ADVERTISEMENT

ಅಮೃತ ಭಾರತಿಗೆ ಕನ್ನಡದ ಆರತಿ 28ರಂದು

ಉಡುಪಿಯ ಅಜ್ಜರಕಾಡು, ಕುಂದಾಪುರದ ಬಸ್ರೂರು ಸೇರಿ ರಾಜ್ಯದ 75 ಕಡೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 18 ಮೇ 2022, 15:31 IST
Last Updated 18 ಮೇ 2022, 15:31 IST
ಕುಂದಾಫುರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ‘ಅಮೃತ ಭಾರತಿಗೆ ಕನ್ನಡ ಆರತಿ‘ ಪೂರ್ವಭಾವಿ ಸಭೆ ನಡೆಯಿತು.
ಕುಂದಾಫುರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ‘ಅಮೃತ ಭಾರತಿಗೆ ಕನ್ನಡ ಆರತಿ‘ ಪೂರ್ವಭಾವಿ ಸಭೆ ನಡೆಯಿತು.   

ಕುಂದಾಪುರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಡೆಯುವ ‘ಅಮೃತ ಭಾರತಿಗೆ ಕನ್ನಡದ ಆರತಿ’ ಕಾರ್ಯಕ್ರಮ ರಾಜ್ಯದಲ್ಲಿ ಏಕಕಾಲದಲ್ಲಿ ನಡೆಯಲಿದ್ದು, ಕಾರ್ಯಕ್ರಮ ಆಯೋಜಿಸುವ ಕುರಿತು ಅಭಿಪ್ರಾಯ ಕ್ರೂಢೀಕರಿಸಿ ಅನುಷ್ಠಾನಗೊಳಿಸಲಾಗುವುದು ಉಪವಿಭಾಗಾಧಿಕಾರಿ ಕೆ.ರಾಜು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಕುಂದಾಪುರ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಅಮೃತ ಭಾರತಿಗೆ ಕನ್ನಡ ಆರತಿ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಕಾರ್ಯಕ್ರಮದ ರೂಪುರೇಷೆ, ಮೆರವಣಿಗೆ, ವೇದಿಕೆ, ಊಟ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ, ಎಲ್ಲರ ಸಹಭಾಗಿತ್ವದ ಉದ್ದೇಶದಿಂದ ಸಭೆ ನಡೆಸಲಾಗುತ್ತಿದೆ. ಕಾರ್ಯಕ್ರಮ ಯಶಸ್ಸಿಗೆ ಸಮಿತಿಗಳ ರಚನೆ, ಕಾಲೇಜು ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಪ್ರದರ್ಶನಕ್ಕೆ ಅವಕಾಶ, ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಸ್ಥಳೀಯರ ಪರಿಚಯಿಸುವ ಕೆಲಸ ಆಗಬೇಕು ಎಂಬ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.

