ADVERTISEMENT

ಮಹಿಳಾ, ಮಕ್ಕಳ ಆಸ್ಪತ್ರೆಯಲ್ಲಿ ಉಚಿತ ಹೈಟೆಕ್‌ ಚಿಕಿತ್ಸೆ

ಪ್ರತಿ ತಿಂಗಳು 380 ಹೆರಿಗೆ, ಯಶಸ್ವಿಯಾದ ಪಿಪಿಪಿ ಮಾದರಿ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2020, 10:56 IST
Last Updated 25 ಫೆಬ್ರುವರಿ 2020, 10:56 IST
ಸೋಮವಾರ ಸುದ್ದಿಗೋಷ್ಠಿಯಲ್ಲಿ ಬಿಆರ್‌ಎಸ್‌ ಆರೋಗ್ಯ ಮತ್ತು ಸಂಶೋಧನಾ ಸಂಸ್ಥೆ ಜನರಲ್‌ ಮ್ಯಾನೇಜರ್ ಕುಶಾಲ್ ಶೆಟ್ಟಿ ಮಾತನಾಡಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಬಿಆರ್‌ಎಸ್‌ ಆರೋಗ್ಯ ಮತ್ತು ಸಂಶೋಧನಾ ಸಂಸ್ಥೆ ಜನರಲ್‌ ಮ್ಯಾನೇಜರ್ ಕುಶಾಲ್ ಶೆಟ್ಟಿ ಮಾತನಾಡಿದರು.   

ಉಡುಪಿ: ಕೂಸಮ್ಮ ಶಂಭುಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಖಾಸಗಿ ಹಾಗೂ ಸಾರ್ವಜನಿಕ ಸಹಭಾಗಿತ್ವದಲ್ಲಿ ನಿರ್ಮಾಣವಾಗಿದ್ದು, ವಿಶ್ವದರ್ಜೆಯ ಆರೋಗ್ಯ ಸೇವೆಗಳನ್ನು ಬಡವರಿಗೆ ಉಚಿತವಾಗಿ ನೀಡುತ್ತಿದೆ ಎಂದು ಬಿಆರ್‌ಎಸ್‌ ಆರೋಗ್ಯ ಮತ್ತು ಸಂಶೋಧನಾ ಸಂಸ್ಥೆ ಜನರಲ್‌ ಮ್ಯಾನೇಜರ್ ಕುಶಾಲ್ ಶೆಟ್ಟಿ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2018ರಲ್ಲಿ 30 ವರ್ಷಗಳ ಅವಧಿಗೆ ಸರ್ಕಾರದ ಜತೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಅವಧಿ ಮುಗಿದ ಬಳಿಕ ಪರಿಹಾರ ಪಡೆಯದೆ ಎಲ್ಲ ಸೌಲಭ್ಯಗಳನ್ನು ಸರ್ಕಾರದ ವಶಕ್ಕೆ ಒಪ್ಪಿಸಲಾಗುವುದು. ಲಾಭರಹಿತ ಸೇವೆ ನೀಡುವುದು ಸಂಸ್ಥೆಯ ಉದ್ದೇಶ ಎಂದರು.

ಒಪ್ಪಂದದಲ್ಲಿ ಪ್ರಮುಖವಾಗಿ ಮೂರು ವಿಚಾರಗಳಿದ್ದು,200 ಬೆಡ್‌ ಸಾಮರ್ಥ್ಯದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಬಡವರಿಗೆ ಉಚಿತವಾಗಿ ಚಿಕಿತ್ಸೆ ನೀಡುವುದು, ಪ್ರಸ್ತುತ ನಿರ್ಮಾಣ ಹಂತದಲ್ಲಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕೆಪಿಎಂಸಿ ಕಾಯ್ದೆಯಡಿ ಸರ್ಕಾರ ನಿಗಧಿಗೊಳಿಸುವ ದರ ಪಡೆದು ಚಿಕಿತ್ಸೆ ನೀಡುವುದು, ಜತೆಗೆ ಆರೋಗ್ಯ ಶಿಕ್ಷಣ ನೀಡಬೇಕು ಎಂಬ ಪ್ರಮುಖ ವಿಚಾರಗಳಿವೆ ಎಂದು ತಿಳಿಸಿದರು

