ಉಡುಪಿ ಮಲ್ಲಿಗೆ
ಶಿರ್ವ: ಬಿರುಬಿಸಿಲಿನ ತಾಪದಲ್ಲಿ ಉಡುಪಿ ಮಲ್ಲಿಗೆ (ಶಂಕರಪುರ ಮಲ್ಲಿಗೆ) ಇಳುವರಿ ಹೆಚ್ಚಾಗಿದ್ದು ಮಾರುಕಟ್ಟೆಯಲ್ಲಿ ಧಾರಣೆ ಧಿಡೀರ್ ಕುಸಿದಿದೆ.
ಕರಾವಳಿಯಲ್ಲಿ ಮದುವೆ ಮತ್ತಿತರ ಶುಭಕಾರ್ಯಗಳ ಸೀಸನ್ ಮುಗಿದಿದೆ. ಹೀಗಾಗಿ ನಾಲ್ಕು ಚೆಂಡುಗಳ ಒಂದು ಅಟ್ಟಿ ಮಲ್ಲಿಗೆಯು ಮಲ್ಲಿಗೆ ಕಟ್ಟೆಯಲ್ಲಿ ಬುಧವಾರ ₹ 220ಕ್ಕೆ ಸಿಗುತ್ತಿತ್ತು. ಮದುವೆ ಸೀಸನ್ನಲ್ಲಿ ಒಂದು ಅಟ್ಟಿಗೆ ₹ 450ರಿಂದ ₹ 850 ವರೆಗೆ ದರ ಏರಿತ್ತು.
ಉಡುಪಿ ಮಲ್ಲಿಗೆ ಜಿಐ ಮಾನ್ಯತೆ ಪಡೆದಿದೆ. ಮಲ್ಲಿಗೆ ಗಿಡದಲ್ಲಿ ಬಿಸಿಲಿನ ವಾತಾವರಣದಲ್ಲಿ ಹೆಚ್ಚು ಮೊಗ್ಗುಗಳು ಚಿಗುರೊಡೆಯುತ್ತಿವೆ. ಹಾಗಾಗಿ ಹೂವಿನ ಮಾರುಕಟ್ಟೆಗಳಿಗೆ ನೂರಾರು ಅಟ್ಟಿ ಮಲ್ಲಿಗೆ ಲಗ್ಗೆ ಇಟ್ಟಿದೆ. ಅಗ್ಗದ ಬೆಲೆಯಲ್ಲಿ ದೊರೆಯುತ್ತಿರುವ ಮಲ್ಲಿಗೆಗೆ ಗ್ರಾಹಕರು ಮುಗಿಬೀಳುತ್ತಿದ್ದು ಲಾಭ ಇಲ್ಲದ್ದರಿಂದ ಬೆಳೆಗಾರರು ಬೇಸರಗೊಂಡಿದ್ದಾರೆ. ಕೆಲವೊಮ್ಮೆ ಇಳುವರಿ ಹೆಚ್ಚಾದರೂ ನಷ್ಟ, ಕಡಿಮೆ ಆದರೂ ನಷ್ಟ ಎನ್ನುತ್ತಾರೆ ಕೃಷಿಕ ಹರೀಶ್ ಬಂಟಕಲ್.
ಮಲ್ಲಿಗೆ ವ್ಯಾಪಾರ ಮದುವೆ ಸೀಸನ್ನಲ್ಲಿ ಲಾಭದಾಯಕ. ಈ ಬಾರಿ ಮದುವೆ ಸೀಸನ್ ಮೇ ಮೊದಲ ವಾರದಲ್ಲೇ ಕೊನೆಯಾಗಿದೆ. ಈಗ ಇಳುವರಿ ಹೆಚ್ಚಿದೆ. ಆದರೆ ಕೊಳ್ಳುವವರಿಲ್ಲದ್ದರಿಂದ ಗಿಡದಲ್ಲೇ ಮಲ್ಲಿಗೆ ಹೂ ಬಿಟ್ಟುಬಿಡುವಂತಾಗಿದೆ ಎನ್ನುತ್ತಾರೆ ಹೂವಿನ ವ್ಯಾಪಾರಿ ಆರಿಫ್ ಸರಕಾರಿ ಗುಡ್ಡೆ.
ಮಲ್ಲಿಗೆ ಇಳುವರಿ ಹೆಚ್ಚಾದರೆ ಮಾರಾಟಗಾರರಿಗೆ ಲಾಭ ದೊರಕುವುದಿಲ್ಲ. ಮದುವೆ ಸೀಸನ್ ಮುಗಿದ ಕಾರಣ ಎಲ್ಲ ಪ್ರದೇಶಗಳಿಂದಲೂ ಗ್ರಾಹಕರ ಕೊರತೆಯಾಗಿದೆ. ಮುಂಬಯಿ ಮಾರುಕಟ್ಟೆಯಲ್ಲಿ ಕೂಡಾ ಸದ್ಯ ಮಲ್ಲಿಗೆಗೆ ಬೇಡಿಕೆ ಕಡಿಮೆಯಾಗಿದೆ ಎನ್ನುತ್ತಾರೆ ಮಲ್ಲಿಗೆ ವ್ಯಾಪಾರಿ ಅಕ್ಷಯ್ ಕುಲಾಲ್ ಇನ್ನಂಜೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.