
ಕುಂದಾಪುರ: ಯಕ್ಷಗಾನವು ಮನಸ್ಸಿನ ಏಕಾಗ್ರತೆಗೆ ಅದ್ಭುತ ಔಷಧಿ ಎಂದು ಸೌಕೂರು ದೇವಸ್ಥಾನದ ಮೊಕ್ತೇಸರ ಕಿಶನ್ ಹೆಗ್ಡೆ ಪಳ್ಳಿ ಹೇಳಿದರು.
ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ 50ನೇ ವರ್ಷದ ರಾಜ್ಯೋತ್ಸವ ಯಕ್ಷಗಾನ ತಾಳಮದ್ದಳೆ ಪ್ರಯುಕ್ತ ಭಾನುವಾರ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ವಿದ್ಯಾರ್ಥಿಗಳಿಗೆ ನಡೆದ ಅಂತರ್ ಕಾಲೇಜು ಬಡಗುತಿಟ್ಟು ಯಕ್ಷಗಾನ ಸ್ಪರ್ಧೆ ‘ಬಂಗಾರದ ಹೆಜ್ಜೆ’ ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಯ ಕಳೆಯಲು ಯಕ್ಷಗಾನ ಕಲಿಯಬೇಡಿ. ಎಲ್ಲಾ ಯೋಗಾಸನಗಳ ಪರಿಚಯ ಯಕ್ಷಗಾನದಿಂದ ಸಿಗುತ್ತದೆ. ದೇಹಕ್ಕೆ ಉತ್ತಮ ಆರೋಗ್ಯ ಮತ್ತು ವ್ಯಾಯಾಮವನ್ನು ಕೊಡುತ್ತದೆ. ಅಂತೆಯೇ ಮಾನಸಿಕವಾಗಿ ಆತ್ಮವಿಶ್ವಾಸ ನೀಡುವುದಲ್ಲದೆ, ದೃಢತೆಗೂ ಸಹಕಾರಿ. ಹಾಗಾಗಿ ವಿದ್ಯಾರ್ಥಿಗಳು ಯಕ್ಷಗಾನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಿ ಎಂದು ಕರೆ ನೀಡಿದರು.
ಪುರಸಭೆ ಅಧ್ಯಕ್ಷ ಮೋಹನದಾಸ ಶೆಣೈ ಮಾತನಾಡಿ, ರಾಮಾಯಣ ಮತ್ತು ಮಹಾಭಾರತದ ಕಥೆಗಳನ್ನು ಆಡುಭಾಷೆಯ ರೂಪದಲ್ಲಿ ಜನರಿಗೆ ಅರ್ಥವಾಗುವಂತೆ ಸರಳವಾಗಿ ಉತ್ತಮ ಸಂದೇಶ ನೀಡುವ ಕಲೆ ಯಕ್ಷಗಾನ. ಅದನ್ನು ಉಳಿಸಿ ಬೆಳೆಸುವ ಈ ಪ್ರಯತ್ನ ನಿಜಕ್ಕೂ ಶ್ಲಾಘನೀಯ ಎಂದರು.
ಕಾಲೇಜು ವಿಶ್ವಸ್ಥ ಮಂಡಳಿಯ ಸದಸ್ಯ ನೇರಂಬಳ್ಳಿ ರಾಘವೇಂದ್ರ ರಾವ್ ಮಾತನಾಡಿ, ಈ ಅದ್ಭುತ ಯಕ್ಷಗಾನ ಕಲೆ ಇಲ್ಲಿನ ಜನಸಾಮಾನ್ಯರ ಜೀವನದ ಅವಿಭಾಜ್ಯ ಅಂಗವಾಗಿದೆ. ದೇವರಿಗೆ ಮತ್ತು ಜನರಿಗೆ ಮಾತಿನ ಮೂಲಕ ತಮ್ಮ ಭಕ್ತಿ ಮತ್ತು ಆರಾಧನೆಯನ್ನು ತಿಳಿಸುವ ವಿಶಿಷ್ಟ ಕಲೆ ಯಕ್ಷಗಾನ ಎಂದರು.
ಕಾಲೇಜಿನ ವಿಶ್ವಸ್ಥ ಮಂಡಳಿಯ ಉಪಾಧ್ಯಕ್ಷ ಕೆ.ಶಾಂತಾರಾಮ್ ಪ್ರಭು ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿಯ ಕಾರ್ಯದರ್ಶಿ ಯು.ಎಸ್ ಶೆಣೈ, ಸಂಚಾಲಕ ಶಶಾಂಕ್ ಪಟೇಲ್ ಇದ್ದರು.
ಪದವಿ ಕಾಲೇಜಿನ ಪ್ರಾಂಶುಪಾಲ ಶುಭಕರಾಚಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಂಪ್ಯೂಟರ್ ಸೈನ್ಸ್ ವಿಭಾಗದ ಉಪನ್ಯಾಸಕ ರಾಮಚಂದ್ರ ಆಚಾರ್ಯ ನಿರೂಪಿಸಿದರು. ಜೀವಶಾಸ್ತ್ರ ವಿಭಾಗದ ಉಪನ್ಯಾಸಕಿ ಸರೋಜ ಎಂ. ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.