ಕಾರ್ಕಳ: ಇಲ್ಲಿನ ದಾನಶಾಲೆ ಬಾಹುಬಲಿ ಪ್ರವಚನ ಮಂದಿರದಲ್ಲಿ ಶನಿವಾರ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್ ಅವರು ಪತ್ರಕರ್ತರೊಂದಿಗೆ ಸಂವಾದ ಸಭೆ ನಡೆಸಿದರು.
ಸಹಕಾರಿ ಕ್ಷೇತ್ರವನ್ನು ಇನ್ನಷ್ಟು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಸ್ವಸಹಾಯ ಗುಂಪುಗಳು, ಮಹಿಳಾ ಸ್ವಾವಲಂಬನೆ, ಬಡಜನರಿಗೆ ಸಾಲ ಸೌಲಭ್ಯಗಳ ಸರಳಿಕರಣ, ಸ್ವಸಹಾಯ ಸಂಘಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕಿದೆ. ಕೇಂದ್ರ ಸರ್ಕಾರ ಗ್ರಾಮೀಣ ಮಟ್ಟದಲ್ಲಿರುವ ಸಹಕಾರಿ ಬ್ಯಾಂಕ್ಗಳಿಗೆ ಸರ್ಕಾರಿ ಸಾಲ ಸವಲತ್ತುಗಳನ್ನು ನೀಡುವ ಜವಾಬ್ದಾರಿ ವಹಿಸಿದರೆ ಸಮರ್ಪಕವಾಗಿ ಅವುಗಳನ್ನು ನಿರ್ವಹಿಸುಬಹುದು. ಇದರಿಂದ ಸರ್ಕಾರಿ ಸಾಲ ಸೌಲಭ್ಯ ಕಟ್ಟಕಡೆಯ ವ್ಯಕ್ತಿಗೂ ಸಿಗುತ್ತದೆ ಎಂದರು.
ಸಹಕಾರಿ ಕ್ಷೇತ್ರದಲ್ಲಿ ಸಾಲ ಪಡೆಯುವ ಬಡವರ್ಗದ ಜನರು ನಿಷ್ಠಾವಂತರಾಗಿ ಶೇ 100 ಸಾಲ ಮರುಪಾವತಿ ಮಾಡುವುದರಿಂದ ಸಹಕಾರಿ ಕ್ಷೇತ್ರ ಪ್ರಗತಿಯತ್ತ ಸಾಗಲು ಕಾರಣವಾಗಿದೆ. ಮಹಿಳೆಯರು ತೊಡಗಿಸಿಕೊಂಡಿರುವುದರಿಂದ ಅವರು ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡು ಸ್ವಾವಲಂಬಿ ಬದುಕು ನಡೆಸುತ್ತಿದ್ದಾರೆ. ಹೊರ ಜಿಲ್ಲೆಗಳ ಸಣ್ಣ ಹಾಗೂ ಭಾರಿ ಉದ್ಯಮಗಳಿಗೆ, ಸಕ್ಕರೆ ಕಾರ್ಖಾನೆಗಳಿಗೆ ಸಾಲ ನೀಡುತ್ತಿದ್ದು, ಸಹಕಾರಿ ಬ್ಯಾಂಕ್ಗಳು ರಾಷ್ಟ್ರೀಕೃತ ಬ್ಯಾಂಕ್ಗಳಂತೆ ಉದ್ಯಮ, ಕೈಗಾರಿಕೆಗಳಿಗೂ ಸಾಲ ನೀಡುವ ಮಟ್ಟಕ್ಕೆ ಬೆಳೆಯುವಂತಾಗಿದೆ ಎಂದರು.
ಎಸ್ಸಿಡಿಸಿ ಬ್ಯಾಂಕ್ ನಿರ್ದೇಶಕ ಇರ್ವತ್ತೂರು ಭಾಸ್ಕರ್ ಕೋಟ್ಯಾನ್, ಶಶಿಕುಮಾರ್ ರೈ, ನವೋದಯ ಚಾರಿಟಬಲ್ ಟ್ರಸ್ಟ್ ನಿರ್ದೇಶಕ ಮೇಘರಾಜ್ ಜೈನ್, ಕಾರ್ಕಳ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೊಹಮ್ಮದ್ ಶರೀಫ್, ಸದಸ್ಯರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.