
ಕಾರ್ಕಳ : ‘ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ (ಕ.ಸಾ.ಪ) ಸರ್ಕಾರ ಹಸ್ತಕ್ಷೇಪ ಮಾಡಬಾರದು. ಕಸಾಪಕ್ಕೆ ಆಡಳಿತಾಧಿಕಾರಿ ನೇಮಕ ಮಾಡಿರುವ ಬಗ್ಗೆ ಮರು ಚಿಂತನೆ ಮಾಡಬೇಕು’ ಎಂದು ಶಾಸಕ ವಿ.ಸುನಿಲ್ ಕುಮಾರ್ ಹೇಳಿದರು.
ಕಾರ್ಕಳ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ ಎಂ.ಕೆ. ವಿಜಯ ಕುಮಾರ್ ವೇದಿಕೆಯಲ್ಲಿ ಭಾನುವಾರ ನಡೆದ ಕಾರ್ಕಳ ತಾಲ್ಲೂಕು 21 ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು, ‘ರಾಜ್ಯಕ್ಕೆ ಹಿತಾನುಭವವಾಗುವ ನಿಟ್ಟಿನಲ್ಲಿ ಕ.ಸಾ.ಪ. ಕೆಲಸ ಮಾಡಬೇಕು’ ಎಂದರು.
‘ಇಂದು ರಾಜ್ಯ ಮಟ್ಟದ ಸಾಹಿತ್ಯ ಸಮ್ಮೇಳಗಳಲ್ಲಿ ಮಾಂಸಹಾರಿ, ಸಸ್ಯಹಾರಿ ಊಟದ ಬಗ್ಗೆ ಚರ್ಚೆ ನಡೆಸುವುದೇ ಪ್ರಧಾನವಾಗಿದೆ. ಸಮ್ಮೇಳನಗಳಲ್ಲಿ ಸಾಹಿತ್ಯದ ಬಗ್ಗೆ ವಿಮರ್ಶಾತ್ಮಕ ಚರ್ಚೆಗಳು ನಡೆಯಲಿ’ ಎಂದು ಹೇಳಿದರು.
‘ಸಾಹಿತ್ಯ ಸಮ್ಮೇಳನಗಳು ಯುವ ಪೀಳಿಗೆಯಲ್ಲಿ ಕನ್ನಡ ಭಾಷೆಯ ಬಗೆಗಿನ ಆಸಕ್ತಿಯನ್ನು ಬೆಳೆಸುವಂತಾಗಬೇಕು. ಅದು ಸಾಹಿತ್ಯ ಪರಿಷತ್ನ ಜವಾಬ್ದಾರಿಯೂ ಹೌದು ಎಂದರು.
‘ಕಾರ್ಕಳದಲ್ಲಿ ಜೈನ ರಾಜರ ಕಾಲದಿಂದಲೂ ಸಾಹಿತ್ಯಕ್ಕೆ ಪ್ರೋತ್ಸಾಹ ಸಿಗುತ್ತಾ ಬಂದಿದೆ. ಹೊಸ ಪೀಳಿಗೆಯೂ ಅದಕ್ಕೆ ಸೇರ್ಪಡೆಗೊಳ್ಳುತ್ತಿದೆ’ ಎಂದು ಹೇದರು.
ಸಮ್ಮೇಳನಾಧ್ಯಕ್ಷ ಸಿದ್ದಾಪುರ ವಾಸುದೇವ ಭಟ್ಟ ಮಾತನಾಡಿ, ಪ್ರತಿಯೊಬ್ಬರಿಗೂ ಓದು ಅತೀ ಮುಖ್ಯವಾಗಿದೆ. ಅವರವರಿಗೆ ಆಸಕ್ತಿಯ ಕ್ಷೇತ್ರದ ಪುಸ್ತಕಗಳನ್ನು ಓದಿ ಎಂದರು.
ಸಾಂಸ್ಕೃತಿಕ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಫೆಡರೇಶನ್ ಆಫ್ ಕರ್ನಾಟಕ ಕ್ವಾರಿ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್ನ ರಾಜ್ಯಧ್ಯಕ್ಷ ರವೀಂದ್ರ ಪ್ರಭು ಬಜಗೋಳಿ ಉದ್ಘಾಟಿಸಿದರು.
