ಉಡುಪಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೊದಲು ಬಿಜೆಪಿಯ ಸಂಪ್ರದಾಯಗಳನ್ನು ಕಲಿಯಲಿ ಎಂದು ಬಿಜೆಪಿ ಮುಖಂಡ ಪ್ರಮೋದ್ ಮಧ್ವರಾಜ್ ಸಲಹೆ ನೀಡಿದರು.
‘ಕಾಂಗ್ರೆಸ್ ತೊರೆದಿದ್ದಕ್ಕೆ ಮಧ್ವರಾಜ್ ಪಶ್ಚಾತ್ತಾಪ ಪಡಲಿದ್ದಾರೆ’ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಶನಿವಾರ ತಿರುಗೇಟು ನೀಡಿದ ಅವರು ‘ಬಿಜೆಪಿ ಹಾಗೂ ಕಾಂಗ್ರೆಸ್ ಸಂಪ್ರದಾಯಗಳು ಬೇರೆ. ಕಾಂಗ್ರೆಸ್ ಪಕ್ಷದ ಸಮಾರಂಗಳಲ್ಲಿ ಎಲ್ಲರೂ ವೇದಿಕೆ ಹತ್ತುತ್ತಾರೆ. ಆದರೆ, ಬಿಜೆಪಿ ವೇದಿಕೆಗಳಲ್ಲಿ ಶಿಸ್ತು ಪಾಲನೆಯಾಗುತ್ತದೆ. ಕೆಲವರು ಮಾತ್ರ ವೇದಿಕೆಯಲ್ಲಿರುತ್ತಾರೆ. ಮಂತ್ರಿಗಳು, ಸಂಸದರು, ಶಾಸಕರು ಕೂಡ ಕೆಳಗೆ ಕೂರುತ್ತಾರೆ ಎಂದರು.
ವೇದಿಕೆ ಹುಡುಕಿಕೊಂಡು ಹೋಗುವ ಜಾಯಮಾನ ನನ್ನದ್ದಲ್ಲ. ವೇದಿಕೆ ಬಿಟ್ಟು ಕೆಳಗೆ ಕೂರಲು ಯಾವ ಮುಜಗರ, ಬೇಸರ ಇಲ್ಲ. ಕಾಂಗ್ರೆಸ್ ತೊರೆದಿದ್ದಕ್ಕೆ ನಾನು ಪಶ್ಚಾತ್ತಾಪ ಪಡುವುದಿಲ್ಲ. ಆದರೆ, ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಯ ಸಂದರ್ಭ ಕಾಂಗ್ರೆಸ್ ಪಶ್ಚಾತ್ತಾಪ ಪಡುವ ದಿನಗಳು ದೂರವಿಲ್ಲ ಎಂದು ಪ್ರಮೋದ್ ಕುಟುಕಿದರು.
2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬಿಡ್ತು ಎಂದು ದುರಂಹಕಾರ ಪ್ರದರ್ಶಿಸುತ್ತಿರುವ ಕಾಂಗ್ರೆಸ್ ನಾಯಕರು ಕೂಡ ಪಶ್ಚಾತ್ತಾಪ ಪಡಲಿದ್ದಾರೆ ಎಂದು ವ್ಯಂಗ್ಯವಾಡಿದರು.
ಸಾಮಾನ್ಯವಾಗಿ ಸ್ಥಳೀಯ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುತ್ತದೆ. ಆದರೆ, ಕಾಂಗ್ರೆಸ್ನಲ್ಲಿ ಯಾರು ಬೇಕಾದರೂ ಬರಬಹುದು, ಹೋಗಬಹುದು ಎಂದು ವ್ಯಂಗ್ಯವಾಡಿದ ಮಧ್ವರಾಜ್, ಸ್ಥಳೀಯ ಬಿಜೆಪಿ ಮುಖಂಡರ ಹಾಗೂ ಕಾರ್ಯಕರ್ತರ ಒಪ್ಪಿಗೆ ಪಡೆದು ಶೀಘ್ರ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸೇರಲಿದ್ದಾರೆ. ಈ ಸಂಬಂಧ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅವರೊಂದಿಗೆ ಮಾತುಕತೆ ನಡೆದಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.