹ್ಮಶ್ರೀ ನಾರಾಯಣಗುರು ಸಮುದಾಯ ಭವನದಲ್ಲಿ ಗೋಪಾಲ ಭಂಡಾರಿಯವರ ಸಂಸ್ಮರಣಾ ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ಗೋಪಾಲ ಭಂಡಾರಿ ಅವರ ಪತ್ನಿ ಪ್ರಕಾಶಿನಿ ಗೋಪಾಲ ಭಂಡಾರಿ  ಅವರನ್ನು ಸನ್ಮಾನಿಸಲಾಯಿತು. 
ಹೆಬ್ರಿ ಬ್ರಹ್ಮಶ್ರೀ ನಾರಾಯಣಗುರು ಸಮುದಾಯ ಭವನದಲ್ಲಿ ಗೋಪಾಲ ಭಂಡಾರಿಯವರ ಸಂಸ್ಮರಣಾ ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ಗೋಪಾಲ ಭಂಡಾರಿ ಅವರ ಪತ್ನಿ ಪ್ರಕಾಶಿನಿ ಗೋಪಾಲ ಭಂಡಾರಿ  ಅವರನ್ನು ಸನ್ಮಾನಿಸಲಾಯಿತು.    

ಹೆಬ್ರಿ: ‘ಬಡವರ ಸೇವೆಗಾಗಿಯೇ ಜೀವನ ಮಡಿಪಾಗಿಟ್ಟು ಬದುಕಿದ ಗೋಪಾಲ ಭಂಡಾರಿ ಅವರು ಎಲ್ಲರಿಗೂ ಮಾದರಿ. ಅವರು ಎಲ್ಲರ ಮೆಚ್ಚಿನ ಜನನಾಯಕರಾಗಿದ್ದರು. ನಮಗೆ ಶಕ್ತಿ, ಪ್ರೇರಣೆಯಾಗಿದ್ದರು. ಅವರ ಜೀವನದ ಆದರ್ಶಗಳೇ ನಮಗೆ ಸಂದೇಶ’ ಎಂದು ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್‌ ಹೇಳಿದರು.

ಅವರು ಸೋಮವಾರ ಬ್ರಹ್ಮಶ್ರೀ ನಾರಾಯಣಗುರು ಸಮುದಾಯ ಭವನದಲ್ಲಿ ಗೋಪಾಲ ಭಂಡಾರಿ ಅವರ ಸಂಸ್ಮರಣಾ ಗ್ರಂಥ ಬಿಡುಗಡೆ ಮಾಡಿ ಮಾತನಾಡಿದರು. 

ಹೆಬ್ರಿ– ಕಾರ್ಕಳ ರಾಜ್ಯ ಹೆದ್ದಾರಿಯ ಬಚ್ಚಪ್ಪು ತಿರುವಿನಲ್ಲಿ ಸ್ಥಾಪಿಸಿದ ವೃತ್ತ, ಗೋಪಾಲ ಭಂಡಾರಿ ಅವರ ಅವರ ಶಿಲಾ ಪುತ್ಥಳಿಯನ್ನು ಲೋಕಾರ್ಪಣೆ ಮಾಡಿದ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಮಾತನಾಡಿ, ಅಜಾತಶತ್ರು ಜನನಾಯಕ, ಅಭಿವೃದ್ಧಿಯ ಹರಿಕಾರರಾಗಿದ್ದ ಗೋಪಾಲ ಭಂಡಾರಿ ಅವರು ಜನಸೇವೆ ಮಾಡಿ ಜನರ ಮನದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಅಧಿಕಾರದ ಪೀಠವೇ ಅವರ ಕೈಯಲ್ಲಿದ್ದರೂ ನಿಃಸ್ವಾರ್ಥವಾಗಿ ಸೇವೆ ಮಾಡಿದ ಅವರು ನನ್ನ ಹೆಮ್ಮೆಯ ಶಿಷ್ಯ ಎಂದರು.

ADVERTISEMENT

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಸುನಿಲ್‌ ಕುಮಾರ್‌, ಸರಳತೆ, ನಿಷ್ಠೆ, ಪ್ರಾಮಾಣಿಕತೆಗೆ ಮತ್ತೊಂದು ಹೆಸರೇ ಗೋಪಾಲ ಭಂಡಾರಿಯವರು ಎಂದರು.

ಅಧ್ಯಕ್ಷತೆ ವಹಿಸಿದ್ದ ಗೋಪಾಲ ಭಂಡಾರಿ ಅಭಿಮಾನಿ ವೇದಿಕೆ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಅವರು ಗೋಪಾಲ ಭಂಡಾರಿ ಅವರ ಪುತ್ಥಳಿ ಲೋಕಾರ್ಪಣೆ, ಸಂಸ್ಮರಣಾ ಗ್ರಂಥ ರಚನೆಗೆ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಕಾಂಗ್ರೆಸ್‌ ಮುಖಂಡ ಮುನಿಯಾಲು ಉದಯ ಕುಮಾರ್‌ ಶೆಟ್ಟಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಿಸಿದರು.

