ADVERTISEMENT

ಕಾರ್ಕಳ: ನೀರಿನ ಬವಣೆ ಎದುರಿಸಲು ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 2:46 IST
Last Updated 17 ಫೆಬ್ರುವರಿ 2026, 2:46 IST
ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ನೀಡಲಾಗಿರುವ ಅಮೃತ ಯೋಜನೆಯ ನೀರಿನ ಸಂಪರ್ಕ
ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ನೀಡಲಾಗಿರುವ ಅಮೃತ ಯೋಜನೆಯ ನೀರಿನ ಸಂಪರ್ಕ   

ಕಾರ್ಕಳ: ಈ ಬಾರಿ ಎಲ್ಲೆಡೆ ದೀರ್ಘ ಕಾಲ ಮಳೆ ಬಿದ್ದಿರುವ ಕಾರಣ ನೀರಿನ ಒರತೆ ಕಡಿಮೆಯಾಗಿಲ್ಲ. ನೀರಿನ ಕೊರತೆಯೂ ಕಾಡುತ್ತಿಲ್ಲ. ಆದರೂ ಪರಿಸ್ಥಿತಿ ಕೈಮೀರಿದರೆ ಎದುರಿಸಲು ಪುರಸಭಾ ವ್ಯಾಪ್ತಿಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಪ್ರತಿ ಬಾರಿಯೂ ನೀರಿನ ಸಮಸ್ಯೆ ಕಾಡುವ ಕೆಲವು ಪ್ರದೇಶಗಳಿವೆ. ಬಂಗ್ಲೆಗುಡ್ಡೆ ಎರಡನೇ ವಾರ್ಡ್‌ನ ಕಜೆ ಎಂಬಲ್ಲಿ ಈಗ ಎರಡು ದಿನಕ್ಕೊಮ್ಮೆ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಇಲ್ಲಿ ಸುಮಾರು 800 ಮನೆಗಳಿವೆ. ಹಲವು ವರ್ಷಗಳಿಂದ ಎರಡು ದಿನಕ್ಕೊಮ್ಮೆ ಬರುವ ನೀರಿಗೆ ಜನರು ಒಗ್ಗಿಕೊಳ್ಳುವುದು ಅನಿವಾರ್ಯವಾಗಿದೆ. ಪ್ರತಿ ಬಾರಿ ಒತ್ತಾಯ ಮಾಡಿಯೂ ಇದು ಶಾಶ್ವತ ಸಮಸ್ಯೆಯಾಗಿ ಉಳಿದಿದೆ ಎನ್ನುತ್ತಾರೆ ವಾರ್ಡ್‌ ಸದಸ್ಯೆ ಪ್ರತಿಮಾ.

ಜೋಗುಳಬೆಟ್ಟು ವ್ಯಾಪ್ತಿಯ ಐದು ಸೆಂಟ್ಸ್ ಜಾಗದಲ್ಲಿ 25 ಮನೆಗಳಿವೆ. ಇಲ್ಲಿ ಅಮೃತ ಯೋಜನೆಯ ನೀರು ಸರಬರಾಜು ಪೈಪ್‌ಲೈನ್ 2.5 ಕಿಮೀ ವರೆಗೆ ಮಾತ್ರ ಬಂದಿದ್ದು, ಮುಂದುವರಿದಿಲ್ಲ. ಪುರಸಭೆಯ ವತಿಯಿಂದ ಹಳೆ ಪೈಪ್‌ಲೈನ್‌ಗೆ ಅಮೃತ ಯೋಜನೆಯ ಪೈಪ್ ಜೋಡಿಸಲಾಗಿದೆ.

ADVERTISEMENT

ಎಣ್ಣೆಹೊಳೆಯ ಏತ ನೀರಾವರಿ ಯೋಜನೆಯ ನೀರನ್ನು ರಾಮ ಸಮುದ್ರಕ್ಕೆ ಸೇರಿಸಲಾಗುತ್ತಿತ್ತು. ಆದರೆ ಕಾಮಗಾರಿ ಅಪೂರ್ಣವಾಗಿ ನೀರು ಬರುವುದು ಡಿಸೆಂಬರ್‌ನಲ್ಲಿ ನಿಂತಿದೆ.

ಪ್ರವಾಸಿ ಮಂದಿರ ಸಮೀಪ ಅಮೃತ ಯೋಜನೆಯ ಪೈಪ್‌ಲೈನ್ ಕಾಮಗಾರಿ ನಡೆಯುವಾಗ ನೀರಿನ ಪೈಪ್‌ಲೈನ್ ತುಂಡರಿಸಿದ್ದು ರಾಮ ಸಮುದ್ರಕ್ಕೆ ಈಗ ನೀರು ಬರುವುದು ನಿಂತಿದೆ. ರಾಮ ಸಮುದ್ರದಲ್ಲಿ ನೀರು ತುಂಬಲು 15 ಮಳೆಯಾದರೂ ಬರಬೇಕಾಗುತ್ತದೆ ಎಂದು ಜೋಗುಳ ಬೆಟ್ಟು ವಾರ್ಡ್ ಸದಸ್ಯ ವಿನ್ನಿ ಬೋಲ್ಡ್ ಮೆಂಡೋನ್ಸಾ ಹೇಳುತ್ತಾರೆ.

ರಕ್ಷಿತ್ ರಾವ್ ಹೇಳುವಂತೆ ಅಮೃತ ಯೋಜನೆಯ ಕಾಮಗಾರಿಯ ಕುರಿತು ಕಾರ್ಕಳದಲ್ಲಿ ಒಂದೊಂದೇ ಹಂತ ಹಂತವಾಗಿ ಕಾಮಗಾರಿ ನಡೆಯುತ್ತಿದ್ದು ಒಂದೊಂದೇ ವಲಯದಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುತ್ತಿದೆ. 2 ವಲಯ ಮಾತ್ರ ಮುಗಿದಿದೆ. ಅಮೃತ ಯೋಜನೆಯ ಸಂಪರ್ಕ ಮನೆಗೆ ನೀಡಿ 6 ತಿಂಗಳು ಕಳೆದರೂ ಈತನಕ ಕೇವಲ 4ಲೀಟರ್ ನೀರು ಬಂದಿದೆ ಎಂದು ಖಲೀಲ್ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.