ADVERTISEMENT

ಉಡುಪಿ: ತಗ್ಗಿದ ಮಳೆಯ ಅಬ್ಬರ

ಕರಾವಳಿಯಲ್ಲಿ ಬಿರುಗಾಳಿ ಮುನ್ಸೂಚನೆ; ಕಡಲಿಗಿಳಿಯದಂತೆ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2021, 16:06 IST
Last Updated 23 ಜುಲೈ 2021, 16:06 IST

ಉಡುಪಿ: ಜಿಲ್ಲೆಯಾದ್ಯಂತ ಶುಕ್ರವಾರ ಮಳೆಯ ಪ್ರಮಾಣ ತಗ್ಗಿದೆ. ಕೆಲಕಾಲ ಸುರಿದ ಮಳೆಯು ಕೆಲಕಾಲ ಬಿಡುವು ನೀಡಿತ್ತು. ಗಾಳಿ ಮಳೆಗೆ ಜಿಲ್ಲೆಯಲ್ಲಿ ಹಲವು ಮನೆಗಳು ಬಿದ್ದಿವೆ.

ಕಾರ್ಕಳ ತಾಲ್ಲೂಕಿನ ಸಾಣೂರು ಗ್ರಾಮದ ಬಿಟ್ಟು ಪೂಜಾರ್ತಿ ಅವರ ಮನೆ ಬಿರುಗಾಳಿ ಮಳೆಗೆ ಸಂಪೂರ್ಣವಾಗಿ ಕುಸಿದು ಬಿದ್ದಿದ್ದು ₹ 2 ಲಕ್ಷ ನಷ್ಟವಾಗಿದೆ. ಬೈಂದೂರು ತಾಲ್ಲೂಕಿನ ನಾವುಂದ ಗ್ರಾಮದ ವಿನೋದ್ ಆಚಾರಿ ಅವರ ಮನೆ ಹಾಗೂ ಬಿಜೂರು ಗ್ರಾಮದ ಶಾರದಾ ಅವರ ಮನೆ ಹಾಗೂ ಕೊಟ್ಟಿಗೆಗೆ ಹಾನಿಯಾಗಿದೆ. ತಲಾ ₹ 50,000 ನಷ್ಟ ಸಂಭವಿಸಿದೆ.

ಕಳೆದ 24 ತಾಸುಗಳಲ್ಲಿ ಉಡುಪಿ ಜಿಲ್ಲೆಯಲ್ಲಿ 5.2 ಸೆಂ.ಮೀ ಮಳೆಯಾಗಿದ್ದು, ಉಡುಪಿ ತಾಲ್ಲೂಕಿನಲ್ಲಿ 2.1 ಬ್ರಹ್ಮಾವರ ತಾಲ್ಲೂಕಿನಲ್ಲಿ 2.5, ಕಾಪು ತಾಲ್ಲೂಕಿನಲ್ಲಿ 1.3, ಕುಂದಾಪುರ ತಾಲ್ಲೂಕಿನಲ್ಲಿ 5.7, ಬೈಂದೂರು ತಾಲ್ಲೂಕಿನಲ್ಲಿ 7, ಕಾರ್ಕಳ ತಾಲ್ಲೂಕಿನಲ್ಲಿ 3.9 ಹಾಗೂ ಹೆಬ್ರಿಯಲ್ಲಿ 10.4 ಸೆಂ.ಮೀ. ಮಳೆಯಾಗಿದೆ.

ADVERTISEMENT

ಗಾಳಿ, ಮಳೆಯ ಮುನ್ಸೂಚನೆ:ಜುಲೈ 27ರವರೆಗೆ ಕರಾವಳಿಯ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಗಾಳಿಯು 40 ರಿಂದ 60 ಕಿ.ಮೀ ವೇಗದಲ್ಲಿ ಬೀಸಲಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದೆ.

