ಕಾರ್ಕಳ: ತಾಲ್ಲೂಕಿನ ನಿಟ್ಟೆ ಗ್ರಾಮದ ಕಲ್ಲಂಬಾಡಿ ಪ್ರದೇಶದಲ್ಲಿ ಕುಸುಮ ಶೆಟ್ಟಿ ಎಂಬುವವರ ಗದ್ದೆಯ ಬದುವಿನಲ್ಲಿರುವ ಗ್ರಾನೈಟ್ (ಕಣ) ಶಿಲೆಯಲ್ಲಿ ಕೊರೆಯಲ್ಪಟ್ಟ 3 ಅಡಿ ಎತ್ತರ ಮತ್ತು 2 ಅಡಿ ಅಗಲದ ಕಳಸ ಇಮ್ಮಡಿ ಭೈರರಸನ ಶಾಸನವನ್ನು ಮರು ಅಧ್ಯಯನಕ್ಕೆ ಒಳಪಡಿಸಲಾಗಿದೆ.
ಶಾಸನವು 16 ನೇ ಶತಮಾನದ ಕನ್ನಡ ಲಿಪಿ ಮತ್ತು ಭಾಷೆಯ 18 ಸಾಲುಗಳನ್ನು ಒಳಗೊಂಡಿದೆ. ಶಾಸನದ ಮೇಲ್ಭಾಗದಲ್ಲಿ ಮುಕ್ಕೊಡೆಯಿದ್ದು ಇಕ್ಕೆಲಗಳಲ್ಲಿ ಸೂರ್ಯ-ಚಂದ್ರರ ಉಬ್ಬು ಕೆತ್ತನೆಯಿವೆ.
ಶಾಸನದ ಅಧ್ಯಯನವನ್ನು ಈ ಮೊದಲು ಮಾಡಿದ್ದರೂ ಕಾಲಮಾನದಲ್ಲಿ ವ್ಯತ್ಯಾಸ ಕಂಡು ಬಂದಿರುವುದರಿಂದ ಈ ಶಾಸನದ ಮರು ಅಧ್ಯಯನವನ್ನು ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಪ್ರಾಚ್ಯಸಂಚಯ ಸಂಶೋಧನಾ ಕೇಂದ್ರ-ಉಡುಪಿಯ ಅಧ್ಯಯನ ನಿರ್ದೇಶಕ ಎಸ್.ಎ. ಕೃಷ್ಣಯ್ಯ ಅವರ ಸಹಯೋಗದಲ್ಲಿ ಹಾಗೂ ಆದರ್ಶ್ ಶೆಟ್ಟಿ ಮತ್ತು ಅಕ್ಷಯ್ ಶೆಟ್ಟಿಯವರ ಮಾಹಿತಿಯಂತೆ ಮಾಡಿರುತ್ತಾರೆ.
ಜಿನ ಸ್ತುತಿಯೊಂದಿಗೆ ಆರಂಭವಾಗುವ ಶಾಸನವು 1452ರ (ಸಾಮಾನ್ಯ ವರ್ಷ 1530) ವಿಕೃತಿ ಸಂವತ್ಸರದ ಮಕರ ಮಾಸ ಶುದ್ಧ 15ನೆಯ ಭಾನುವಾರಕ್ಕೆ ಸೇರುತ್ತದೆ. ಕಳಸ-ಕಾರ್ಕಳ ಭೈರರಸ ರಾಣಿ ಬೊಮ್ಮಲದೇವಿಯ ಪುತ್ರ ಇಮ್ಮಡಿ ಭೈರರಸನು ರಾಜ್ಯಭಾರ ಮಾಡುತ್ತಿದ್ದಾಗ ಮುಡಾಳಿಯವರು ಕಾರ್ಕಳದಲ್ಲಿನ ಅಜಿತನಾಥ (ಜೈನ ತೀರ್ಥಂಕರ) ದೇವರ ಅಮೃತಪಡಿಗೆ ಬಿಟ್ಟ ಭೂಮಿಯಲ್ಲಿ ಉತ್ಪತ್ತಿಯು ಕಡಿಮೆಯಾದಾಗ ಅದಕ್ಕೆ ಪ್ರತಿಯಾಗಿ ಇಮ್ಮಡಿ ಭೈರರಸನು ಕೊಟ್ಟ ಭೂ ದಾನದ ವಿವರವನ್ನು ಈ ಶಾಸನ ಉಲ್ಲೇಖಿಸುತ್ತದೆ.
ಕ್ಷೇತ್ರಕಾರ್ಯ ಶೋಧನೆಯಲ್ಲಿ ಪುರಾತತ್ವ ವಿದ್ಯಾರ್ಥಿಗಳಾದ ವಿಶಾಲ್ ರೈ ಕೆ, ಶಶಾಂತ್, ಮಂಜುನಾಥ ನಂದಳಿಕೆ ಹಾಗೂ ಸ್ಥಳೀಯರಾದ ರತ್ನಾಕರ್ ಶೆಟ್ಟಿ, ವಸಂತ್ ಶೆಟ್ಟಿ ಮತ್ತು ರಾಜೀವಿ ಶೆಟ್ಟಿಯವರು ಸಹಕಾರ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.