ಗೋಪಾಲ ಭಂಡಾರಿ ಸಂಸ್ಮರಣಾ ಗ್ರಂಥದ ಪ್ರಧಾನ ಸಂಪಾದಕ ಮಾತಿಬೆಟ್ಟು ಪ್ರಕಾಶ ಪೂಜಾರಿ, ಸಂಪಾದಕರಾದ ಮಂಜುನಾಥ ಕುಲಾಲ್‌, ಹೆಬ್ರಿ ಟಿ.ಜಿ.ಆಚಾರ್ಯ, ಆನಂದ ಪೂಜಾರಿ ಮುನಿಯಾಲು, ಸುಕುಮಾರ್‌ ಮುನಿಯಾಲ್‌, ಉದಯ ಕುಮಾರ್‌ ಶೆಟ್ಟಿ ಹೆಬ್ರಿ, ಬಾಲಚಂದ್ರ ಹೆಬ್ಬಾರ್‌ ಕಬ್ಬಿನಾಲೆ, ಶ್ರೀನಿವಾಸ ಭಂಡಾರಿ ಮುದ್ದೂರು, ಗೋಪಾಲ ಭಂಡಾರಿ ಪತ್ನಿ ಪ್ರಕಾಶಿನಿ ಭಂಡಾರಿ, ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್‌ ಅವರನ್ನು ಗೌರವಿಸಲಾಯಿತು.

ವಿಧಾನ ಪರಿಷತ್‌ ಮಾಜಿ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅಶೋಕ್‌ ಕುಮಾರ್‌ ಕೊಡವೂರು, ಮುಖಂಡರಾದ ರಮಾನಾಥ ರೈ, ಜಯಪ್ರಕಾಶ ಹೆಗ್ಡೆ, ವಿನಯ ಕುಮಾರ್‌ ಸೊರಕೆ, ಅಭಯಚಂದ್ರ ಜೈನ್‌, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹೆಬ್ರಿ ತಾಲ್ಲೂಕು ಯೋಜನಾಧಿಕಾರಿ ಲೀಲಾವತಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮುದ್ರಾಡಿ ಮಂಜುನಾಥ ಪೂಜಾರಿ, ದಿನೇಶ ಹೆಗ್ಡೆ ಮೊಳಹಳ್ಳಿ, ವಕೀಲ ಶೇಖರ ಮಡಿವಾಳ ಕಾರ್ಕಳ, ಶ್ರೀನಿವಾಸ ನಾಯಕ್‌ ಹೆಬ್ರಿ, ಕಾಂಗ್ರೆಸ್‌ ವಕ್ತಾರ ಶುಭದ ರಾವ್‌, ಹೆಬ್ರಿ ಗ್ರಾ.ಪಂ. ಅಧ್ಯಕ್ಷ ತಾರನಾಥ ಬಂಗೇರ, ಚಾರ ಗ್ರಾ.ಪಂ. ಅಧ್ಯಕ್ಷ ದಿನೇಶ ಶೆಟ್ಟಿ, ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಸುಧಾಕರ ಶೆಟ್ಟಿ, ಸುರೇಂದ್ರ ಶೆಟ್ಟಿ ಕಾರ್ಕಳ, ಹೆಬ್ರಿಯ ಉದ್ಯಮಿ ಸತೀಶ ಪೈ, ಪ್ರವೀಣ್‌ ಬಲ್ಲಾಳ್‌, ಉಡುಪಿಯ ಎಂ.ಎ.ಗಫೂರ್‌, ಹೆಬ್ರಿ ಎಸ್.ಆರ್. ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಾಗರಾಜ ಶೆಟ್ಟಿ, ಮುನಿಯಾಲು ಗೋಪಿನಾಥ ಭಟ್‌, ಎಚ್. ವಾದಿರಾಜ ಶೆಟ್ಟಿ, ಶೀನ ಪೂಜಾರಿ, ಸುಧಾಕರ ಕೋಟ್ಯಾನ್‌ ಕಾರ್ಕಳ, ಬಿಲ್ಲವ ಸಂಘದ ಅಧ್ಯಕ್ಷ ಅಣ್ಣಪ್ಪ ಪೂಜಾರಿ, ಗೋಪಾಲ ಭಂಡಾರಿ ಅಭಿಮಾನಿ ವೇದಿಕೆ ಹೆಬ್ರಿ, ಕಾರ್ಕಳದ ಪದಾಧಿಕಾರಿಗಳು ಭಾಗವಹಿಸಿದ್ದರು.

ನೀರೆ ಕೃಷ್ಣ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಟಿ.ಜಿ.ಆಚಾರ್ಯ ಪಟ್ಟಿ ವಾಚಿಸಿದರು. ಅಭಿಮಾನಿ ವೇದಿಕೆ ಕಾರ್ಯದರ್ಶಿ ನವೀನ್‌ ಕೆ. ಅಡ್ಯಂತಾಯ ಸ್ವಾಗತಿಸಿದರು. ಪ್ರಸಾದ್‌ ಶೆಟ್ಟಿ, ಪ್ರಕಾಶ ಪೂಜಾರಿ ಮಾತಿಬೆಟ್ಟು ನಿರೂಪಿಸಿದರು. ಎಚ್.‌ ಜನಾರ್ದನ್‌ ವಂದಿಸಿದರು.

ಹೆಬ್ರಿಯಲ್ಲಿ ಗೋಪಾಲ ಭಂಡಾರಿಯವರ ಅವರ ಶಿಲಾ ಪುತ್ಥಳಿಯನ್ನು  ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್‌ ರಾಷ್ಟ್ರೀಯ ನಾಯಕ ಡಾ. ಎಂ.ವೀರಪ್ಪ ಮೊಯಿಲಿ ಲೋಕಾರ್ಪಣೆ ಮಾಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.