ಹೆಬ್ರಿ: ಕಬ್ಬಿನಾಲೆ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನೂತನ ಶಿಲಾಮಂಟಪದಲ್ಲಿ ನಾಗದೇವರು ಮತ್ತು ರಾಹುದೈವದ ಪ್ರತಿಷ್ಠಾಪನೆ, ಕುಂಭಾಭಿಷೇಕ ಮಹೋತ್ಸವದ ವಿವಿಧ ಧಾರ್ಮಿಕ ಕ್ರಿಯೆಗಳು ಈಚೆಗೆ ನೆರವೇರಿದವು.
ಕ್ಷೇತ್ರದ ತಂತ್ರಿ ಕೆ.ಎಸ್. ರಾಮಕೃಷ್ಣ ಮಾರ್ಗದರ್ಶನದಲ್ಲಿ ಅರ್ಚಕ ಲಕ್ಷ್ಮೀಶ ಭಾರದ್ವಾಜ್ ನೇತೃತ್ವದಲ್ಲಿ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆ, ಪವಮಾನ ಕಲಶ, ವಿಷ್ಣು ಸಹಸ್ರನಾಮಾರ್ಚನೆ, ಗೋಪಾಲಕೃಷ್ಣ ದೇವರಿಗೆ ದೀಪಾರಾಧನೆ, ರಂಗಪೂಜೆ, ಸುತ್ತು ಬಲಿ, ಪ್ರಸನ್ನ ಪೂಜೆ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ನಾಗದೇವರ ಸನ್ನಿಧಿಯಲ್ಲಿ ವಿಧಿವಿಧಾನಗಳು ನಡೆದವು.
ಶುಕ್ರವಾರ ಗೋಪಾಲಕೃಷ್ಣ ದೇವಸ್ಥಾನದಿಂದ ಮೆರವಣಿಗೆ ಮೂಲಕ ತರಲಾದ ಕಾಳರಾಹು ದೈವದ ಬಿಂಬವನ್ನು ನೂತನ ಶಿಲಾಮಯ ಗುಡಿಯಲ್ಲಿ ಪ್ರತಿಷ್ಠಾಪಿಸಲಾಯಿತು. ಪ್ರತಿಷ್ಠೆ ಪೂರ್ವ ಪ್ರಾಯಶ್ಚಿತ ಹೋಮ, ವೃಷಭ ಲಗ್ನದಲ್ಲಿ ಬಿಂಬ ಚೈತನ್ಯಾವಾಹನೆ, ಪ್ರತಿಜ್ಞಾವಿಧಿ, ಪಂಚಾಮೃತ ಪ್ರಧಾನ ಕಲಶಾಭಿಷೇಕ, ಆಶ್ಲೇಷ ಬಲಿ, ಸತ್ಯದೇವತೆ ಸನ್ನಿಧಿಯಲ್ಲಿ ದುರ್ಗಾ ಹೋಮ, ಪ್ರಸನ್ನ ಪೂಜೆ, ಪ್ರಸಾದ ವಿತರಣೆ, ನಾಗಕನ್ನಿಕ ವೋಟು ಆರಾಧನೆ, ಸುಹಾಸಿನಿ ಆರಾಧನೆ, ಅನ್ನ ಸಂತರ್ಪಣೆ, ಧಾರ್ಮಿಕ ಸಭೆ, ದೀಪಾರಾಧನೆ, ಕುಣಿತ ಭಜನೆ, ರಂಗ ಪೂಜೆ ಜರುಗಿತು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಘವೇಂದ್ರ ಭಟ್, ಸದಸ್ಯರಾದ ಕೆ. ನಾರಾಯಣ ಭಟ್, ಕೆ. ಚಂದ್ರಶೇಖರ ಬಾಯರಿ, ಯೋಗೇಂದ್ರ ಹೆಬ್ಬಾರ್, ಸದಾಶಿವ ಶೆಟ್ಟಿ, ಜಗದೀಶ, ಶೇಖರ್ ಗೌಡ, ರೇಣುಕಾ ಶೆಟ್ಟಿಗಾರ್, ಗಾಯತ್ರಿ ಮಡಿವಾಳ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.