ADVERTISEMENT

ಆಸ್ಪತ್ರೆಯಲ್ಲಿ ಬಿಲ್ಲಿಂಗ್ ಕೌಂಟರ್ ಸಹ ಇಲ್ಲ. ರಿಸ್ಕ್‌ ಲೆವೆಲ್‌–3ರವರೆಗೂ ಚಿಕಿತ್ಸೆ ನೀಡಲಾಗುತ್ತಿದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾದ ನಂತರ ಗರ್ಭದಲ್ಲಿ ಮಗುವಿಗೆ ಕಾಣಿಸಿಕೊಳ್ಳುವ ಹೃದ್ರೋಗ ಸೇರಿದಂತೆ ಗಂಭೀರ ಕಾಯಿಲೆಗಳಿಗೂ ರಿಸ್ಕ್‌ ಲೆವೆಲ್‌–4 ಅಡಿ ಉಚಿತ ಚಿಕಿತ್ಸೆ ದೊರೆಯಲಿದೆ ಎಂದರು.

2017ರಲ್ಲಿ ಪಿಪಿಪಿ ಮಾದರಿಯಲ್ಲಿ 23 ಜಿಲ್ಲೆಗಳ 122 ತಾಲ್ಲೂಕು ಆಸ್ಪತ್ರೆಗಳಲ್ಲಿ ಡಯಾಲಿಸಿಸ್‌ ಕೇಂದ್ರಗಳನ್ನು ತೆರೆಯಲಾಗಿದ್ದು, 3000ಕ್ಕೂ ಹೆಚ್ಚು ಮಂದಿಗೆ ಡಯಾಲಿಸಿಸ್‌ ಮಾಡಲಾಗಿದೆ ಎಂದು ಅಂಕಿ ಅಂಶಗಳನ್ನು ನೀಡಿದರು.

ಡಿಸ್‌ಚಾರ್ಜ್‌ ಎಗೆನೆಸ್ಟ್‌ ಮೆಡಿಕಲ್‌ ಅಡ್ವೈಸ್‌ ಪ್ರಕರಣಗಳು ತೀರಾ ಕಡಿಮೆ ಇವೆ. ಶೇ 96.14ರಷ್ಟು ಎನ್‌ಐಸಿಯು ಪ್ರವೇಶಗಳನ್ನು ಯಶಸ್ವಿಯಾಗಿ ಡಿಸ್‌ಚಾರ್ಜ್ ಮಾಡುವ ಮೂಲಕ ರಾಜ್ಯಕ್ಕೆ 2ನೇ ಸ್ಥಾನ ಪಡೆಯಲಾಗಿದೆ. ಅತಿ ಕಡಿಮೆ ಆ್ಯಂಟಿ ಬಯೋಟೆಕ್‌ ಬಳಕೆ ಮಾಡುವ ಆಸ್ಪತ್ರೆಗಳಲ್ಲಿ ಆಸ್ಪತ್ರೆ ಕೊನೆಯ ಮೂರನೇ ಸ್ಥಾನದಲ್ಲಿದೆ. ಬೇರೆ ಆಸ್ಪತ್ರೆಗಳಿಗೆ ರೆಫರ್‌ ಮಾಡುವ ಸಂಖ್ಯೆ ಶೇ 2ರಷ್ಟು ಮಾತ್ರ ಇದೆ.

2019ರಲ್ಲಿ ನವಜಾತ ಶಿಶುಮರಣ ಪ್ರಮಾಣ ಶೇ2.55, ಶಿಶುಮರಣ ಪ್ರಮಾಣ 2.8 ಇದ್ದು, ರಾಜ್ಯಕ್ಕೆ ಹೋಲಿಸಿದರೆ ತೀರಾ ಕಡಿಮೆಯಾಗಿದೆ. ಜತೆಗೆ ರೋಗಿಗಳಿಗೆ ಪ್ರಸವಪೂರ್ವ ಆರೈಕೆ, ಶಿಕ್ಷಣ ಪೌಷ್ಟಿಕಾಂಶಗಳ ಮಾಹಿತಿ ನೀಡಲು ತಜ್ಞ ವೈದ್ಯರಿದ್ದಾರೆ ಎಂದು ಕುಶಾಲ್ ಶೆಟ್ಟಿ ಮಾಹಿತಿ ನೀಡಿದರು.

ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಅಜಯ್‌ ರಾಜ್ ಮಲ್ಪೆ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.