ಉಡುಪಿ: ಉತ್ಖನನ ವೇಳೆ ದೊರೆತ ವಿಷ್ಣು ಹರಿ ಶಿಲಾಫಲಕ ಹಾಗೂಮಸೀದಿಯ ಪಶ್ಚಿಮ ಭಾಗದಲ್ಲಿ ಸಿಕ್ಕ 12 ಸ್ತಂಭಗಳು ಅಯೋಧ್ಯೆಯಲ್ಲಿ ರಾಮಮಂದಿರವಿತ್ತು ಎಂಬುದಕ್ಕೆ ಪ್ರಮುಖ ಸಾಕ್ಷ್ಯಗಳಾಗಿದ್ದವು ಎಂದುಪುರಾತತ್ವ ಇಲಾಖೆ ನಿವೃತ್ತ ಪ್ರಾದೇಶಿಕ ನಿರ್ದೇಶಕ ಕೆ.ಕೆ.ಮೊಹಮ್ಮದ್ ಹೇಳಿದರು.
ವಿದ್ಯೋದಯ ಶಾಲೆಯ ಸಭಾಂಗಣದಲ್ಲಿ ಭಾನುವಾರ ಪಾದೂರು ಗುರುರಾಜ ಭಟ್ ಸ್ಮಾರಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಉಪನ್ಯಾಸ ನೀಡಿದ ಅವರು, ಪುರಾತತ್ವ ಇಲಾಖೆ ನಿರ್ದೇಶಕ ಡಾ.ಬಿ.ಬಿ. ಲಾಲ್ ನೇತೃತ್ವದಲ್ಲಿ ಬಾಬ್ರಿ ಮಸೀದಿ ಪ್ರದೇಶದ ಉತ್ಖನನ ನಡೆದಾಗ ಅಷ್ಟಮಂಗಲ ಚಿಹ್ನೆ, ಮಕರ, ಕೂರ್ಮ ಚಿಹ್ನೆಗಳು ಸಿಕ್ಕಿದ್ದವು ಎಂದು ಹೇಳಿದರು.
50 ಸ್ತಂಭ, 7 ಪಕ್ಕಾಸು, 263 ಪ್ರತಿಮೆಗಳ ಅವಶೇಷಗಳೂ ಉತ್ಖನದಲ್ಲಿ ಸಿಕ್ಕಿದ್ದವು. ಈ ಪುರಾವೆಗಳ ಆಧಾರದಲ್ಲಿ ವಿಷ್ಣು ದೇವಾಲಯವನ್ನು ಕೆಡವಿ ಬಾಬ್ರಿ ಮಸೀದಿಯನ್ನು ನಿರ್ಮಿಸಲಾಗಿತ್ತು ಎಂಬ ನಿರ್ಣಯಕ್ಕೆ ಬಂದು ಅದನ್ನು ವರದಿಯಲ್ಲಿ ಉಲ್ಲೇಖಿಸಲಾಗಿತ್ತು ಎಂದರು.
ಉತ್ತರ ಭಾರತದಲ್ಲಿ 27 ಮಂದಿರಗಳನ್ನು ಕೆಡವಿ ಅವುಗಳ ಅವಶೇಷಗಳಿಂದ ಕುತುಬ್ ಮಿನಾರ್ ಬಳಿಯ ಕ್ವಾಯತುಲ್ ಮಸೀದಿ ನಿರ್ಮಿಸಲಾಗಿದೆ ಎಂಬ ವಿವಾರ ಬಯಲಾಗಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಅವಧಿಯೇ ಪರ್ವಾಗಿಲ್ಲ’
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಭಾರತೀಯ ಪುರಾತತ್ವ ಇಲಾಖೆಯ ಕಾರ್ಯವೈಖರಿ ಬದಲಾಗಬಹುದು ಎಂಬ ನಿರೀಕ್ಷೆಗಳಿದ್ದವು. ಆದರೆ, ನಿರೀಕ್ಷೆಗಳು ಹುಸಿಯಾಗಿವೆ. ಕಾಂಗ್ರೆಸ್ ಆಡಳಿತಾವಧಿಗೆ ಹೋಲಿಸಿದರೆ ಬಿಜೆಪಿ ಅವಧಿಯಲ್ಲಿ ಪುರಾತತ್ವ ಇಲಾಖೆ ಬಹಳ ನಿಧಾನಗತಿಯಲ್ಲಿ ಕೆಲಸ ಮಾಡುತ್ತಿದೆ. ಬಿಜೆಪಿ ಸದಾ ಸಂಸ್ಕೃತಿಯ ಬಗ್ಗೆ ಮಾತನಾಡುತ್ತದೆ. ಅದಕ್ಕೆ ಬದ್ಧವಾಗಿ ಪುರಾತತ್ವ ಇಲಾಖೆಗೆ ಕಾಯಕಲ್ಪ ನೀಡಲು ಮುಂದಾಗುತ್ತಿಲ್ಲ ಎಂದು ಕೆ.ಕೆ.ಮೊಹಮ್ಮದ್ ಅಭಿಪ್ರಾಯಪಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.