ADVERTISEMENT

ಪಶ್ಚಿಮಘಟ್ಟ ಮಾಫಿಯಾಗೆ ಸರ್ಕಾರದಿಂದಲೇ ಪರವಾನಗಿ

ನೆಲ–ಜಲ–ಜೀವನ ಸಂವಾದ ಕಾರ್ಯಕ್ರಮದಲ್ಲಿ ಪರಿಸರ ತಜ್ಞ ದಿನೇಶ್ ಹೊಳ್ಳ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2019, 14:15 IST
Last Updated 30 ಆಗಸ್ಟ್ 2019, 14:15 IST
ಎಂಜಿಎಂ ಕಾಲೇಜಿನಲ್ಲಿ ಶುಕ್ರವಾರ ಕರಾವಳಿ ನೆಲ–ಜಲ–ಜೀವನ ವಿಷಯದ ಕುರಿತು ತಜ್ಞರೊಂದಿಗೆ  ವಿಚಾರ ಸಂಕಿರಣ ನಡೆಯಿತು.
ಎಂಜಿಎಂ ಕಾಲೇಜಿನಲ್ಲಿ ಶುಕ್ರವಾರ ಕರಾವಳಿ ನೆಲ–ಜಲ–ಜೀವನ ವಿಷಯದ ಕುರಿತು ತಜ್ಞರೊಂದಿಗೆ  ವಿಚಾರ ಸಂಕಿರಣ ನಡೆಯಿತು.   

ಉಡುಪಿ: ಪಶ್ಚಿಮಘಟ್ಟದ ಮೇಲಿನ ಮಾನವ ಹಸ್ತಕ್ಷೇಪದಿಂದ ಚಾರ್ಮಾಡಿ ಬೆಟ್ಟ ಕುಸಿದಿದೆ. ನದಿ ಮೂಲಗಳಿಗೆ ಹಾನಿಯಾಗಿದೆ ಎಂದು ಪರಿಸರ ತಜ್ಞ ದಿನೇಶ್ ಹೊಳ್ಳ ಅಭಿಪ್ರಾಯಪಟ್ಟರು.

ಎಂಜಿಎಂ ಕಾಲೇಜಿನಲ್ಲಿ ಶುಕ್ರವಾರ ಕರಾವಳಿ ನೆಲ–ಜಲ–ಜೀವನ ಕುರಿತು ತಜ್ಞರೊಂದಿಗೆ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಪಶ್ಚಿಮಘಟ್ಟಗಳ ಧಾರಣ ಸಾಮರ್ಥ್ಯವನ್ನೂ ಮೀರುವಂತಹ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಹೊರಟಿರುವುದೇ, ಜಲಸ್ಫೋಟದಂತಹ ವಿಪತ್ತುಗಳಿಗೆ ಕಾರಣವಾಗಿದೆ.ಈಚೆಗೆ ಕರಾವಳಿಗೆ ಬಂದಿದ್ದು, ನೆರೆಯಲ್ಲ; ಅದು ಜಲಸ್ಫೋಟ. ಕಳೆದ ವರ್ಷ ಮಡಿಕೇರಿಗೆ ಬಂದಿದ್ದ ದುಸ್ಥಿತಿ ಈಗ ಪಶ್ಚಿಮಘಟ್ಟಕ್ಕೆ ಬಂದಿದೆ ಎಂದರು.‌

ADVERTISEMENT

ಪಶ್ಚಿಮಘಟ್ಟದ ಮೇಲ್ಮೈನ ಹುಲ್ಲುಗಾವಲು ರಕ್ಷಣಾ ಹೊದಿಕೆಯಂತೆ ಕಾರ್ಯ ನಿರ್ವಹಿಸುತ್ತದೆ. ಘಟ್ಟದ ಕೆಳಭಾಗದಲ್ಲಿ ಮಳೆ ನೀರನ್ನು ಹಿಡಿದಿಡುವ ಶೋಲಾ ಅರಣ್ಯವಿದೆ. ಇದರಿಂದ ವರ್ಷಪೂರ್ತಿ ಇಲ್ಲಿ ಹರಿಯುವ ನದಿಗಳು ಜೀವಂತವಾಗಿರುತ್ತವೆ.

