ಪಡುಬಿದ್ರಿ: ‘ಅಮೂಲ್ಯ ಪಾರಂಪರಿಕ ಮೌಲ್ಯಗಳಿರುವ ದಾಖಲೆಗಳನ್ನು ಮನನ ಮಾಡಿಕೊಳ್ಳುವ, ಕಾಪಿಡುವ ಪ್ರಯತ್ನವಾಗಿ ‘ಐತಿಹಾಸಿಕ ಪರಂಪರೆ ಉಳಿಸಿ’ ಎಂಬ ಕಾರ್ಯಕ್ರಮ ರಾಜ್ಯದಾದ್ಯಂತ ನಡೆಯುತ್ತಿದೆ. ಪ್ರಾಚ್ಯವಸ್ತುಗಳ ಅಧ್ಯಯನದಿಂದ, ಲಿಖಿತ ದಾಖಲೆಗಳ ಆಧಾರದಲ್ಲಿ ಇತಿಹಾಸವನ್ನು ಕಟ್ಟಬಹುದು’ ಎಂದು ಅದಮಾರಿನ ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ವೈ. ಜ್ಯೋತೀಂದ್ರನಾಥ ರಾವ್ ಅಭಿಪ್ರಾಯಪಟ್ಟರು.
ಕುಂಜೂರು ಶ್ರೀ ದುರ್ಗಾ ದೇವಸ್ಥಾನದ ಆಶ್ರಯದಲ್ಲಿ ಸ್ಥಳೀಯ ದುರ್ಗಾ ಮಿತ್ರವೃಂದ, ದುರ್ಗಾ ಸೇವಾ ಸಮಿತಿ ಸಹಯೋಗದಲ್ಲಿ ನಡೆದ ಬೆಂಗಳೂರಿನ ಇತಿಹಾಸ ಅಕಾಡೆಮಿಯ ‘ಐತಿಹಾಸಿಕ ಪರಂಪರೆ ಉಳಿಸಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ನಮ್ಮಲ್ಲಿ ಲಭ್ಯವಿರುವ ಪುರಾತನ ವಸ್ತುಗಳು, ಶಿಲಾ ಶಾಸನಗಳು, ತಾಮ್ರಪಟಗಳು, ಕಟ್ಟಡಗಳು, ಪುರಾತನ ಕಡತಗಳು, ನಾಣ್ಯಗಳು ಗತ ಇತಿಹಾಸವನ್ನು ಹೇಳುತ್ತವೆ. ಇಂತಹ ಅಮೂಲ್ಯ ಪುರಾತನ ಉಳಿಕೆಗಳು ಕಾಲಕಾರಣವಾಗಿ ಅಥವಾ ಮಾನವ ನಿರ್ಲಕ್ಷ್ಯದಿಂದ ನಾಶವಾಗದಂತೆ ರಕ್ಷಿಸುವ ಜಾಗೃತಿ ಮೂಡಿಸುವ ಕಾರ್ಯಕ್ರಮವೇ ಐತಿಹಾಸಿಕ ಪರಂಪರೆ ಉಳಿಸಿ ಅಭಿಯಾನ’ ಎಂದು ವಿವರಿಸಿದರು.
ಶ್ರೀ ದುರ್ಗಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ದೇವರಾಜ ರಾವ್ ಕಾರ್ಯಕ್ರಮ ಉದ್ಘಾಟಿಸಿದರು. ನಿವೃತ್ತ ಪ್ರಾಂಶುಪಾಲ ಸುದರ್ಶನ ವೈ.ಎಸ್. ಅಧ್ಯಕ್ಷತೆ ವಹಿಸಿದ್ದರು. ಎಲ್ಲೂರು ಗುತ್ತು ಪ್ರಫುಲ್ಲ ಶೆಟ್ಟಿ, ಎಲ್ಲೂರು ಪಂಚಾಯಿತಿ ಮಾಜಿ ಅಧ್ಯಕ್ಷ ಯಶವಂತ ಶೆಟ್ಟಿ, ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸಂಜೀವ ಶೆಟ್ಯಿ, ಸಂತೋಷ ಶೆಟ್ಟಿ, ಗಿರಿಜಾ ಪೂಜಾರ್ತಿ, ದೇವಳದ ವ್ಯವಸ್ಥಾಪಕ ರಾಘವೇಂದ್ರ ಶೆಟ್ಟಿ, ದುರ್ಗಾಮಿತ್ರ ವೃಂದದ ಅಧ್ಯಕ್ಷ ಚಂದ್ರಹಾಸ ಆಚಾರ್ಯ ಇದ್ದರು.
ರಾಕೇಶ್ ಕುಂಜೂರು ಸ್ವಾಗತಿಸಿದರು. ಕೆ.ಎಲ್ ಕುಂಡಂತಾಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಸತೀಶ ಶೆಟ್ಟಿ ಗುಡ್ಡೆಚ್ಚಿ ಕಾರ್ಯಕ್ರಮ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.