ADVERTISEMENT

ಕುಂದಾಪುರ: ರಸ್ತೆಯೇ ಪಾದಚಾರಿ ದಾರಿ!

ಚಿಕ್ಕನ್‌ಸಾಲ್‌ ರಸ್ತೆಯ ಬದಿಗಳಿಗೆ ಇಂಟರ್‌ಲಾಕ್‌ ಅಳವಡಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2022, 6:19 IST
Last Updated 21 ಸೆಪ್ಟೆಂಬರ್ 2022, 6:19 IST
ಕುಂದಾಪುರದ ಚಿಕ್ಕನ್‌ಸಾಲ್‌ ರಸ್ತೆಯಲ್ಲಿ ಪಾದಚಾರಿಗಳಿಗೆ ಸುಗಮ ಸಂಚಾರಕ್ಕೆ ತೊಡಕಾಗಿರುವ ರಸ್ತೆಯ ಬದಿಗಳು.
ಕುಂದಾಪುರದ ಚಿಕ್ಕನ್‌ಸಾಲ್‌ ರಸ್ತೆಯಲ್ಲಿ ಪಾದಚಾರಿಗಳಿಗೆ ಸುಗಮ ಸಂಚಾರಕ್ಕೆ ತೊಡಕಾಗಿರುವ ರಸ್ತೆಯ ಬದಿಗಳು.   

ಕುಂದಾಪುರ: ನಗರದ ಪ್ರಮುಖ ರಸ್ತೆಗಳಲ್ಲಿ ಒಂದಾಗಿರುವ ಚಿಕ್ಕನ್‌ಸಾಲ್‌ ರಸ್ತೆಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರನ್ನು ದಾಟಿ ಹಿಂದೂ ಸ್ಮಶಾನಕ್ಕೆ ತೆರಳುವ ರಸ್ತೆಯ ಬದಿಗಳಲ್ಲಿನ ಅವ್ಯವಸ್ಥೆಗಳಿಂದಾಗಿ ಈ ದಾರಿಯಲ್ಲಿ ಸಾಗುವವರು ವಾಹನಗಳ ದಟ್ಟಣೆಯ ನಡುವೆ ರಸ್ತೆಯಲ್ಲೇ ನಡೆದಾಡಬೇಕಾದ ಸ್ಥಿತಿ ಇದೆ.

ಕುಂದಾಪುರದಿಂದ ಆನಗಳ್ಳಿ ಮಾರ್ಗವಾಗಿ ಬಸ್ರೂರ ಸಂಪರ್ಕಿಸುವ ಈ ರಸ್ತೆಯಲ್ಲಿ ಪ್ರತಿದಿನ ದೊಡ್ಡ ಸಂಖ್ಯೆಯಲ್ಲಿ ವಾಹನಗಳು ಹಾಗೂ ಸಾರ್ವಜನಿಕರು ಸಂಚರಿಸುತ್ತಾರೆ. ತಾಲ್ಲೂಕು ಕೇಂದ್ರದ ಪ್ರಮುಖ ಹಿಂದೂ ಸ್ಮಶಾನ ಹಾಗೂ ಜಿಲ್ಲೆಯ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿರುವ ಡಾ.ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಈ ಪರಿಸರದಲ್ಲಿಯೇ ಇರುವುದರಿಂದ ಸಹಜವಾಗಿ ವಾಹನ ಹಾಗೂ ಸಾರ್ವಜನಿಕರ ಸಂಖ್ಯೆ ಹೆಚ್ಚಿದೆ.

ಇಲ್ಲಿನ ರಸ್ತೆಗಳು ಒಳ್ಳೆಯ ಸ್ಥಿತಿಯಲ್ಲಿ ಇದ್ದರೂ, ರಸ್ತೆಯ ಬದಿಯಲ್ಲಿ ಹುಲ್ಲು, ಕಸ-ಕಡ್ಡಿ ಇರುವುದರಿಂದಾಗಿ, ರಸ್ತೆಯ ಬದಿಯಲ್ಲಿ ನಡೆದಾಡಲು ಕಷ್ಟಪಡಬೇಕಾದ ಸ್ಥಿತಿ ಇದೆ. ಮಳೆಗಾಲದ ಅವಧಿಯಲ್ಲಿ ಈ ಭಾಗಗಳಲ್ಲಿ ಕಾಲಿಡುವುದು ಅಸಾಧ್ಯವಾಗಿದೆ. ಈ ಕಾರಣಕ್ಕಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್ಸಿನಿಂದ ಇಳಿದು ಕಾಲೇಜಿಗೆ ನಡೆದುಕೊಂಡು ಬರುವ ವಿದ್ಯಾರ್ಥಿಗಳು ರಸ್ತೆಯ ಬದಿಗಳನ್ನು ಬಿಟ್ಟು ಮುಖ್ಯ ರಸ್ತೆಯಲ್ಲಿಯೇ ನಡೆಯಬೇಕಾದ ಸ್ಥಿತಿ ಇದೆ. ಇದರಿಂದ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಪ್ರಯಾಸವಾಗಿ ಸಂಚರಿಸಬೇಕು, ಜೊತೆಯಲ್ಲಿ ಅಪಘಾತದ ಭೀತಿಯೂ ಇದೆ.

ADVERTISEMENT

ರಸ್ತೆಯ ಎರಡು ಬದಿಗಳಲ್ಲಿ ಇರುವ ಜಾಗನ್ನು ಸ್ವಚ್ಛಗೊಳಿಸಿ, ಅದಕ್ಕೆ ಇಂಟರ್‌ಲಾಕ್‌ ಅಳವಡಿಸುವುದರಿಂದ ಪರಿಸರದ ಸೌಂದರ್ಯ ಹೆಚ್ಚುವುದರ ಜತೆಯಲ್ಲಿ, ರಸ್ತೆಯೂ ವಿಸ್ತಾರವಾಗುತ್ತದೆ, ರಸ್ತೆಯ ಮೇಲಿನ ಒತ್ತಡಗಳು ಕಡಿಮೆಯಾಗುತ್ತದೆ ಎನ್ನುವ ಅಭಿಪ್ರಾಯ ಸ್ಥಳೀಯರಲ್ಲಿದೆ.

ಈ ಕುರಿತು ಸಂಘಟಿತರಾಗಿರುವ ಸಂಗಮ್ ಫ್ರೆಂಡ್ಸ್ ಸಂಘಟನೆಯ ಯುವಕರು ಸ್ಥಳೀಯ ಪುರಸಭಾ ಸದಸ್ಯರ ಮೂಲಕ ಪುರಸಭೆಗೆ ಮನವಿ ನೀಡಲು ಸಿದ್ಧತೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.