
ಬ್ರಹ್ಮಾವರ: ‘ಇಲ್ಲಿನ ಜಯಂಟ್ಸ್ ಸಂಸ್ಥೆ ಪರಿಸರ ಕಾಳಜಿ, ನಿರಂತರ ವೈದ್ಯಕೀಯ ತಪಾಸಣಾ ಶಿಬಿರಗಳ ಮೂಲಕ ಉತ್ತಮ ಕೆಲಸ ಮಾಡುತ್ತಿದೆ. ಇತ್ತೀಚಿಗೆ ನಡೆದ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಸಂಸ್ಥೆಗೆ ಹಲವಾರು ಪ್ರಶಸ್ತಿಗಳು ಬಂದಿರುವುದು ಶ್ಲಾಘನೀಯ’ ಎಂದು ಜಯಂಟ್ಸ್ ವೆಲ್ಫೇರ್ ಫೌಂಡೇಷನ್ ಮುಂಬೈ ಸೆಂಟ್ರಲ್ ಸಮಿತಿ ಸದಸ್ಯ ದಿನಕರ ಕೆ. ಅಮೀನ್ ಹೇಳಿದರು.
ಮಂಗಳವಾರ ಸಿಟಿ ಸೆಂಟರ್ ಸಿಂಧೂರ ಹಾಲ್ನಲ್ಲಿ ನಡೆದ ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರದ ನೂತನ ಅಧ್ಯಕ್ಷ, ಪದಾಧಿಕಾರಿಗಳ ಪದಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಬಸವರಾಜ ಹುಬ್ಬಳ್ಳಿ ಮಾತನಾಡಿ, ಜಯಂಟ್ಸ್ ಸಂಸ್ಥೆ ಅನೇಕ ಜನೋಪಯೋಗಿ ಕಾರ್ಯಕ್ರಮಗಳ ಮೂಲಕ ಉತ್ತಮ ಸೇವೆ ನೀಡುತ್ತಿರುವುದು ಅಭಿನಂದನೀಯ ಎಂದರು.
ಕರ್ನಾಟಕ ರಾಜ್ಯ ಆರೋಗ್ಯ ಕುಟುಂಬ ಕಲ್ಯಾಣ ಮತ್ತು ವೈದಕೀಯ ಶಿಕ್ಷಣ ಇಲಾಖೆ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆನಂದ ಜತ್ತನ್ ಶುಭಹಾರೈಸಿದರು. ಫೆಡರೇಷನ್ ಮಾಜಿ ಅಧ್ಯಕ್ಷ ತೇಜೇಶ್ವರ ರಾವ್, ಮಧುಸೂಧನ ಹೇರೂರು ಭಾಗವಹಿಸಿದ್ದರು. ಯೂನಿಟ್ ಡೈರೆಕ್ಟರ್ ಸುಂದರ ಪೂಜಾರಿ ನೂತನ ಸದಸ್ಯರಿಗೆ ಪ್ರಮಾಣವಚನ ಬೋಧಿಸಿದರು. ನೂತನ ಅಧ್ಯಕ್ಷ ಅಣ್ಣಯ್ಯ ದಾಸ್, ಆಡಳಿತ ಮಂಡಳಿ ಸದಸ್ಯರಿಗೆ ಅಧಿಕಾರ ಹಸ್ತಾಂತರಿಸಲಾಯಿತು.
ಪದಾಧಿಕಾರಿಗಳಾದ ಪ್ರತಿಭಾ ಅವರ ಜನ್ಮದಿನಾಚರಣೆ, ನಿಕಟಪೂರ್ವ ಅಧ್ಯಕ್ಷ ವಿವೇಕಾನಂದ ಕಾಮತ್ ದಂಪತಿಯ ವಿವಾಹ ವಾರ್ಷಿಕೋತ್ಸವ ಆಚರಿಸಲಾಯಿತು. ಸಂಸ್ಥೆಯ ಪೂರ್ವಾಧ್ಯಕ್ಷ ಸುಂದರ ಪೂಜಾರಿ ಅವರನ್ನು ಗೌರವಿಸಲಾಯಿತು. ಸಂಸ್ಥೆಯ ಗೃಹಪತ್ರಿಕೆ ‘ವನಸುಮ’ ಬಿಡುಗಡೆಗೊಳಿಸಲಾಯಿತು.
ಕಾರ್ಯದರ್ಶಿ ಮಿಲ್ಟನ್ ಒಲಿವರ್ ವಂದಿಸಿದರು. ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿದರು. ನೂತನ ಪದಾಧಿಕಾರಿಗಳಾಗಿ ಸುಂದರ ಪೂಜಾರಿ, ಮಿಲ್ಟನ್ ಒಲಿವೆರಾ, ಶ್ರೀನಾಥ ಕೋಟ, ಪ್ರತಿಭಾ ಪೂಜಾರಿ, ರೋನಾಲ್ಡ್ ಡಯಾಸ್ ಆಯ್ಕೆಯಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.