ಕ.ಸಾ.ಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಗಳನ್ನಾಡಿದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಕೆ.ಗುಣಪಾಲ ಕಡಂಬ, ಶಿಕ್ಷಣಾಧಿಕಾರಿ ಗಿರಿಜಮ್ಮ ಎಸ್.ಆರ್, ಸಾಹಿತಿ ಎಚ್.ದುಂಡಿರಾಜ್, ಜ್ಞಾನಸುಧ ಶಿಕ್ಷಣ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಜ್ಯೋತಿ ಪದ್ಮನಾಭ ಬಂಡಿ, ಎಂ.ಕೆ.ಸುವೃತ್ ಕುಮಾರ್, ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕ ಅಶ್ವಥ್ ಎಸ್.ಎಲ್., ಹಿರ್ಗಾನ ಗ್ರಾ.ಪಂ ಅಧ್ಯಕ್ಷೆ ಸುನಿತಾ ಉಪಸ್ಥಿತರಿದ್ದರು.
ತಾಲ್ಲೂಕು ಕಸಾಪ ಅಧ್ಯಕ್ಷ ಪ್ರಭಾಕರ್ ಶೆಟ್ಟಿ ಕೊಂಡಳ್ಳಿ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಗಣೇಶ್ ಜಾಲ್ಸೂರು ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಮಾಲತಿ ಜಿ. ಪ್ರಭುಅವರ ‘ನನ್ನೊಳಗಿನ ನಾನು’ ಹಾಗೂ ಆರ್. ರಮೇಶ್ ಪ್ರಭು ಅವರ ‘ಮನದಾಳದ ಮುತ್ತುಗಳು’, ಶ್ರೀಧರ್ ಗೋರೆ ನೆಲ್ಯಾಡಿ ಅವರ ‘ದ್ರೇಷ್ಕಾಣ ಫಲ ಸಂಚಯ’ ಎಂಬ ಕೃತಿಗಳನ್ನು ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನ ವಿಶ್ರಾಂತ ಪ್ರಾಚಾರ್ಯ ಬಿ.ಪದ್ಮನಾಭ ಗೌಡ ಬಿಡುಗಡೆಗೊಳಿಸಿದರು.
ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕ ವಿದ್ವಾನ್ ಗಣಪತಿ ಭಟ್ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಕಾರ್ಕಳ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ್ ಶೆಟ್ಟಿ ಪರಿಷತ್ ಧ್ವಜಾರೋಹಣ ಮಾಡಿದರು.
ಕಾರ್ಕಳ ಯಕ್ಷ ಕಲಾರಂಗದ ಅಧ್ಯಕ್ಷ ವಿಜಯ್ ಶೆಟ್ಟಿ ಮೆರವಣಿಗೆಯನ್ನು ಉದ್ಘಾಟಿಸಿದರು. ಕ್ರಿಯೇಟಿವ್ ಪುಸ್ತಕ ಮನೆ ಜೋಡುರಸ್ತೆಯಿಂದ ಸಮ್ಮೇಳನಾಧ್ಯಕ್ಷರನ್ನು ಎದುರುಗೊಂಡು, ಕನ್ನಡ ತಾಯಿ ಭುವನೇಶ್ವರಿ ದೇವಿಯ ಭವ್ಯ ಶೋಭಾಯಾತ್ರೆ ನಡೆಯಿತು.
ಮೆರವಣಿಗೆಯಲ್ಲಿ ಸಾಂಸ್ಕೃತಿಕ ತಂಡಗಳು ಭಾಗಿ ಗೋಷ್ಠಿಗಳಲ್ಲಿ ವಿವಿಧ ವಿಚಾರ ಮಂಡನೆ
ಶಾಲೆಗಳಲ್ಲಿ ಪ್ರಾಥಮಿಕ ಹಂತದಲ್ಲಿ ಮಾಧ್ಯಮ ಕನ್ನಡದಲ್ಲೇ ಇರಲಿ. ಮಕ್ಕಳಲ್ಲಿ ಭಾಷಾ ಪ್ರೇಮ ಮೂಡಿಸಲು ಮತ್ತು ಕನ್ನಡದ ಉಳಿವಿಗೆ ಇದು ಅತ್ಯಗತ್ಯವಾಗಿದೆನೀಲಾವರ ಸುರೇಂದ್ರ ಅಡಿಗ ಜಿಲ್ಲಾಧ್ಯಕ್ಷ ಕಸಾಪ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.