ಸಮುದ್ರ ಪ್ರಕ್ಷುಬ್ಧಗೊಂಡಿದ್ದು, ಕರಾವಳಿ ತೀರದಲ್ಲಿ 2.5 ಮೀಟರ್‌ನಿಂದ 4.3 ಮೀಟರ್‌ವರೆಗೆ ಎತ್ತರದ ಅಲೆಗಳು ಏಳುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರೈಲುಗಳ ಸಂಚಾರ ರದ್ದು:ಭಾರಿ ಮಳೆ ಹಿನ್ನೆಲೆಯಲ್ಲಿ ವಶಿಷ್ಟ ನದಿ ಅಪಾಯದ ಮಟ್ಟ ತಲುಪಿದ್ದು ಚಿಪ್ಲಿನ್ ಹಾಗೂ ಕಮತೆ ನಿಲ್ದಾಣದಲ್ಲಿಯೂ ಮಳೆಯ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಪರಿಣಾಮ ಶುಕ್ರವಾರ ಸಂಚರಿಸಬೇಕಿದ್ದ ಹಲವು ರೈಲುಗಳು ರದ್ದಾದವು.

ಶುಕ್ರವಾರ ಸಂಚರಿಸಬೇಕಿದ್ದ 01152 ಮಡಗಾವ್‌–ಮುಂಬೈಸಿಎಸ್‌ಎಂಟಿ ಜನಶತಾಬ್ದಿ, 02617 ಎರ್ನಾಕುಲಂ–ಎಚ್‌.ನಿಜಾಮುದ್ದೀನ್‌ ರೈಲು ಸಂಚರಿಸಲಿಲ್ಲ. ಜುಲೈ 26ರಂದು ಸಂಚರಿಸಬೇಕಿದ್ದ 02618 ಎಚ್‌.ನಿಜಾಮುದ್ದಿನ್‌–ಎರ್ನಾಕುಲಂ ರೈಲು ಸಂಚಾರ ರದ್ದಾಗಿದೆ.

02620 ಮಂಗಳೂರು ಸೆಂಟ್ರಲ್‌–ಲೋಕಮಾನ್ಯ ತಿಲಕ್‌ ರೈಲು 01134 ಮಂಗಳಳೂರು ಜಂಕ್ಷನ್‌ ಹಾಗೂ ಮುಂಬೈ ಸಿಎಸ್‌ಎಂಟಿ ರೈಲುಗಳು ಶುಕ್ರವಾರ ಸಂಚರಿಸಲಿಲ್ಲ.

09331 ಕೊಚುವೆಲಿ–ಇಂಧೋರ್ ರೈಲು ಶುಕ್ರವಾರ ಬದಲಿ ಮಾರ್ಗವಾಗವಾದ ರೇಣಿಗುಂಟ, ಗುಡೂರು, ವಿಜಯವಾಡ, ಬಲ್ಲಾರ್‌ಶಹ, ಇಟರ್ಸಿ, ಭೋಪಾಲ್‌, ಉಜ್ಜೈನಿ ಮಾರ್ಗವಾಗಿ ಸಂಚರಿಸಿದೆ.

01151 ಮುಂಬೈ ಸಿಎಸ್‌ಎಂಟಿ–ಮಡಗಾವ್ ಜನಶತಾಬ್ಧಿ ರೈಲು, 01113 ಹಾಗೂ 01114 ಮುಂಬೈ ಸಿಎಸ್‌ಎಂಟಿ–ಮಡಗಾವ್ ಮಾಂಡೋವಿ ರೈಲು, 06163 ಲೋಕಮಾನ್ಯ ತಿಲಕ್‌–ಕುಚುವೆಲಿ ಗರೀಭ್‌ ರಥ್ ರೈಲು ಶುಕ್ರವಾರ ಸಂಚರಿಸಲಿಲ್ಲ.

06346 ತಿರುವನಂತಪುರಂ ಸೆಂಟ್ರಲ್‌–ಲೋಕಮಾನ್ಯ ತಿಲಕ್‌ ನೇತ್ರಾವತಿ ಎಕ್ಸ್‌ಪ್ರೆಸ್‌ ರೈಲು ಹಾಗೂ 06097 ಕೊಚುವೆಲಿ–ಯೋಗನಗರಿ ರಿಶಿಕೇಷ್‌ ರೈಲು ಸಂಚಾರ ಕೂಡ ಶುಕ್ರವಾರ ರದ್ದಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.