ಆದರೆ, ಈಚೆಗೆ ಪಶ್ಚಿಮಘಟ್ಟದ ಮೇಲ್ಮೈನಲ್ಲಿ ರೆಸಾರ್ಟ್‌, ಹೋಂಸ್ಟೇ, ಗಣಿಗಾರಿಕೆ, ಜಲವಿದ್ಯುತ್ ಯೋಜನೆಗಳಿಗೆ ಅನುಮತಿ ನೀಡುತ್ತಿರುವ ಪರಿಣಾಮ, ಮಳೆಯ ನೀರು ಬೆಟ್ಟದ ನೆತ್ತಿಯ ಒಳಗೆ ಇಳಿದು ಜಲಸ್ಫೋಟಗಳು ಸಂಭವಿಸುತ್ತಿವೆ, ಭೂಕುಸಿತಗಳಾಗುತ್ತಿವೆ ಎಂದರು.

ರಾಜ್ಯ ಸರ್ಕಾರದ ಅವೈಜ್ಞಾನಿಕ ಎತ್ತಿನಹೊಳೆ ಯೋಜನೆ ಕಾಮಗಾರಿ ಪ್ರದೇಶದಲ್ಲೇ ಭೂಕುಸಿತವಾಗಿರುವುದು ಪ್ರಕೃತಿ ಮೇಲಿನ ದೌರ್ಜನ್ಯಕ್ಕೆ ಸಾಕ್ಷಿ. ಈ ಬಾರಿಯ ಮಳೆಗಾಲದಲ್ಲಿ ಎತ್ತಿನ ಹೊಳೆ ಅಚ್ಚುಕಟ್ಟಿನಲ್ಲಿ ನಿರೀಕ್ಷಿತ ನೀರು ಸಿಕ್ಕಿಲ್ಲ. ಇಷ್ಟಾದರೂ ಸರ್ಕಾರಕ್ಕೆ ಯೋಜನೆಯ ಮೇಲಿನ ಮೋಹ ಕಡಿಮೆಯಾಗಿಲ್ಲ ಎಂದರು.

ಎತ್ತಿನಹೊಳೆ ಯೋಜನೆ ಮಾಡುವವರಿಗೆ ನದಿಯ ಮೂಲ ಗೊತ್ತಿಲ್ಲ, ಅಚ್ಚುಕಟ್ಟು ವ್ಯಾಪ್ತಿಯ ಅರಿವಿಲ್ಲ, ಉಪ ನದಿಗಳ ಮಾಹಿತಿ ಇಲ್ಲ. ಆದರೂ ₹ 13,000 ಕೋಟಿಯನ್ನು ವೆಚ್ಚ ಮಾಡಲಾಗುತ್ತಿದೆ. ಇದೊಂದು ದುಡ್ಡು ಮಾಡುವ ಯೋಜನೆಯಷ್ಟೆ ಎಂದು ದಿನೇಶ್ ಹೊಳ್ಳ ಟೀಕಿಸಿದರು.

ಕಾರ್ಯಕ್ರಮದಲ್ಲಿ ವನ್ಯಜೀವಿ ತಜ್ಞರಾದ ಕೃಪಾಕರ, ಸೇನಾನಿ, ವನ್ಯಜೀವಿ ಜೀವಶಾಸ್ತ್ರಜ್ಞ ಎಸ್‌.ಎಸ್‌.ಸುನೀಲ್‌, ಉರಗ ತಜ್ಞ ಗುರುರಾಜ್ ಸನೀಲ್‌, ಪಕ್ಷಿ ತಜ್ಷ ಶಿವಶಂಕರ್ ಮಂಜುನಾಥ್‌, ಪರಿಸರ ಚಿಂತಕ ಪುರುಷೋತ್ತಮ ಅಡ್ವೆ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.