ADVERTISEMENT

ಉಪ ಚುನಾವಣೆಗಳಲ್ಲಿ ಕೆಆರ್‌ಎಸ್‌ ಸ್ಪರ್ಧೆ

ಕರ್ನಾಟಕ ರಾಷ್ಟ್ರಸಮಿತಿ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2019, 15:34 IST
Last Updated 21 ಆಗಸ್ಟ್ 2019, 15:34 IST
ಬುಧವಾರ ಸುದ್ದಿಗೋಷ್ಠಿಯಲ್ಲಿ ಕೆಆರ್‌ಎಸ್‌ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಮಾತನಾಡಿದರು
ಬುಧವಾರ ಸುದ್ದಿಗೋಷ್ಠಿಯಲ್ಲಿ ಕೆಆರ್‌ಎಸ್‌ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಮಾತನಾಡಿದರು   

ಉಡುಪಿ: ರಾಜ್ಯದಲ್ಲಿ ಸ್ವಚ್ಛ, ಪ್ರಾಮಾಣಿಕ ಹಾಗೂ ಜನಪರ ರಾಜಕಾರಣ ಮಾಡಲು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವನ್ನು ಸ್ಥಾಪಿಸಲಾಗಿದೆ. ಮುಂಬರುವ 17 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಹಾಗೂ ಪಾಲಿಕೆ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ಕರ್ನಾಟಕ ರಾಷ್ಟ್ರಸಮಿತಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕ್ಷುಲ್ಲಕ ರಾಜಕಾರಣದಿಂದ ಮಿತಿಮೀರಿದ ಭ್ರಷ್ಟಾಚಾರ, ಕೌಟುಂಬಿಕ ರಾಜಕಾರಣ ಹೆಚ್ಚಾಗಿದೆ. ರಾಜ್ಯದ ಜೆಸಿಬಿ ಪಕ್ಷಗಳು (ಜೆಡಿಎಸ್‌, ಕಾಂಗ್ರೆಸ್‌, ಬಿಜೆಪಿ) ಅಕ್ರಮ, ಸ್ವಜನ ಪಕ್ಷಪಾತ, ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿ ರಾಜ್ಯವನ್ನು ಹಾಳು ಮಾಡಿದ್ದಾರೆ. ಇದಕ್ಕೆ ವಿರುದ್ಧವಾಗಿ ಕೆಆರ್‌ಎಸ್‌ ಪ್ರಾದೇಶಿಕ ಪಕ್ಷ ಜನರ ಆಶೋತ್ತರಗಳಿಗೆ ಸ್ಪಂದಿಸಲಿದೆ ಎಂದರು.

ಪ್ರಾಮಾಣಿಕತೆ,ಜನಪರ ಚಿಂತನೆಯುಳ್ಳ ಹಾಗೂ ಯೋಗ್ಯತೆ ಇರುವ ವ್ಯಕ್ತಿಗಳಿಗೆ ಪಕ್ಷ ಮುಂಬರುವ ಚುನಾವಣೆಗಳಿಗೆ ಟಿಕೆಟ್‌ ನೀಡಲಿದೆ. ಪಕ್ಷದ ಸಿದ್ಧಾಂತಗಳನ್ನು ಒಪ್ಪಿ ಬರುವ ಎಲ್ಲ ಕಾರ್ಯಕರ್ತರಿಗೂ ಸ್ವಾಗತವಿದೆ ಎಂದರು.

ADVERTISEMENT

ಸಾರ್ವಜನಿಕರ ದೇಣಿಗೆಯಿಂದಲೇ ಮುಂಬರುವ ಚುನಾವಣೆಗಳನ್ನು ಎದುರಿಸಲಾಗುವುದು. ಮತದಾರರನ್ನು ಚುನಾವಣಾ ರಾಜಕಾರಣದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂಬುದು ಪಕ್ಷದ ಉದ್ದೇಶ. ಹಣ, ಹೆಂಡ ಹಂಚುವುದಿಲ್ಲ. ಖರ್ಚಿನ ಲೆಕ್ಕಪತ್ರಗಳು ಸಂಪೂರ್ಣ ಪಾರದರ್ಶಕವಾಗಿರಲಿವೆ ಎಂದರು.

ಕೆಆರ್‌ಎಸ್‌ ಪಕ್ಷದ ರಾಜ್ಯ ಉಪಾಧ್ಯಕ್ಷ ಅಮೃತ್ ಶೆಣೈ ಮಾತನಾಡಿ, ಸಮಾನ ಮನಸ್ಕರೆಲ್ಲ ಸೇರಿಕೊಂಡು ಪಕ್ಷವನ್ನು ಕಟ್ಟಲಾಗಿದೆ. ಮುಂದೆ, ಉಡುಪಿಯಲ್ಲಿ ಪಕ್ಷವನ್ನು ಸಂಘಟಿಸಲಾಗುವುದು ಎಂದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಸಿಗಲಿಲ್ಲ ಎಂದು ಬಂಡಾಯ ಏಳಲಿಲ್ಲ. ಕರಾವಳಿಯಲ್ಲಿ ನೆಲೆಯೇ ಇಲ್ಲದ ಜೆಡಿಎಸ್‌ಗೆ ಉಡುಪಿ–ಚಿಕ್ಕಮಗಳೂರು ಕ್ಷೇತ್ರ ಬಿಟ್ಟುಕೊಟ್ಟಿದ್ದರಿಂದ ಪಕ್ಷೇತ್ತರನಾಗಿ ಸ್ಪರ್ಧಿಸಬೇಕಾಯಿತು ಎಂದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಲಿಂಗೇಗೌಡ, ದೀಪಕ್, ಅರವಿಂದ್, ಪಾಪಣ್ಣ, ಶಾಹಿದ್ ಅಲಿ, ಶಿಫಾನ್‌, ರಫೀಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.