
ಕುಂದಾಪುರ: ಹೇರಿಕುದ್ರು ಬಸ್ ನಿಲ್ದಾಣದಲ್ಲಿ ಕೆಎಸ್ಆರ್ಟಿಸಿ ಬಸ್ಗಳು ನಿಲುಗಡೆಗೆ ಒತ್ತಾಯಿಸುತ್ತಿದ್ದರೂ, ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಸಭೆಯಲ್ಲಿ ಸಮಸ್ಯೆ ಹೇಳಿದರೆ ಅಧಿಕಾರಿಗಳು ಅದನ್ನು ಇತ್ಯರ್ಥಗೊಳಿಸುವ ಗೋಜಿಗೆ ಹೋಗುವುದಿಲ್ಲ. ಇದು ಹೀಗೆಯೇ ಮುಂದುವರಿದರೆ ನಾನು ಮುಂದಿನ ಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇರಿಕುದ್ರು ಅಭಿಜಿತ್ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದರು.
ಇಲ್ಲಿನ ತಾಲ್ಲೂಕು ಪಂಚಾಯಿತಿಯ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಗುರುವಾರ ನಡೆದ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಕುಂದಾಪುರ ತಾಲ್ಲೂಕಿಗೆ ವಿವಿಧ ಗ್ಯಾರಂಟಿ ಯೋಜನೆಗಳಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ ಒಟ್ಟು ₹11,10,20,112 ಬಂದಿದ್ದು, ಗೃಹಲಕ್ಷ್ಮಿ ಯೋಜನೆಯಲ್ಲಿ ₹86,70,000, ಯುವನಿಧಿಯಲ್ಲಿ ₹53,07,000, ಗೃಹಜ್ಯೋತಿಯಲ್ಲಿ ₹4,32,05,273, ಶಕ್ತಿ ಯೋಜನೆಯಲ್ಲಿ ₹2,79,62,839, ಅನ್ನಭಾಗ್ಯದಲ್ಲಿ ₹2,58,75,000 ಬಂದಿದೆ. ಈವರೆಗೆ ಒಟ್ಟು ₹420,44,02,072 ಬಂದಿದೆ ಎಂದರು.
ಗಂಗೊಳ್ಳಿ-ಕುಂದಾಪುರ ಮಾರ್ಗದಲ್ಲಿ ಸಂಚರಿಸುವ ಸರ್ಕಾರಿ ಬಸ್ಗಳಲ್ಲಿ ಸಿಬ್ಬಂದಿ ಅನುಚಿತವಾಗಿ ವರ್ತಿಸುತ್ತಿದ್ದು, ಬಸ್ಸಿನಲ್ಲಿ ಪ್ರಯಾಣಿಕರ ಎದುರಲ್ಲೇ ಉಪಹಾರ ಮಾಡುತ್ತಾರೆ ಎಂದು ಸದಸ್ಯ ಜಹೀರ್ ನಾಕುದಾ ಆರೋಪಿಸಿದರು. ಸರ್ಕಾರದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ಅಧಿಕಾರಿಗಳೆ ಅಡ್ಡಿಯಾಗುತ್ತಿದ್ದಾರೆ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಕುಟುಂಬಕ್ಕೆ ಗೃಹಜ್ಯೋತಿ ಯೋಜನೆ ಉಪಯೋಗ ದೊರೆಯುತ್ತಿಲ್ಲ ಎಂದು ಜಹೀರ್ ನಾಕುದಾ ಹೇಳಿದರು. ಪ್ರಸಕ್ತ ಸಾಲಿನಲ್ಲಿ 200 ಯೂನಿಟ್ಕ್ಕಿಂತ ಕಡಿಮೆ ಬಳಸಿದ್ದರೂ 2022-23ನೇ ಸಾಲಿನ ಒಂದು ವರ್ಷದ ಸರಾಸರಿ 200 ಯೂನಿಟ್ ಮೀರಿದರೆ ಈಗ ಅದರ ಪ್ರಯೋಜನ ದೊರೆಯುದಿಲ್ಲ. ಗೃಹಜ್ಯೋತಿ ಯೋಜನೆಯಲ್ಲಿ ಹೊಸದಾಗಿ ನೊಂದಣಿ ಮಾಡಿಸಿದರೆ 58 ಯೂನಿಟ್ ಸಬ್ಸಿಡಿ ದೊರೆಯುತ್ತದೆ ಎಂದು ಮೆಸ್ಕಾಂ ಅಧಿಕಾರಿಗಳು ಹೇಳಿದರು.
ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಜೂನ್ ತಿಂಗಳಿನಲ್ಲಿ ಸ್ವಲ್ಪ ಅನುದಾನ ಬಾಕಿಯಿದ್ದು, ಜುಲೈ ತಿಂಗಳಿನಲ್ಲಿ ಶೇ.50ರಷ್ಟು ಫಲಾನುಭವಿಗಳಿಗೆ ಅನುದಾನ ಪಾವತಿಯಾಗಿಲ್ಲ. ಸರ್ಕಾರದ ಆದೇಶದಂತೆ ಕುಂದಾಪುರದಿಂದ 10 ಮತ್ತು ಬೈಂದೂರಿನಿಂದ 9 ಮಂದಿ ಆಯ್ಕೆ ಸೇರಿದಂತೆ ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಸಹಕಾರಿ ಸಂಘ ರಚನೆಗೆ ಜಿಲ್ಲೆಯಿಂದ 65 ಮಂದಿ ಆಯ್ಕೆ ಮಾಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಮಾಹಿತಿ ನೀಡಿದರು. ಪಡಿತರ ಚೀಟಿ ರದ್ದತಿ ಮತ್ತು ಬದಲಾವಣೆ ಬಗ್ಗೆ ಮಾಹಿತಿ ನೀಡಿದ ಇಲಾಖೆ ಅಧಿಕಾರಿ ಸುರೇಶ್ ಕುಮಾರು 800 ಪಡಿತರ ಚೀಟಿಗಳು ಬಿಪಿಎಲ್ನಿಂದ ಎಪಿಎಲ್ ಆಗಿದೆ. ಎಪಿಎಲ್ ಪಡಿತರ ಚೀಟಿದಾರರಿಗೆ ಅಕ್ಕಿ ವಿತರಿಸಲು ಮನವಿ ಸಲ್ಲಿಸಲಾಗಿದೆ. ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಕೆಗೆ ಇನ್ನ ಅವಕಾಶ ಮಾಡಿಕೊಟ್ಟಿಲ್ಲ. ಡಿಸೆಂಬರಿನಲ್ಲಿ ಇದು ಪ್ರಾರಂಭವಾಗಬಹುದು ಎಂದು ಭರವಸೆ ವ್ಯಕ್ತಪಡಿಸಿದರು.
ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ನಾರಾಯಣ ಆಚಾರ್ ಕೋಣಿ, ವಾಣಿ ಆರ್.ಶೆಟ್ಟಿ, ಆಶಾ ಕರ್ವಾಲೋ, ಗಣೇಶ ಕುಂಭಾಶಿ, ಚಂದ್ರ ಕಾಂಚನ್ ಇದ್ದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.