ADVERTISEMENT

ಹಿಂದೂಗಳ ಹತ್ಯೆ, ದೌರ್ಜನ್ಯ ವಿರೋಧಿಸಿ: ಶ್ರೀಕಾಂತ್ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2024, 14:01 IST
Last Updated 13 ಆಗಸ್ಟ್ 2024, 14:01 IST
ಬಾಂಗ್ಲಾದೇಶದಲ್ಲಿ ಹಿಂದೂಗಳ ಹತ್ಯೆ ವಿರೋಧಿಸಿ ಅಭಿನವ ಭಾರತ, ಹಿಂದೂ ರಕ್ಷಣಾ ವೇದಿಕೆ ಪ್ರತಿಭಟನೆ ನಡೆಸಿತು
ಬಾಂಗ್ಲಾದೇಶದಲ್ಲಿ ಹಿಂದೂಗಳ ಹತ್ಯೆ ವಿರೋಧಿಸಿ ಅಭಿನವ ಭಾರತ, ಹಿಂದೂ ರಕ್ಷಣಾ ವೇದಿಕೆ ಪ್ರತಿಭಟನೆ ನಡೆಸಿತು   

ಕಾರ್ಕಳ: ಬಾಂಗ್ಲಾದೇಶದಲ್ಲಿ ಹಿಂದೂಗಳ ಮನೆಗೆ ನುಗ್ಗಿ ಅತ್ಯಾಚಾರ, ಕೊಲೆ ನಡೆಸಲಾಗುತ್ತಿದೆ. ಅಲ್ಲಿ ನಡೆಯುತ್ತಿರುವ ಹಿಂದೂಗಳ ಹತ್ಯೆಯನ್ನು ಎಲ್ಲರೂ ವಿರೋಧಿಸಬೇಕು ಎಂದು ಹಿಂದೂ ಮುಖಂಡ ಶ್ರೀಕಾಂತ್ ಶೆಟ್ಟಿ ಹೇಳಿದರು.

ಬಾಂಗ್ಲಾದೇಶದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಹಿಂದೂಗಳ ಹತ್ಯೆ ವಿರೋಧಿಸಿ ಇಲ್ಲಿನ ಬಸ್ ನಿಲ್ದಾಣದಲ್ಲಿ ಸೋಮವಾರ ಅಭಿನವ ಭಾರತ, ಹಿಂದೂ ರಕ್ಷಣಾ ವೇದಿಕೆ ವತಿಯಿಂದ ಆಯೋಜಿಸಲಾದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

ಬಾಂಗ್ಲಾದ ರೋಹಿಂಗ್ಯಾಗಳು ಮಾನವೀಯತೆ ಮರೆತಿದ್ದು, ಉಡುಪಿ ಜಿಲ್ಲೆಯಲ್ಲಿರುವ ಬಾಂಗ್ಲಾ ನಿವಾಸಿಗರ ವಿವರ, ರೋಹಿಂಗ್ಯಾಗಳ ವಿವರವನ್ನು ಪೊಲೀಸ್ ಇಲಾಖೆ ಕಲೆ ಹಾಕುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಹಿಂದೂಗಳ ತಾಳ್ಮೆ ಪರೀಕ್ಷೆ ಮಾಡಲಾಗುತ್ತಿದೆ. ನರ ರಾಕ್ಷಸರ ಪ್ರವೃತ್ತಿಯಿಂದಾಗಿ ಎಲ್ಲೆಡೆ ಆತಂಕ ಸೃಷ್ಟಿಯಾಗಿದೆ. ಕೇಂದ್ರ ಸರ್ಕಾರ ದೇಶದಲ್ಲಿ ಕಟ್ಟುನಿಟ್ಟಿನ ಕಾನೂನು ತರಬೇಕು ಎಂದು ಆಗ‌್ರಹಿಸಿದರು.

ADVERTISEMENT

ಬಾಂಗ್ಲಾವನ್ನು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ತುಂಡರಿಸಿ ಹಿಂದೂಗಳನ್ನು ಪ್ರತ್ಯೇಕ ಮಾಡಿದರು. ನಾವು ಮತ್ತೊಮ್ಮೆ ಬಾಂಗ್ಲಾವನ್ನು ತುಂಡರಿಸಿ ಹಿಂದೂಗಳಿಗೆ ಪ್ರತ್ಯೇಕ ರಾಜ್ಯ ಮಾಡೋಣ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡೋಣ ಎಂದು ಶ್ರೀಕಾಂತ್‌ ಹೇಳಿದರು.

ಭಜರಂಗ ದಳದ ರಾಜ್ಯಾಧ್ಯಕ್ಷ ಸುನಿಲ್ ಕೆ.ಆರ್ ಮಾತನಾಡಿ, ರಾಜತಾಂತ್ರಿಕ ವೈಫಲ್ಯದ ಕಾರಣ ಬಾಂಗ್ಲಾದೇಶದಲ್ಲಿ ನರಮೇಧ ನಡೆಸುವ ರೋಹಿಂಗ್ಯಾಗಳ ಕುರಿತು ಸಮಸ್ತ ಹಿಂದೂ ಸಮಾಜ ಜಾಗೃತವಾಗಬೇಕು. ಹಿಂದೂಗಳ ಮೇಲೆ ನಡೆಯುತ್ತಿರುವ ನಿರಂತರ ದಾಳಿಯನ್ನು ಸಹಿಸಿಕೊಂಡು ಸುಮ್ಮನಿರುವುದು ಸಾಧ್ಯವಿಲ್ಲ. ಇಂತಹ ಕುಟಿಲ ಮನಸ್ಸಿನ ವಿರುದ್ಧ ಒಗ್ಗೂಡಿ ಹೋರಾಟ ಮಾಡಬೇಕು ಎಂದರು.

ಕಾರ್ಕಳ ಅನಂತಶಯನದಿಂದ ಬಸ್ ನಿಲ್ದಾಣದ ತನಕ ಪಾದಯಾತ್ರೆ ನಡೆಸಲಾಯಿತು. ನವೀನ್ ನಾಯಕ್ ಅತ್ತೂರು, ಮಣಿರಾಜ ಶೆಟ್ಟಿ, ರವೀಂದ್ರ ಶೆಟ್ಟಿ ಬಜಗೋಳಿ, ಉದಯ ಕುಮಾರ್ ಇರ್ವತ್ತೂರು, ರಮೇಶ್ ಕಾರ್ಣಿಕ್, ಹರೀಶ್ ಶೆಣೈ, ಬೋಳ ಶ್ರೀನಿವಾಸ ಕಾಮತ್, ಪ್ರಕಾಶ ರಾವ್, ರವೀಂದ್ರ ಕುಮಾರ್, ನಿರಂಜನ್ ಜೈನ್, ಹರ್ಷವರ್ಧನ್ ನಿಟ್ಟೆ, ರಮೇಶ್ ಶೆಟ್ಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.