ಹೆಬ್ರಿ: ‘ಹುಟ್ಟಿನಿಂದ ಯಾರೂ ಶ್ರೇಷ್ಠರಲ್ಲ, ಅವರ ಕೆಲಸಗಳ ಮೂಲಕ ಶ್ರೇಷ್ಠರಾಗುತ್ತಾರೆ. ಅಂತಹ ಕೆಲಸವನ್ನು ಮಹರ್ಷಿ ವಾಲ್ಮೀಕಿ ಮಾಡಿ ಜಗತ್ಪ್ರಸಿದ್ಧರಾಗಿದ್ದಾರೆ. ರಾಮಾಯಣದ ಮೂಲಕ ಜಗತ್ತಿನ ಗಮನ ಸೆಳೆದ ಕೀರ್ತಿ ಅವರಿಗಿದೆ’ ಎಂದು ಕನ್ನಡ ಶಿಕ್ಷಕ ಮಂಜುನಾಥ ಕುಲಾಲ್ ಶಿವಪುರ ಹೇಳಿದರು.
ಅವರು ಮಂಗಳವಾರ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಕಾರ್ಕಳ, ಹೆಬ್ರಿ ತಾಲ್ಲೂಕಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಸಂಘಟನೆ ಸಹಯೋಗದಲ್ಲಿ ಹೆಬ್ರಿ ಸಮಾಜ ಮಂದಿರದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ತಹಶೀಲ್ದಾರ್ ಎಸ್.ಎ. ಪ್ರಸಾದ್, ರಾಮಾಯಣದ ಆದರ್ಶಗಳನ್ನು ನಾವು ಅಳವಡಿಸಿಕೊಳ್ಳಬೇಕು. ಏಕ ಪತ್ನಿತ್ವ, ಭ್ರಾತೃತ್ವ, ಪ್ರಜೆಗಳ ಹಿತಾಸಕ್ತಿ, ದುಷ್ಟರ ಸಂಹಾರ ಬಗ್ಗೆ ಉತ್ತಮ ಜ್ಞಾನವನ್ನು ರಾಮಾಯಣ ತಿಳಿಸುತ್ತದೆ. ಮುಂದಿನ ಪೀಳಿಗೆಗೆ ತಿಳಿಸಬೇಕಾದರೆ ಅರಿವು ಅಗತ್ಯವಿದೆ. ಹೆಣ್ಣಿನ ಮಹತ್ವ ತಿಳಿಯಲು ರಾಮಾಯಣ ಓದಬೇಕು ಎಂದರು.
ಹೆಬ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ತಾರನಾಥ ಎಸ್. ಬಂಗೇರ ಉದ್ಘಾಟಿಸಿದರು. ಶೈಕ್ಷಣಿಕ ಸಾಧಕರಾದ ಪ್ರತಿಕ್ಷಾ, ನಂದಿನಿ, ವಿಸ್ಮಿತಾ ಬಿ, ಚೈತ್ರಾ ಎಸ್. ನಾಯ್ಕ, ರಂಜಿತಾ, ಸುದೀಕ್ಷಾ ನಾಯ್ಕ, ಸುಶ್ಮಿತಾ, ಅಸ್ಮಿತಾ, ಅನನ್ಯ, ಯಮುನಾ ಅವರನ್ನು ಸನ್ಮಾನಿಸಲಾಯಿತು.
ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಶಂಕರ ಶೆರಿಗಾರ್, ಎಎಸ್ಐ ಪ್ರೀತಂ ಕುಮಾರ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ನಾಗಶ್ರೀ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಸಂಘಟನೆಯ ಮುಖಂಡರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.