ADVERTISEMENT

ಬಸ್ರೂರಲ್ಲಿ ನಡೆಯುವ ಅಮೃತಮಹೋತ್ಸವ ಭಾರತಿ ಕಾರ್ಯಕ್ರಮ ಸ್ವಾಗತಾರ್ಹ, ಸ್ಥಳೀಯ ಸ್ವಾತಂತ್ರ್ಯ ಹೋರಾಟಗಾರರನ್ನು ಪರಿಚಯಿಸಬೇಕು. ಪ್ರಾಸ್ತ್ಯವಸ್ತು, ಹಳೆಯ ಪುಸ್ತಕಗಳ ಮಾಹಿತಿ ಲಭ್ಯವಾಗಬೇಕು. ಯವಕರ ಸಹಭಾಗಿತ್ವ ಅಗತ್ಯ. ಶಿಕ್ಷಣ ಸಂಸ್ಥೆಗಳು, ಕನ್ನಡ ಸಾಹಿತ್ಯ ಪರಿಷತ್ ಸಹಕಾರ ಅಗತ್ಯ ಎಂದು ಬಸ್ರೂರು ಮಹತೋಬಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಆಡಳಿತ ಮೊಕ್ತೇಸರ ಬಿ.ಅಪ್ಪಣ್ಣ ಹೆಗ್ಡೆ ಅಭಿಪ್ರಾಯಪಟ್ಟರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೇ28 ರಂದು ಏಕ ಕಾಲದಲ್ಲಿ ರಾಜ್ಯದ 75 ಕಡೆಗಳಲ್ಲಿ ‘ಅಮೃತ ಭಾರತಿಗೆ ಕನ್ನಡದ ಆರತಿ’ ಕಾರ್ಯಕ್ರಮ ಆಯೋಜಿಸಿದೆ. ಉಡುಪಿಯ ಅಜ್ಜರಕಾಡು, ಕುಂದಾಪುರದ ಬಸ್ರೂರಿನಲ್ಲಿ ಕಾರ್ಯಕ್ರಮ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಮೂರು ಹಂತಗಳಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮೊದಲಿಗೆ ಸ್ವಾತಂತ್ರ್ಯ ಸಂಗ್ರಾಮದ ಹಿನ್ನೆಲೆ ತಿಳಿಸುವ 75 ಪುಸ್ತಕಗಳ ಬಿಡುಗಡೆಯಾಗಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ತಿಳಿಸಿದರು.

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಿಂದ ಕಾರ್ಯಕ್ರಮಕ್ಕೆ ಬಂದವರಿಗೆ ಊಟದ ವ್ಯವಸ್ಥೆ ಬಗ್ಗೆ ಚರ್ಚೆ ನಡೆಯಿತು. ಕುಂದಾಪುರ ಪುರಸಭೆ ಮಾಜಿ ಉಪಾಧ್ಯಕ್ಷ ರಾಜೇಶ್ ಕಾವೇರಿ, ಕಸಾಪ ಕಾರ್ಯದರ್ಶಿ ದಿನಕರ ಶೆಟ್ಟಿ, ಬಸ್ರೂರು ಶಾರದಾ ಕಾಲೇಜು ಪ್ರಾಂಶುಪಾಲೆ ಡಾ.ಚಂದ್ರಾವತಿ ಶೆಟ್ಟಿ, ಭಂಡಾರ್‌ಕರ್ಸ್‌ ಕಾಲೇಜು ಉಪನ್ಯಾಸಕ ಕೆ.ಗೋಪಾಲ. ಶ್ರೀನಿವಾಸ ಶಂಕರ ನಾರಾಯಣ, ಉಮೇಶ ಪೂಜಾರಿ, ಯಶೋದಾ ಪಿ.ಶೆಟ್ಟಿ, ರಾಜು ಪೂಜಾರಿ ಹೆಮ್ಮಾಡಿ, ನರಸಿಂಹ ಗಾಣಿಗ ಹರೆಗೋಡು ಸಲಹೆ ನೀಡಿದರು.

ಬೈಂದೂರು ಮಾಜಿ ಶಾಸಕ ಬಿ.ಅಪ್ಪಣ್ಣ ಹೆಗ್ಡೆ, ಕುಂದಾಪುರ ತಹಶೀಲ್ದಾರ್ ಕಿರಣ್ ಜಿ.ಗೌರಯ್ಯ, ಬೈಂದೂರು ತಹಶೀಲ್ದಾರ್ ಶೋಭಾಲಕ್ಷ್ಮೀ, ಬ್ರಹ್ಮಾವರ ತಹಶೀಲ್ದಾರ್ ರಾಜಶೇಖರಮೂರ್ತಿ, ಬೈಂದೂರು ಇಒ ಭಾರತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಬ್ರಹ್ಮಾವರ ಇಒ ಇಬ್ರಾಹಿಂ ಸಭೆಯಲ್ಲಿ ಇದ್ದರು.

ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.