ಉಡುಪಿ: ‘ಗುಲ್ವಾಡಿ ವೆಂಕಟರಾವ್ ಅವರು ತಮ್ಮ ಕಾದಂಬರಿ ‘ಇಂದಿರಾಬಾಯಿ’ಯ ಮೂಲಕ ಧರ್ಮದಲ್ಲಿನ ಮೌಢ್ಯಗಳನ್ನು ಕಿತ್ತುಹಾಕಲು ಪ್ರಯತ್ನಿಸಿದ್ದರು’ ಎಂದು ಹಿರಿಯ ಪೊಲೀಸ್ ಅಧಿಕಾರಿ, ಲೇಖಕಿ ಧರಣಿದೇವಿ ಮಾಲಗತ್ತಿ ಹೇಳಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ, ಗುಲ್ವಾಡಿ ಟಾಕೀಸ್, ಜಿ. ಶಂಕರ್ ಮಹಿಳಾ ಪ್ರಥಮದರ್ಜೆ ಕಾಲೇಜು, ಕೋಟದ ಉಸಿರು ಅಧ್ಯಯನ ತರಬೇತಿ ಕೇಂದ್ರದ ಆಶ್ರಯದಲ್ಲಿ ನಗರದ ಪುರಭವನದಲ್ಲಿ ಶನಿವಾರ ನಡೆದ ಗುಲ್ವಾಡಿ ವೆಂಕಟರಾವ್ ಅವರ ‘ಇಂದಿರಾಬಾಯಿ’ ಕೃತಿಯಲ್ಲಿನ ಮಹಿಳಾ ಸಾಮಾಜಿಕ ಸ್ಥಿತ್ಯಂತರಗಳು ವಿಚಾರಗೋಷ್ಠಿ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿಧವಾ ವಿವಾಹಕ್ಕೆ ಸಂಬಂಧಿಸಿದ ಸಾಂಸ್ಕೃತಿಕ ಇತಿಹಾಸ ಈ ಕಾದಂಬರಿಯಲ್ಲಿ ಅಡಕವಾಗಿದೆ. ಮಹಿಳಾ ಶಿಕ್ಷಣಕ್ಕೆ ಸಂಬಂಧಿಸಿರುವ ಕೃತಿಯೂ ಇದಾಗಿರುವುದರಿಂದ ವಿದ್ಯಾರ್ಥಿಗಳು ಈ ಕೃತಿಯನ್ನುಓದಬೇಕು ಎಂದರು.
‘ಇಂದಿರಾಬಾಯಿ’ ಕಾದಂಬರಿ ಮತ್ತು ಪಂಜೆ ಮಂಗೇಶರಾಯರ ‘ನನ್ನ ಚಿಕ್ಕತಾಯಿ’ ಕೃತಿಗಳು ಕರಾವಳಿ ಪ್ರದೇಶದಿಂದ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಎರಡು ದಾಖಲೆಗಳಾಗಿವೆ ಎಂದು ಹೇಳಿದರು.
ಶಿವರಾಮ ಕಾರಂತ ಟ್ರಸ್ಟ್ ಅಧ್ಯಕ್ಷ ಗಣನಾಥ ಎಕ್ಕಾರು ಮಾತನಾಡಿ, ಧರ್ಮದ ಹೆಸರಿನಲ್ಲಿ ನಡೆಯುತ್ತಿದ್ದ ಡಂಬಾಚಾರವನ್ನು ಗುಲ್ವಾಡಿ ವೆಂಕಟರಾವ್ ಅವರು ತಮ್ಮ ಕಾದಂಬರಿಯಲ್ಲಿ ತೆರೆದಿಟ್ಟಿದ್ದಾರೆ. ಜೊತೆಗೆ ಮಹಿಳೆ ಕೂಡ ಶಿಕ್ಷಣಕ್ಕೆ ಅರ್ಹಳು ಎಂಬ ಸಂದೇಶವನ್ನು ಸಾರಿದ್ದಾರೆ ಎಂದರು.
ಮಾನವನ ಸ್ವಭಾವದಲ್ಲಿರುವ ಕ್ರೌರ್ಯ ಮತ್ತು ಒಳ್ಳೆಯತನದ ನಡುವಿನ ಸಂಘರ್ಷವನ್ನೂ ‘ಇಂದಿರಾಬಾಯಿ’ ಕಾದಂಬರಿಯಲ್ಲಿ ಚಿತ್ರಿಸಲಾಗಿದೆ ಎಂದರು.
ಸಾಹಿತಿ ಪಾದೆಕಲ್ಲು ವಿಷ್ಣುಭಟ್, ಡಾ. ಜಿ.ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸೋಜಾನ್ ಕೆ.ಜಿ., ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಭಾಗವಹಿಸಿದ್ದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ ಹಾನಗಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನರೇಂದ್ರ ಕುಮಾರ್ ಕೋಟ, ಸತೀಶ್ ವಡ್ಡರ್ಸೆ, ಪುಂಡಲೀಕ ಮರಾಠೆ, ರಾಮಚಂದ್ರ ಐತಾಳ ಗುಂಡ್ಮಿ ನಿರ್ವಹಣೆ ಮಾಡಿದರು.
ಕಾರ್ಯಕ್ರಮದಲ್ಲಿ ಧರಣಿದೇವಿ ಮಾಲಗತ್ತಿ ಅವರಿಗೆ ಗುಲ್ವಾಡಿ ವೆಂಕಟರಾವ್ ಪ್ರಶಸ್ತಿ ಹಾಗೂ ಮೊಹಮ್ಮದ್ ರಫೀ ಪಾಷ ಅವರಿಗೆ ಸಂತೋಷ ಕುಮಾರ ಗುಲ್ವಾಡಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ವಹಿಸಿದ್ದರು. ಯಾಕೂಬ್ ಖಾದರ್ ಗುಲ್ವಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುರುಷೋತ್ತಮ ಶೆಟ್ಟಿ, ವಾಣಿಜ್ಯ ತೆರಿಗೆಗಳ ಉಪ ಆಯುಕ್ತ ಹೊಳೆಯಪ್ಪ ಭಾಗವಹಿಸಿದ್ದರು.
ಕಸಾಪ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಸ್ವಾಗತಿಸಿದರು. ಪಿ. ಮನೋಹರ್ ಭಟ್ ವಂದಿಸಿದರು. ಕೊಂಡಳ್ಳಿ ಪ್ರಭಾಕರ ಶೆಟ್ಟಿ, ಶ್ರೀನಿವಾಸ ಭಂಡಾರಿ, ಅರುಣ್ ಕುಮಾರ್ ಶಿರೂರು ನಿರ್ವಹಣೆ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.