ಹೆಬ್ರಿ: ಸಚಿವ ಸುನಿಲ್ ಕುಮಾರ್ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ದಿಕ್ಕನ್ನೇ ಬದಲಿಸಿ ಜನರ ಹತ್ತಿರ ಸರ್ಕಾರವನ್ನು ತರುವ ಕೆಲಸವನ್ನು ಮಾಡಿದ್ದಾರೆ ಎಂದು ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾಗಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಜವಳಿ ವರ್ತಕರ ಸಂಘದ ಅಧ್ಯಕ್ಷ ಯೋಗೀಶ ಭಟ್ ಹೇಳಿದರು.
ಕನ್ನಡ ಸಂಸ್ಕೃತಿ ಇಲಾಖೆ, ಹೆಬ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಕಾಲೇಜಿನ ದಿ.ರಾಧಾಕೃಷ್ಣ ನಾಯಕ್ ವೇದಿಕೆಯಲ್ಲಿ ಶನಿವಾರ ನಡೆದ ಯುವ ಸೌರಭ ಯುವ ಕಲಾವಿದರ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಸಾದ ರಾವ್ ಅಧ್ಯಕ್ಷತೆ ವಹಿಸಿದ್ದರು. ‘ಪರೀಕ್ಷೆಯ ಅಂಕದಿಂದ ಮಾತ್ರ ಜೀವನದ ಉದ್ದೇಶ ಈಡೇರುವುದಿಲ್ಲ. ನಮ್ಮನ್ನು ನಾವೇ ಪ್ರತಿನಿತ್ಯವೂ ಪರೀಕ್ಷೆಗೆ ಒಳಪಡಿಸಿಕೊಂಡು ಪ್ರಗತಿಯತ್ತ ಸಾಗಬೇಕು. ಸಮಾಜದಲ್ಲಿ ಸಕ್ರಿಯ ರಾದರೆ ಬದುಕು ಸಾರ್ಥಕವಾಗುತ್ತದೆ’ ಎಂದರು.
ಮಣಿಪಾಲದ ವೈಷ್ಣವಿ ಬಳಗದ ಸುಗಮ ಸಂಗೀತ, ಕಾರ್ಕಳ ಶ್ರೀನೃತ್ಯಾಲಯದ ಅನನ್ಯ ತಂಡದ ನೃತ್ಯ, ತೆಕ್ಕಟ್ಟೆಯ ವಿನುಷ ಭಾರದ್ವಾಜ್ ಬಳಗದ ಜಾನಪದ ಗೀತೆ, ಮಂಡ್ಯದ ಕುಂತೂರ್ ಕುಮಾರ್ ತಂಡದ ಪೂಜಾ ಕುಣಿತ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವನಿಶಾ ಬಳಗದ ಮಹಿಳಾ ಡೊಳ್ಳುಕುಣಿತ ಮತ್ತು ಹೆಬ್ರಿ ಕಾಲೇಜಿನ ವಿದ್ಯಾರ್ಥಿಗಳಾದ ಅಕ್ಷಿತಾ ಬಳಗದಿಂದ ಗೊಂಬೆಮನೆ ನಾಟಕ ಪ್ರದರ್ಶನ ನಡೆಯಿತು.
ಗ್ರಾಮ ಪಂಚಾಯತಿ ಅಧ್ಯಕ್ಷೆ ಮಾಲತಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಜ್ಯೋತಿ ಹರೀಶ್, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಗುರುದಾಸ ಶೆಣೈ, ನರೇಂದ್ರ ನಾಯಕ್,ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಉಮೇಶ್ ಇದ್ದರು.
ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕರಾದ ಪ್ರದೀಪ್ ಆನಂದ ಶೆಟ್ಟಿ ಸಿರಿಬೈಲ್ ನಿರೂಪಿಸಿದರು. ಬಾಲರಾಜ ಡಿಬಿ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.