ಹೆಬ್ರಿ: ತಾಲ್ಲೂಕು ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ವತಿಯಿಂದ ಇಲ್ಲಿನ ಬಸ್ ನಿಲ್ದಾಣದಲ್ಲಿ ಸೋಮವಾರ ಶಕ್ತಿ ಯೋಜನೆ ‘ಶಕ್ತಿ ನಮ್ಮದು ಸಾಮರ್ಥ್ಯ ನಿಮ್ಮದು 500 ಕೋಟಿ ಪ್ರಯಾಣ ಸಂಭ್ರಮ’ ಕಾರ್ಯಕ್ರಮ ನಡೆಯಿತು.
ಜಿಲ್ಲಾ ಪಂಚ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಮುನಿಯಾಲು ಉದಯ ಕುಮಾರ್ ಶೆಟ್ಟಿ ಮಾತನಾಡಿ, ಕಾಂಗ್ರೆಸ್ ನೇತೃತ್ವದ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಂದ ಬಡವರ ಬದುಕು ಸದೃಢವಾಗಿದೆ. ಶಕ್ತಿ ಯೋಜನೆ ಯಶಸ್ವಿಯಾಗಿದೆ. ಮಹಿಳೆಯರು, ವಿದ್ಯಾರ್ಥಿನಿಯರು, ಲಿಂಗತ್ವ ಅಲ್ಪಸಂಖ್ಯಾತರು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣಿಸಿ 500 ಕೋಟಿ ದಾಖಲೆಯ ಮಂದಿ ಪ್ರಯಾಣಿಸಿದ ಸಂಭ್ರಮದಲ್ಲಿದ್ದೇವೆ ಎಂದರು.
ಯೋಜನೆಯ ಫಲಾನುಭವಿಗಳ ಸಂಖ್ಯೆ ಇಂದಿಗೆ 500 ಕೋಟಿ ಗಡಿ ದಾಟಿ ದಾಖಲೆ ಸೃಷ್ಟಿಸಿದೆ. ವಿಶ್ವದಲ್ಲೇ ಪ್ರಥಮ ಬಾರಿಗೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯ ಒದಗಿಸಿದ ಹೆಗ್ಗಳಿಕೆ ನಮ್ಮ ಕಾಂಗ್ರೆಸ್ ಸರ್ಕಾರದ್ದು. ಇದು ನಮಗೆ ಹೆಮ್ಮೆ, ಸಾರ್ಥಕತೆಯ ವಿಷಯ ಎಂದರು.
ಕೋವಿಡ್ 19 ಬಳಿಕ ನಿಂತ ಹೋಗಿದ್ದ ಹೆಬ್ರಿ– ಬ್ರಹ್ಮಾವರ– ಉಡುಪಿ ಸರ್ಕಾರಿ ಬಸ್ ಸೇವೆಗೆ ಚಾಲನೆ ನೀಡಲಾಯಿತು. ಶಕ್ತಿ ಯೋಜನೆ ಸಂಭ್ರಮದ ಹಿನ್ನೆಲೆ ಬಸ್ಗೆ ಮಾಲಾರ್ಪಣೆ ಮಾಡಿ ಆರತಿ ಬೆಳಗಲಾಯಿತು. ಪ್ರಯಾಣಿಕರಿಗೆ ಸಿಹಿ ಹಂಚಿ ಸಂಭ್ರಮಿಸಲಾಯಿತು.
ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಶಂಕರ ಶೇರಿಗಾರ್, ಸದಸ್ಯರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಿನಾಥ ಭಟ್, ಗ್ರಾಮ ಪಂಚಾಯಿತಿ ಸದಸ್ಯ ಎಚ್. ಜನಾರ್ದನ್, ಮುಖಂಡರಾದ ನವೀನ್ ಕೆ. ಅಡ್ಯಂತಾಯ, ಕಬ್ಬಿನಾಲೆ ಚಂದ್ರಶೇಖರ ಬಾಯರಿ, ವರಂಗ ಲಕ್ಷ್ಮಣ ಆಚಾರ್, ಶಶಿಕಲಾ ಆರ್.ಪಿ, ರಾಜೇಶ ಆಚಾರ್ಯ ಮಠದಬೆಟ್ಟು, ಹರೀಶ ಶೆಟ್ಟಿ ನಾಡ್ಪಾಲು, ಸಂತೋಷ ಶೆಟ್ಟಿ ಚಾರ, ರಾಘವೇಂದ್ರ ನಾಯ್ಕ್ ಇಂದಿರಾನಗರ, ಪಕ್ಷದ ವಿವಿಧ ಘಟಕಗಳ ಪ್ರಮುಖರು, ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.