
ಪಡುಬಿದ್ರಿ: ಬೆಳಪು ಗ್ರಾಮ ಪಂಚಾಯಿತಿ ಮತ್ತು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಆಶ್ರಯದಲ್ಲಿ 2025–26ನೇ ಸಾಲಿನ ಅಂಗವಿಕಲರ ಗ್ರಾಮಸಭೆ ಮತ್ತು ಬ್ರಹ್ಮಾವರ ರುಡ್ಸೆಟ್ ಸಂಸ್ಥೆಯ ವತಿಯಿಂದ ಸಂಜೀವಿನಿ ಸ್ವ ಸಹಾಯ ಸಂಘದ ಮಹಿಳೆಯರಿಗೆ ಸ್ವ ಉದ್ಯೋಗ ತರಬೇತಿ ಕಾರ್ಯಕ್ರಮ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಬೆಳಪು ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಮಹಿಳೆಯರು ಸ್ವಉದ್ಯೋಗದ ಮೂಲಕ ಆರ್ಥಿಕ ಸಬಲೀಕರಣಕ್ಕೆ ಒತ್ತು ನೀಡಬೇಕು. ಸಂಜೀವಿನಿ ಒಕ್ಕೂಟ ಬೆಳಪು ಸಂಘದ ಸದಸ್ಯರು ‘ಅಕ್ಕ’ ಗೃಹೋಪಯೋಗಿ ಮಳಿಗೆಯನ್ನು ಬೆಳಪುವಿನಲ್ಲಿ ಪ್ರಾರಂಭಿಸಿ ಇತರರಿಗೆ ಮಾದರಿಯಾಗಿದ್ದಾರೆ. ಮನೆ ಬಳಕೆ ವಸ್ತುಗಳು, ಆಭರಣಗಳು, ಅಲಂಕಾರ ವಸ್ತುಗಳು, ಚಾಕೊಲೇಟ್, ಕೇಕ್ ತಯಾರಿಸುವ ತರಬೇತಿ ಪಡೆದು ಸ್ವಂತ ಉದ್ಯೋಗ ಮಾಡಬಹುದು. ಅಂಗವಿಕಲರು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಕೀಳರಿಮೆ ಇಲ್ಲದೆ ಸವಾಲುಗಳನ್ನು ಎದುರಿಸಿ ಜೀವನದಲ್ಲಿ ಯಶಸ್ಸು ಸಾಧಿಸಬೇಕು ಎಂದರು.
ಜಿಲ್ಲಾ ವಿಕಲಚೇತರನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ತಾಲ್ಲೂಕು ಸಂಯೋಜನಾಧಿಕಾರಿ ಮಧುಸೂದನ್ ರಾವ್ ಮಾತನಾಡಿ, ದೇಶಕ್ಕೆ ಗೌರವ ತರುವಂತಹ ಸಾಧನೆ ಮಾಡಿರುವ ಅಂಗವಿಕಲರು ನಮಗೆ ಆದರ್ಶವಾಗಬೇಕು. ಸರ್ಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ ಅಂಗವಿಕಲರಿಗೆ ಮಾಹಿತಿ ತಲುಪಿಸಬೇಕು ಎಂದರು.
ಸಭೆಯಲ್ಲಿ ಪಂಚಾಯಿತಿ ಉಪಾಧ್ಯಕ್ಷ ಶೋಭಾ ಬಿ. ಭಟ್, ಸದಸ್ಯರಾದ ಸೌಮ್ಯ ಸುರೇಂದ್ರ ಪಣಿಯೂರು, ರೂಪಾ ಆಚಾರ್ಯ, ಅಭಿವೃದ್ಧಿ ಅಧಿಕಾರಿ ಪ್ರವೀಣ್ ಡಿಸೋಜ, ರುಡ್ಸೆಟ್ ಸಂಸ್ಥೆಯ ಅಧಿಕಾರಿಗಳಾದ ಸಂತೋಷ್ ಶೆಟ್ಟಿ, ಶಾಂತಪ್ಪ, ಬೆಳಪು ಸಂಜೀವಿನಿ ಒಕ್ಕೂಟದ ಅಧ್ಯಕ್ಷ ಹಪ್ಸ, ಪಂಚಾಯಿತಿ ಕಾರ್ಯದರ್ಶಿ ಚಂದ್ರಾವತಿ ವಿ. ಆಚಾರ್ಯ, ಅಂಗವಿಕಲರು, ಆಶಾ ಕಾರ್ಯಕರ್ತೆಯರು ಮತ್ತು ಸಂಜೀವಿನಿ ಸ್ವಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.